ವಿಜಯಸಾಕ್ಷಿ ಸುದ್ದಿ, ಡಂಬಳ: ನೂರಾರು ವರ್ಷಗಳ ಕಾಲ ಗ್ರಾಮದ ತೋಂಟದಾರ್ಯ ಜಾತ್ರಾ ಮಹೋತ್ಸವ ಮುಗಿದ ನಂತರ ಜರುಗುವ ಸೂಫಿ ಸಂತರಾದ ಹಜರತ್ ಜಮಾಲಶಾವಲಿ ಶರಣರ ಗಂಧ ಈ ಬಾರಿ ಫೆ. 5ಕ್ಕೆ ಹಾಗೂ ಉರೂಸ್ ಫೆ. 6ಕ್ಕೆ ಜರುಗಲಿದೆ.
ಫೆ. 5ರಂದು ಗಂಧದ ಮೆರವಣಿಗೆ ರಾತ್ರಿ ಪ್ರಾರಂಭವಾಗಲಿದ್ದು, ರಾಮಣ್ಣ ಗದಗ ಅವರ ಮನೆತನದವರ ಚಕ್ಕಡಿಯಲ್ಲಿ ನಗಾರಿ ಹೊತ್ತ ಎತ್ತುಗಳ ಮೆರವಣಿಗೆ ವಿವಿಧ ಬಡಾವಣೆಗಳಲ್ಲಿ ಸಾಗಿ ದರ್ಗಾಕ್ಕೆ ತಲುಪಲಿದೆ. ಫೆ. 6ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ರೈತರು ತಮ್ಮ ಎತ್ತುಗಳನ್ನು ಮೆರವಣಿಗೆ ಮೂಲಕ ದರ್ಗಾದ ಸುತ್ತ ಐದು ಸುತ್ತು ಹಾಕಿ ಸಕ್ಕರಿ ಓದಿಸುತ್ತಾರೆ. ರಾತ್ರಿ ಅನ್ನಸಂತರ್ಪಣೆ, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಹಜರತ್ ಜಮಾಲಶಾವಲಿ ಶರಣರು ಜಾತ್ಯಾತೀತ ಧಾರ್ಮಿಕ ಸಂತರು. ಅಖಂಡ ಮಾನವ ಸಮುದಾಯದ ಹಿತಾಸಕ್ತಿ ಬಗ್ಗೆ, ಕ್ರಿಯಾಶೀಲ ಬದುಕಿನ ಬಗ್ಗೆ, ಧರ್ಮದ ಗಡಿಯನ್ನು ದಾಟಿ ಚಿಂತಿಸಿ, ಲೋಕ ಸಂಚಾರ ಮಾಡಿ ತಾವು ಕಂಡ ಜ್ಞಾನವನ್ನು ಸರಳವಾಗಿ ಪ್ರಸಾರ ಮಾಡಿದ ವಿಶ್ವಧರ್ಮಿಗಳಾಗಿದ್ದರು. ಅವರ ಪವಾಡಗಳು ಇಂದಿಗೂ ಮನೆಮಾತಾಗಿದೆ.
ಗ್ರಾಮದಲ್ಲಿ ಎಲ್ಲ ರೈತಾಪಿ ವರ್ಗ ಉರೂಸ್ನಂದು ತಮ್ಮ ಎತ್ತುಗಳನ್ನು ಸಿಂಗರಿಸಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದರ್ಗಾದ ಸುತ್ತ ಐದು ಬಾರಿ ಸುತ್ತನ್ನು ಹಾಕಿಸಿ ಸಕ್ಕರೆ ಪೂಜೆಯನ್ನು ಮಾಡಿಸುವ ಮೂಲಕ ಭಕ್ತಿ ಮೆರೆಯುವುದು ಇಲ್ಲಿನ ವಿಶೇಷ.
ಈಗಲೂ ಎತ್ತುಗಳ ಆರೋಗ್ಯದಲ್ಲಿ ಏರುಪೇರಾದರೆ ರೈತರು ಜಮಾಲಶಾವಲಿ ಶರಣರ ದರ್ಗಾಕ್ಕೆ ಬಂದು ಭಕ್ತಿ ಸಮರ್ಪಿಸುತ್ತಾರೆ. ಎತ್ತುಗಳ ಆರೋಗ್ಯದಲ್ಲಿ ಚೇತರಿಕೆಯಾಗುತ್ತದೆ ಎನ್ನುವ ಅಪಾರ ನಂಬಿಕೆ ರೈತರಲ್ಲಿದೆ. ಇದಲ್ಲದೇ ಭಕ್ತರ ಆಶಯಗಳು, ಇಷ್ಟಾರ್ಥಗಳು ಈಡೇರುತ್ತವೆ ಎಂದು ಅನಾದಿಕಾಲದಿಂದಲೂ ನಂಬಿಕೆಯಿದೆ.
