ಆಯುರ್ವೇದ ಔಷಧಿಯ ಮಹತ್ವ ಕಡಿಮೆಯಾಗದು

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸನಾತನ ಪರಂಪರೆಯಲ್ಲಿ ಆಯುರ್ವೇದಕ್ಕೆ ಕ್ಲಿಷ್ಟವಾದ ರೋಗ ಗುಣಪಡಿಸುವ ಶಕ್ತಿಯಿದೆ. ಆರೋಗ್ಯ ಕ್ಷೇತ್ರ ಎಷ್ಟೇ ಮುಂದುವರೆದಿದ್ದರೂ ಆಯುರ್ವೇದ ಔಷಧಿ ಮಹತ್ವ ಕಡಿಮೆಯಾಗುವುದಿಲ್ಲ ಎಂದು ಹೂವಿನಶಿಗ್ಲಿ ವಿರಕ್ತಮಠದ ಶೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

Advertisement

ಅವರು ಭಾನುವಾರ ಪಟ್ಟಣದ ಪ್ರಾಥಮಿಕ ಶಾಲೆ ನಂ.1ರ ಆವರಣದಲ್ಲಿ 59ನೇ ವರ್ಷದ ಅಸ್ತಮಾ ಯಜ್ಞದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಸಂಪತ್ತು ಎಲ್ಲಕ್ಕಿಂತ ಮಿಗಿಲಾದುದು. ನಿತ್ಯ ಜೀವನದಲ್ಲಿ ಆಯುರ್ವೇದ ಮತ್ತು ಸಾಂಪ್ರದಾಯಿಕ ಆಹಾರ ಪದ್ದತಿ ಅಳವಡಿಸಿಕೊಳ್ಳಬೇಕು. ಕಳೆದ 59 ವರ್ಷಗಳಿಂದ ಮೃಗಶಿರಾ ನಕ್ಷತ್ರದ ವೇಳೆಗೆ ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ಔಷಧಿಯನ್ನು ಅಸ್ತಮಾ ರೋಗಿಗಳಿಗೆ ಉಚಿತವಾಗಿ ನೀಡುವ ಮೂಲಕ ಲಕ್ಷಾಂತರ ಜನರನ್ನು ಈ ರೋಗದಿಂದ ವಾಸಿ ಮಾಡಿದ ಕೀರ್ತಿ ದಿ. ಬಾಬುರಾವ ಕುಲಕರ್ಣಿಯವರಿಗೆ ಸಲ್ಲುತ್ತದೆ. ಮಂತ್ರೌಷಧಿಗಾಗಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಜನಸಮೂಹವೇ ಔಷಧಿಯ ಮಹತ್ವ ಸಾರುತ್ತದೆ ಎಂದರು.

ಪ್ರದೀಪ ಅಗ್ನಿಹೋತ್ರಿ ಮಾತನಾಡಿ, ಅಸ್ತಮಾ ರೋಗಕ್ಕೆ ಅಲೋಪತಿಯಲ್ಲಿ ಸಂಪೂರ್ಣವಾಗಿ ಗುಣಪಡಿಸುವಂತಹ ಔಷಧಿ ಇಲ್ಲ. ಆದರೆ ಆಯುರ್ವೇದಲ್ಲಿ ಇದನ್ನು ಗುಣಪಡಿಸಬಹುದಾಗಿದೆ. ತಾವು ನೀಡುವ ಔಷಧಿಯಲ್ಲಿ 18 ಗಿಡಮೂಲಿಕೆಗಳ ಜೊತೆಗೆ ಗುರುಕಾರುಣ್ಯವೂ ಅಡಗಿದೆ. ರೋಗ ನಿವಾರಣೆಗೆ ಔಷಧಿ ಸ್ವೀಕರಿಸುವ ಜೊತೆಗೆ ಪಥ್ಯ ಪಾಲಿಸುವುದು ಮುಖ್ಯ. ಐಸ್‌ಕ್ರೀಮ್, ಹಲಸಿನಹಣ್ಣು, ಗಿಣ್ಣ, ಮೊಸರು, ಬಾಳೆ ಮತ್ತು ತಂಬಾಕು ಬಳಸಬಾರದು. ಸಿರಿಧಾನ್ಯ, ಸೊಪ್ಪಿನಪಲ್ಯ ಊಟಕ್ಕೆ ಬಳಸಬೇಕು ಎಂಬ ಕೆಲ ವಿಧಿಗಳನ್ನು ತಿಳಿಸಿದರು.

