ವಿಜಯಸಾಕ್ಷಿ ಸುದ್ದಿ, ಗದಗ: ಜನತಾ ದರ್ಶನ ಎಂಬುದು ಒಂದು ರೀತಿಯ ಬಹಿರಂಗ ಸಂಸತ್ ಅಧಿವೇಶನವಾಗಿದೆ. ಜನಸಾಮಾನ್ಯರು ತಮ್ಮ ಅಹವಾಲುಗಳನ್ನು ನೇರವಾಗಿ ಮಂಡಿಸಬಹುದಾದ ವೇದಿಕೆಯಾಗಿ ಜನತಾ ದರ್ಶನ ರೂಪುಗೊಂಡಿದ್ದು, ಮುಳಗುಂದದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಸಾರ್ವಜನಿಕರಿಂದ ಆಗಮಿಸಿದ ಹಲವಾರು ಅರ್ಜಿಗಳಿಗೆ ಸ್ಥಳದಲ್ಲೇ ಸ್ಪಂದನೆ ಸಿಗಲಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಮುಳಗುಂದ ಪಟ್ಟಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಗದಗ ಜಿಲ್ಲೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಶೇ.98ರಷ್ಟು ಸಾಧನೆ ಮಾಡಿದ್ದು, ಇದು ರಾಜ್ಯ ಮಟ್ಟದಲ್ಲಿ ಮಾದರಿಯಾಗಿದೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ ರೂ. 6,000 ಮೌಲ್ಯದ ಸೌಲಭ್ಯಗಳು ತಲುಪುತ್ತಿವೆ. ಇದು ದೇಶದ ಮಟ್ಟದಲ್ಲಿ ಕ್ರಾಂತಿಕಾರಿಯಾದ ಹೆಜ್ಜೆಯಾಗಿದೆ. ರಾಜ್ಯದಲ್ಲಿ ಇದುವರೆಗೆ 54 ಸಾವಿರ ಕೋಟಿ ರೂ. ಖರ್ಚುಮಾಡಿ ಭ್ರಷ್ಟಾಚಾರ ರಹಿತವಾಗಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದರು.
ಅಧಿಕಾರಿಗಳು ಪ್ರಜೆಗಳನ್ನು ಮೇಲಿಂದ ಮೇಲೆ ನೋಡುವ ಮನೋಭಾವ ಬದಲಾಗಬೇಕು. ಪ್ರಜೆಗಳೇ ಪ್ರಭುಗಳು. ಸಂವಿಧಾನ ನಮಗೆ ಅಧಿಕಾರ ನೀಡಿದ್ದು ಸೇವೆಗಾಗಿ, ದರ್ಪ ತೋರಿಸಲು ಅಲ್ಲ. ಸೌಜನ್ಯ ಹಾಗೂ ಸಹಾನುಭೂತಿಯೊಂದಿಗೆ ಆಡಳಿತ ನಡೆಯಬೇಕು ಎಂಬ ಆಶಯವನ್ನೂ ಸಚಿವರು ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ `ಥರ್ಡ್ ಐ’ ತಂತ್ರಜ್ಞಾನದ ಮೂಲಕ ಸಂಚಾರಿ ನಿಯಮಗಳ ಪಾಲನೆ, ಪೊಲೀಸ್ ಮತ್ತು ನಾಗರಿಕರ ನಡುವೆ ಸದ್ಭಾವನೆಯ ಆಧಾರಿತ ಸಂಬಂಧ, ಅಪರಾಧ ನಿಯಂತ್ರಣದತ್ತ ಗದಗ ಜಿಲ್ಲೆಯ ಪೊಲೀಸ್ ಇಲಾಖೆಯ ಸಾಧನೆ ಹಿಗ್ಗಿ ಹೇಳುವಂತಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವರು 4–5 ಬಾರಿ ಗದಗ ಪೊಲೀಸರನ್ನು ಪ್ರಶಂಸಿಸಿದ್ದಾರೆ ಎಂದು ಸಚಿವರು ಹೆಮ್ಮೆ ವ್ಯಕ್ತಪಡಿಸಿದರು.