ತೋಂಟದಾರ್ಯ ಜಾತ್ರೆ ಮುಗಿದ ಬಳಿಕ ಮಠದ ಈ ಹಿಂದಿನ ಶ್ರೀಗಳಿಂದ ಗಂಧ ಮತ್ತು ಉರೂಸ್ ಆಚರಿಸಲಾಗುತ್ತಿತ್ತು. ಅಲ್ಲದೆ ಉರೂಸ್ನ ದಿನ ಜರುಗುವ ಅನ್ನ ಸಂತರ್ಪಣೆಯಂದು ಮೊದಲು ಮಠದಲ್ಲಿರುವ ವೇದಮೂರ್ತಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ನೂರಾರು ವರ್ಷಗಳಿಂದ ಜಾತ್ರೆ ಮುಗಿದ ಬಳಿಕ ಉರೂಸ್ ಜರುಗುತ್ತಿದ್ದು, ಜನಮಾನಸದ ಭಕ್ತರ ಜಾತ್ರೆಯಾಗಿ ರೂಪುಗೊಂಡಿದೆ.
ಜಮಾಲಶಾವಲಿ ದರ್ಗಾ ಸಮಿತಿಯ ಗೌರವಾಧ್ಯಕ್ಷ ಹನಮಂತಪ್ಪ ಗದಗಿನ, ಅಧ್ಯಕ್ಷ ಅಲ್ಲಿಸಾಬ ಮೂಲಿಮನಿ, ಉಪಾಧ್ಯಕ್ಷ ಶಫೀ ಮೂಲಿಮನಿ, ಇಂತಿಯಾಜ ದಪೇದಾರ, ರಜಾಕಸಾಬ ಉಮ್ಮರಸಾಬ, ಮೋದಿನ ಚಾಂದಖಾನವರ, ಖಾಜಾಹುಸೇನ ಹೊಸಪೇಟಿ, ಬಂದುಸಾಬ ಜಲಾಲನವರ, ಕರೀಂಸಾಬ ಸರಖಾವಾಸ, ಮುರ್ತುಜಾ ಮನಿಯಾರ, ಬುಡ್ನೆಸಾಬ ಅತ್ತಾರ, ಹುಸೇನ ದೊಡ್ಡಮನಿ, ಇಬ್ರಾಹಿಂ ಹೊಸಪೇಟಿ, ಕಾಸಿಂಸಾಬ ದೊಡ್ಡಮನಿ, ಡಿ.ಡಿ. ಸೊರಟೂರ, ಗೌಸುಸಾಬ ಆಲೂರ, ರಾಜು ಹಳ್ಳಿಕೇರಿ, ಅಲ್ಲಾವುದ್ದಿನ ಹೊಂಬಳ, ಬಾಬುಸಾಬ ಸರಕಾವಾಸ, ಇಮಾಮಸಾಬ ಹೊಂಬಳ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಳ್ಳಲಿದ್ದಾರೆ.
“ಹಜರತ್ ಜಮಾಲಶಾವಲಿ ಶರಣರು ಜಾತ್ಯಾತೀತ ಧಾರ್ಮಿಕ ಸಂತರು. ಗ್ರಾಮದಲ್ಲಿ ನೆಲೆಸಿ ಧರ್ಮ ಸಮನ್ವಯ ದೃಷ್ಟಿಯಿಂದ ಸಾಮರಸ್ಯ ಮೂಡಿಸಿ, ವಿವಿಧತೆಯಲ್ಲಿ ಏಕತೆಯನ್ನು ಸಾರಿ, ಭಕ್ತರ ಪಾಲಿನ ಆಶಾಕಿರಣವಾಗಿ ಜೀವನೋತ್ಸಾಹ ತುಂಬುತ್ತಿರುವ ಜಮಾಲಶಾವಲಿ ಶರಣರು ಹಾಕಿಕೊಟ್ಟ ಸದ್ವಿಚಾರಗಳು ಸದಾ ಕಾಲ ಇರುತ್ತವೆ”
-
ಮಹಮ್ಮದರಫೀಕಸಾಬ ಅಲ್ಲಾವುದ್ದಿನಸಾಬ ಹೊಸಪೇಟಿ.
ಸಮಾಜ ಸೇವಕರು, ಡಂಬಳ.



