ಬೆಂಗಳೂರು: ರಾಜ್ಯದ ಜನರಿಗೆ ಮಕ್ಮಲ್ ಟೋಪಿ ಹಾಕಿ ಅಧಿಕಾರಕ್ಕೆ ಬಂದ ಸರ್ಕಾರ ಐಸಿಯುನಲ್ಲಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನಾನೇ ಸಿಎಂ ಎನ್ನುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಎಲ್ಲಾ ದೇವರ ಮೊರೆ ಹೋಗುತ್ತಿದ್ದಾರೆ.
ಇವರಿಬ್ಬರ ಜಗಳದಲ್ಲಿ ಕೂಸು ಬಡವಾದಂತಾಗಿದೆ ರಾಜ್ಯದ ಸ್ಥಿತಿ. ಗುಂಡಿ ಮುಚ್ಚಲೂ ಇವರ ಬಳಿ ಯೋಗ್ಯತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ರೈತರ ಸಮಸ್ಯೆಗಳಿಗೋಸ್ಕರ ಶುಕ್ರವಾರ ಸಿಎಂ, ಡಿಸಿಎಂ ಅವರನ್ನು ಭೇಟಿ ಮಾಡಿದ್ದೆವು. 21ರಂದು ದಾವಣೆಗೆರೆಯಲ್ಲಿ ಪ್ರತಿಭಟನೆ ಮಾಡಿದಾಗ 1,000 ಪೊಲೀಸರನ್ನು ನಿಯೋಜಿಸಿ ನಮ್ಮನ್ನು ಬಂಧಿಸಿದ್ದರು. ಪೊಲೀಸರು ಸರ್ಕಾರದ ಏಜೆಂಟರಾಗಿ ಕೆಲಸ ಮಾಡಿದ್ದರು ಎಂದು ಆರೋಪಿಸಿದ್ದಾರೆ.
ಭದ್ರ ಬಲದಂಡೆ ನಾಲೆ ಸೀಳಿ ನೀರು ತೆಗೆದುಕೊಂಡು ಹೋಗಲು ಯಡಿಯೂರಪ್ಪ ಆದೇಶ ಮಾಡಿಲ್ಲ ಎಂದು ಕಾಂಗ್ರೆಸ್ನವರು ಈಗ ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಇಂದು ಯಡಿಯೂರಪ್ಪನವರ ಗಮನಕ್ಕೆ ಕೂಡಾ ತಂದಿದ್ದೇವೆ. ದೊಡ್ಡ ದೊಡ್ಡ ನೀರಾವರಿ ಯೋಜನೆಗಳನ್ನು ಕೊಟ್ಟಿದ್ದು ಬಿಜೆಪಿ ಸರ್ಕಾರ ಎಂದಿದ್ದಾರೆ.