ವಿಜಯಸಾಕ್ಷಿ ಸುದ್ದಿ, ಗದಗ: ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳು ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯನ್ನು ದತ್ತುಪಡೆದು ಸಾಕಷ್ಟು ಸಹಾಯ ಸಹಕಾರವನ್ನು ನೀಡುವ ಮೂಲಕ ಜಿಲ್ಲೆಯಲ್ಲಿಯೇ ಒಂದು ಮಾದರಿ ಶಾಲೆಯಾಗಿ ಬೆಳೆದು ನಿಲ್ಲುವಲ್ಲಿ ಶ್ರಮಿಸಿದ್ದಾರೆ. ಹೀಗಾಗಿ ಇವರು ನೀಡಿದ ಸಹಕಾರ ಪ್ರೋತ್ಸಾಹ ಸಾರ್ಥಕವಾಗಿದೆ ಎಂದು ಗದಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಹೇಳಿದರು.
ಅವರು ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಹಾತ್ವಾಂಕಾಕ್ಷಿ ಯೋಜನೆಯಾದ `ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಸಿದ್ಧಲಿಂಗ ನಗರದ ಪ್ರೌಢಶಾಲೆಯ ಕಿರು ಪರಿಚಯವುಳ್ಳ ಕರಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಏನೂ ಇಲ್ಲದ ಈ ಶಾಲೆಯಲ್ಲಿ ಎಲ್ಲವೂ ಸಿಗುವಂತೆ ಬಸವರಾಜ ಹೊರಟ್ಟಿ ದಂಪತಿಗಳು ಹಾಗೂ ಇನ್ನಿತರ ದಾನಿಗಳು, ಜನಪ್ರತಿನಿಧಿಗಳು ಕೇವಲ ಎರಡು ವರ್ಷಗಳಲ್ಲಿ ಮಾಡಿದ್ದು ಹೆಮ್ಮೆಯ ಸಂಗತಿ. ಈ ಶಾಲೆ ಇಂದು ಜಿಲ್ಲೆಯಲ್ಲಿಯೇ ಒಂದು ಮಾದರಿ ಶಾಲೆಯಾಗಿ ಬೆಳೆದು ನಿಂತಿದೆ. ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಇನ್ನು ಮುಂದೆ ಜಿಲ್ಲೆಯಲ್ಲಿಯೇ ಪ್ರತಿವರ್ಷ ಉತ್ತಮ ಫಲಿತಾಂಶ ನೀಡುವ ಶಾಲೆಯಾದಾಗ ಮಾತ್ರ ಬಸವರಾಜ ಹೊರಟ್ಟಿಯವರ ಹಾಗೂ ಇನ್ನಿತರರು ನೀಡಿದ ಸಹಾಯ, ಸಹಕಾರ ಸಾರ್ಥಕವಾಗುತ್ತದೆ. ಆ ನಿಟ್ಟಿನತ್ತ ಸಾ.ಶಿ ಇಲಾಖೆ, ಶಾಲಾ ಸಿಬ್ಬಂದಿ, ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಗಮನ ಹರಿಸುವುದು ಅತ್ಯವಶ್ಯವಿದೆ ಎಂದರು.
ಈ ಸಂದರ್ಭದಲ್ಲಿ ಡಿ.ಡಿ.ಪಿ.ಐ ಆರ್.ಎಸ್. ಬುರಡಿ, ಡಾ. ಬಸವರಾಜ ಧಾರವಾಡ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವ್ಹಿ. ಶೆಟ್ಟೆಪ್ಪನವರ, ನಗರಸಭೆ ಸದಸ್ಯೆ ವಿದ್ಯಾ ಗಡಗಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಂದಾ ಖಟವಟೆ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಾದ ಸರಸ್ವತಿ ಕನವಳ್ಳಿ, ರವಿಪ್ರಕಾಶ, ಎಂ.ಎಸ್. ಕಂಬಳಿ, ಶಿವಕುಮಾರ ಕುರಿ, ಅರವಟಗಿ, ಶಂಕರ ಹಡಗಲಿ, ಎಸ್.ಡಿ. ಪ್ರಭಯ್ಯನಮಠ, ಜೆ.ಬಿ. ಅಣ್ಣಿಗೇರಿ, ಬಿ.ಎಸ್. ಯರಗುಡಿ ಮುಂತಾದವರು ಉಪಸ್ಥಿತರಿದ್ದರು.
ಯಾವ ಖಾಸಗಿ ಶಾಲೆಗಳಿಗಿಂತಲೂ ಕಡಿಮೆ ಇರದಂತೆ ಈ ಶಾಲೆ ತನ್ನ ಕಳೆಯನ್ನು ಹೆಚ್ಚಿಸಿಕೊಂಡಿದೆ. ವಿಶೇಷವಾಗಿ ದತ್ತು ಉಸ್ತುವಾರಿ ವಹಿಸಿದ ಡಾ. ಬಸವರಾಜ ಧಾರವಾಡ ಅವರು ಹೆಚ್ಚು ಆಸಕ್ತಿ ವಹಿಸಿ ಶಾಲೆಗೆ ಎಲ್ಲ ಮೂಲಭೂತ ಸೌಕರ್ಯ ದೊರೆಯುವಂತೆ ಎಲ್ಲರ ಸಹಕಾರ ಪಡೆದು ಮಾಡಿದ್ದಾರೆ. ಅವರ ಶ್ರಮವು ಸಾರ್ಥಕವಾಗಬೇಕಾದರೆ ಈ ಶಾಲೆ ಉತ್ತಮ ಫಲಿತಾಂಶ ನೀಡುವ ಮೂಲಕ ಒಂದು ಪ್ರತಿಷ್ಠಿತ ಶಾಲೆಯಾಗಿ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಳ್ಳಬೇಕು. ಅಂದಾಗ ಸಹಾಯ ಸಹಕಾರ ನೀಡಿದ ಎಲ್ಲರಿಗೂ ಗೌರವ ಲಭಿಸುತ್ತದೆ. ಇದರ ಸದುಪಯೋಗವನ್ನು ಪಾಲಕರು, ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಭರತ್ ಎಸ್ ಕೋರಿದರು.