ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಆರಾಧ್ಯ ದೈವ ಪುಲಿಗೆರೆಯ ಶ್ರೀ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ನಿಮಿತ್ತ ಬುಧವಾರ ಗೋಧೂಳಿ ಸಮಯದಲ್ಲಿ ಅಪಾರ ಭಕ್ತ ಸಮೂಹದ ನಡುವೆ ಶ್ರೀ ಸೋಮೇಶ್ವರ ಮಹಾರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಬೆಳಗಿನಿಂದಲೇ ಮಹಿಳೆಯರು, ಮಕ್ಕಳು ಹೊಸ ಉಡುಗೆ ಧರಿಸಿ ದೇವಸ್ಥಾನಕ್ಕೆ ಆಗಮಿಸಿ ಸಾಕ್ಷಾತ್ ನಂದಿಯ ಮೇಲೆ ಕುಳಿತ ಶ್ರೀ ಸೋಮೇಶ್ವರನಿಗೆ ಶ್ರದ್ಧಾ-ಭಕ್ತಿಯಿಂದ ನಮಿಸಿದರು. ಹಣ್ಣು-ಕಾಯಿ ನೈವೇದ್ಯ ಮಾಡಿಸಿಕೊಂಡು ಬಳಿಕ ರಥಕ್ಕೆ ಉಡಿ ತುಂಬಿ, ಹೊಸ ವಸ್ತ್ರಾಭರಣಗಳನ್ನಿರಿಸಿ ಪೂಜಿಸಿದರು.
ಅಪಾರ ಭಕ್ತ ಸಮೂಹದೊಂದಿಗೆ ಜರುಗಿದ ಶ್ರೀ ಸೋಮೇಶ್ವರನ ಮಹಾರಥೋತ್ಸವಕ್ಕೆ ನಾಡಿನಾದ್ಯಂತ ಆಗಮಿಸಿದ್ದ ಭಕ್ತಗಣ ಸಾಕ್ಷಿಯಾಗಿತ್ತು. ಯುವಕರು ತೇರಿನ ಕಳಸಕ್ಕೆ ಗುರಿಯಿಟ್ಟು ಹಣ್ಣು, ಉತ್ತತ್ತಿ ಎಸೆಯುತ್ತಿದ್ದ ದೃಶ್ಯ ಕಂಡು ಬಂದಿತು. ನವ ದಂಪತಿಗಳು ತೇರಿನ ಕಳಸ ನೋಡಲು ಜಮಾಯಿಸಿದ್ದರು. ಮಹಾರಥೋತ್ಸವದ ಸಂದರ್ಭದಲ್ಲಿ ಶ್ರೀ ಸೋಮೇಶ್ವರ ದೇವಸ್ಥಾನದ ಜಾತ್ರಾ ಕಮಿಟಿ, ಸೇವಾ ಸಮಿತಿಯ ಸರ್ವ ಸದಸ್ಯರು, ಮುಖ್ಯ ಅರ್ಚಕರು, ಹಿರಿಯರು ನೇತೃತ್ವ ವಹಿಸಿ ನಿರ್ವಹಿಸಿದರು. ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.
ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯೇ ಸಂಪ್ರದಾಯದಂತೆ ಲಕ್ಷ್ಮೀದೇವಿ ಪೂಜೆ, ರಥಪೂಜೆ ಮತ್ತು ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು. ಗುರುವಾರ ಸಂಜೆ 5.30ಕ್ಕೆ ಕಡುಬಿನ ಕಾಳಗ, ಶುಕ್ರವಾರ ಸಂಜೆ ಓಕುಳಿ ಕಾರ್ಯಕ್ರದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.