ಕಳೆದ 75 ವರ್ಷಗಳಲ್ಲಿ ಅಸಾಧ್ಯವಾಗಿದ್ದ ಎಲ್ಲಾ ಗ್ರಾಮಗಳಿಗೆ ಸ್ಮಶಾನ ನಿರ್ಮಾಣದ ಗುರಿ ಇಂದು ಸಾಕಾರವಾಗುತ್ತಿದೆ. ಗದಗ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಸ್ಮಶಾನಗಳನ್ನು ಕಲ್ಪಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಮುಂದಿನ ಹಂತದಲ್ಲಿ ಎಲ್ಲ ಗ್ರಾಮಗಳಿಗೂ ಸ್ಮಶಾನ ಒದಗಿಸುವ ಗುರಿ ಹೊಂದಲಾಗಿದೆ. ಈ ದಿಸೆಯಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಳಗುಂದ ಪ.ಪಂ ಅಧ್ಯಕ್ಷೆ ಯಲ್ಲಮ್ಮ, ಸದಸ್ಯರಾದ ಷಣ್ಮುಖಪ್ಪ, ಬಸವರಾಜ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ಸಾಬ್ ಬಬರ್ಚಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಎಸಿ ಗಂಗಪ್ಪ, ಡಿಸಿಎಫ್ ಸಂತೋಷಕುಮಾರ್ ಹಾಗೂ ಇತರ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಜನರಿಗಾಗಿ ಜನರಿಗೊಸ್ಕರ ಸರ್ಕಾರ ಎಂಬುದನ್ನು ಜನತಾ ದರ್ಶನ ಮೂಲಕ ಸಾಕಾರಗೊಳಿಸಲಾಗುತ್ತಿದೆ. ಜನರ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಹೆಮ್ಮೆಯ ಕಾರ್ಯಕ್ರಮ ಇಂದು ಮುಳಗುಂದದಲ್ಲಿ ನಡೆಯುತ್ತಿದೆ. ಅಧಿಕಾರಿಗಳ ಜನಸ್ನೇಹಿ ವರ್ತನೆಯು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿದೆ. ಜನರಿಗೆ ಸೌಜನ್ಯಪೂರ್ಣ ಸೇವೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಅಧಿಕಾರಿ-ಸಿಬ್ಬಂದಿಗಳೆಲ್ಲರೂ ಸಂಯಮದಿಂದ ವರ್ತಿಸಿ, ಜನಸಾಮಾನ್ಯರ ಕೆಲಸ ಸುಗಮವಾಗಿ ಮಾಡೋಣ ಎಂದು ಹೇಳಿದರು.
“ಸರ್ಕಾರದ ಸೌಲಭ್ಯಗಳು ನೇರವಾಗಿ ಅರ್ಹ ಫಲಾನುಭವಿಗಳಿಗೆ ಲಭ್ಯವಾಗಬೇಕು, ದಲ್ಲಾಳಿಗಳ ಮಧ್ಯಪ್ರವೇಶ ಇಲ್ಲದ ನೈಜ ಜನಪರ ಆಡಳಿತವೇ ಸರ್ಕಾರದ ಗುರಿಯಾಗಿದೆ. ಹಿಂದಿನ ಜನತಾ ದರ್ಶನಗಳಲ್ಲಿ 951 ಅರ್ಜಿಗಳು ಪ್ರಥಮ ಹಂತದಲ್ಲಿ, 352 ಅರ್ಜಿಗಳು ದ್ವಿತೀಯ ಹಂತದಲ್ಲಿ ಮತ್ತು 855 ಅರ್ಜಿಗಳು ತೃತೀಯ ಹಂತದಲ್ಲಿ ಸ್ವೀಕೃತವಾಗಿವೆ. ಎಲ್ಲಾ ಅಹವಾಲುಗಳು ತಾರ್ಕಿಕವಾಗಿ ಅಂತ್ಯಗೊಳಿಸಲ್ಪಟ್ಟಿವೆ”
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು, ಗದಗ.



