ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ರೂವಾರಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: 35 ವರ್ಷಗಳ ಕಾಲ ತಮ್ಮ ಪ್ರಾಮಾಣಿಕ ಬೋಧನಾ ಕೌಶಲ್ಯದ ಮೂಲಕ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿ ಅನುಪಮ ಸೇವೆ ಸಲ್ಲಿಸಿದ ಸತ್ತಾರ ಎಚ್.ಬಡೇಖಾನವರ ಮಾರ್ಚ್ 29ರಂದು ನಿವೃತ್ತಿ ಹೊಂದಲಿದ್ದು, ಇವರಿಗೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಿಂದ ಸನ್ಮಾನ ಜರುಗಲಿದೆ.

Advertisement

ಹುಸೇನಸಾಬ-ಮಹಬೂಬಿ ಅವರು ಪ್ರೊ. ಸತ್ತಾರ ಬಡೇಖಾನರ ತಂದೆ-ತಾಯಿಗಳು. ಗದಗ ನಗರದಲ್ಲಿ ಸರಕಾರಿ ಪ್ರಾಥಮಿಕ, ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ, ಎಚ್‌ಸಿಇಎಸ್ ಕಾಲೇಜಿನಲ್ಲಿ ಪಿಯುಸಿ, ಎ.ಎಸ್.ಎಸ್ ಕಾಲೇಜಿನಲ್ಲಿ ಬಿ.ಕಾಂ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ, ಸ್ನಾತಕೋತ್ತರ ಪದವಿ ಮತ್ತು ಎಂಫಿಲ್ ಪಡೆದರು.

ಕರ್ನಾಟಕ ಲೋಕಸೇವಾ ಆಯೋಗ ಆಹ್ವಾನಿಸಿದ್ದ ಸರ್ಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರಾಗಿ 2009ರಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ಸ.ಪ್ರ.ದ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಷಯದ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿ 3 ವರ್ಷಗಳ ಸೇವೆಯ ನಂತರ 2015ರಲ್ಲಿ ಸ.ಪ್ರ.ದ ಮಹಿಳಾ ಕಾಲೇಜಿನಲ್ಲಿ 9 ವರ್ಷ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಬೇಟಗೇರಿಯ ವಿದ್ಯಾಭಾರತಿ ಪ.ಪೂ ಮಹಾವಿದ್ಯಾಲಯದಲ್ಲಿ 2 ವರ್ಷ, 1992ರಿಂದ 2006ರವರೆಗೆ ಗದಗಿನ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯಲ್ಲಿ 15 ವರ್ಷ, 2006ರಿಂದ 2009ರವರೆಗೆ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ 3 ವರ್ಷಗಳ ಕಾಲ ಹೀಗೆ ಒಟ್ಟೂ 35 ವರ್ಷಗಳ ಕಾಲ ನಿರಂತರವಾಗಿ ವಿದ್ಯಾರ್ಥಿಗಳ ಬದುಕನ್ನು ಕಟ್ಟಿದ ಶ್ರೇಯಸ್ಸು ಇವರದಾಗಿದೆ.

ಐಕ್ಯೂಎಸ್ ಸಂಯೋಜಕರಾಗಿ ಪದವಿ ವಿದ್ಯಾರ್ಥಿಗಳ ಹಿತ್ತಕ್ಕಾಗಿ ಉತ್ತಮ ಕಲಿಕಾ ವಾತಾವರಣ, ಗುಣಮಟ್ಟದ ಗ್ರಂಥಾಲಯ, ಉತ್ತಮ ಬೋಧನೆ, ಸಿಬ್ಬಂದಿ ವರ್ಗದ ಕಾರ್ಯಕ್ಷಮತೆಗೆ ಯುಜಿಸಿ ನ್ಯಾಕ್ ಪೀರ್ ಸಮಿತಿ ಬಿ ಮಾನ್ಯತೆ ಪಡೆಯುವಂತೆ ಮಾಡಿದ ಶ್ರೇಯಸ್ಸು ಇವರದಾಗಿದೆ.

ಸದಾ ತಮ್ಮನ್ನು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಿರಂತರವಾಗಿ ಶ್ರಮಿಸಿದರ ಫಲವಾಗಿ ಸಾವಿರಾರು ವಿದ್ಯಾರ್ಥಿಗಳು ಉನ್ನತ ಭವಿಷ್ಯ ಮತ್ತು ಉನ್ನತ ಉದ್ಯೋಗಗಳನ್ನು ಪಡೆಯುವಂತೆ ಮಾಡಿರುವ ಶ್ರೇಯಸ್ಸು ಹೊಂದಿದ್ದಾರೆ.

ಮಾರ್ಚ್ 29ರಂದು ಬೆಳಗ್ಗೆ 10.30ಕ್ಕೆ ಸ.ಪ್ರ.ದ ಮಹಿಳಾ ಕಾಲೇಜಿನಲ್ಲಿ ನಿವೃತ್ತರಾಗಲಿರುವ ಪ್ರೊ.ಸತ್ತಾರ ಬಡೇಖಾನ ಅವರನ್ನು ಸನ್ಮಾನಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ವಾಣಿಜ್ಯ ಕ್ಷೇತ್ರ ವಿವಿಧ ಆಯಾಮಗಳನ್ನು ಪಡೆಯುತ್ತಿರುವುದರಿಂದ ಉದ್ಯೋಗ ಅವಕಾಶಗಳನ್ನು ಪಡೆಯಲು ವಿದ್ಯಾರ್ಥಿಗಳು ನಿರಂತರ ಕಲಿಕೆಯನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರು ಸಹ ಹೊಸ ಹೊಸ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು.

– ಪ್ರೊ. ಸತ್ತಾರ ಬಡೇಖಾನ.

ಸ.ಪ್ರ.ದ ಮಹಿಳಾ ಕಾಲೇಜು, ಗದಗ.

 

ಪ್ರೊ. ಸತ್ತಾರ ಬಡೇಖಾನರು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಕಟ್ಟಲು ಪ್ರಾಮಾಣಿಕವಾಗಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳ ಪ್ರೀತಿಯ ಪ್ರಾಧ್ಯಾಪಕರಾಗಿ ನಿವೃತ್ತಿ ಅಂಚಿನವರೆಗೂ ಅನುಪಮ ಸೇವೆ ಸಲ್ಲಿಸಿದ ಶ್ರೇಯಸ್ಸು ಹೊಂದಿದ್ದಾರೆ.

 – ಪ್ರೊ. ಎಮ್.ಯು. ಹಿರೇಮಠ.

ಪ್ರಾಂಶುಪಾಲರು, ಸ.ಪ್ರ.ದ ಮಹಿಳಾ ಕಾಲೇಜು, ಗದಗ.


Spread the love

LEAVE A REPLY

Please enter your comment!
Please enter your name here