ಕೃಷ್ಣ ಕುಲಕರ್ಣಿ ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಪಟ್ಟಣದಲ್ಲಿ ಇದೊಂದು ಪರಂಪರೆಯನ್ನು ಹಾಕಿಕೊಟ್ಟಿರುವ ತಂದೆಯವರಾದ ದಿ. ವೈದ್ಯ ಬಾಬುರಾವ ಕುಲಕರ್ಣಿ ಅವರಿಂದ ಕಲಿತ ಈ ಸೇವೆಯಿಂದ ಆತ್ಮ ಸಂತೃಪ್ತಿ ತಮ್ಮದಾಗಿದೆ. ಪ್ರತಿ ವರ್ಷ ಸಾವಿರಾರು ಜನರಿಗೆ ಔಷಧಿ ಕೊಡುವ ಕಾರ್ಯಕ್ಕೆ ಪಟ್ಟಣದ ಜನತೆಯ ಸಹಕಾರ ಶ್ಲಾಘನೀಯ ಎಂದರು.

ಪ್ರಕಾಶ ಲಿಂಬಯ್ಯಸ್ವಾಮಿಮಠ ಮಾತನಾಡಿ, ಮೃಗಶಿರಾ ಮಳೆ ನಕ್ಷತ್ರದ ವೇಳೆಗೆ ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ ನೀಡುವ ಮೂಲಕ ಲಕ್ಷಾಂತರ ಜನರ ಬಾಳಲ್ಲಿ ಆರೋಗ್ಯ, ಸಂತಸ, ನೆಮ್ಮದಿ ಮೂಡಿಸುವ ನಿಸ್ವಾರ್ಥ ಸೇವಾ ಕಾರ್ಯ ಪ್ರಶಂಸನೀಯ ಎಂದರು.

ಈ ವೇಳೆ ಪಲ್ಲಣ್ಣನವರು ಕುಲಕರ್ಣಿ, ಪ್ರಕಾಶ ನಿಂಗಪ್ಪ ಬನ್ನಿ, ಚಂಬಣ್ಣ ಬಾಳಿಕಾಯಿ, ಗೋಪಾಲ ಪಡ್ನೀಸ್, ನಿಂಗಪ್ಪ ತಹಸೀಲ್ದಾರ, ಗುರುರಾಜ ಕುಲಕರ್ಣಿ, ಕೆ.ಆರ್. ದೇಶಪಾಂಡೆ, ನಾಗರಾಜ ಹುಯಿಲಗೋಳ, ನಿಂಗಪ್ಪ ದುರಗಣ್ಣವರ, ವಿಕ್ರಮಾಚಾರ್ಯ ಗಡಗಿ, ಗೋಪಾಲ ಪಡ್ನಿಸ್, ಅನಿಲ ಕುಲಕರ್ಣಿ, ನೀಲಪ್ಪ ಪಡಗೇರಿ ಹಾಗೂ ಮಂತ್ರಾಲಯ ಪಾದಯಾತ್ರಾ ಸಂಘದ ಸದಸ್ಯರು ಮುಂತಾದವರಿದ್ದರು. ಕೃಷ್ಣ ಕುಲಕರ್ಣಿ ನಿರೂಪಿಸಿದರು.

ಸುಡುವ ಬಿಸಿಲ ಬೇಗೆಯ ನಡುವೆಯೂ ಶಾಂತರಾಗಿ ಕುಳಿತುಕೊಂಡು ಅಸ್ತಮಾ ರೋಗಿಗಳು ಔಷಧಿ ಸೇವಿಸಿದರು. ಚಿಕ್ಕೋಡಿಯಿಂದ ಆಗಮಿಸಿದ್ದ ಸಂಜೀವ ಮಡಿವಾಳರ ಅವರು ಕಳೆದ ಮರ‍್ನಾಲ್ಕು ವರ್ಷದಿಂದ ಮಗಳಿಗೆ ಈ ಔಷಧಿ ಕೊಡಿಸುತ್ತಿದ್ದು, ಆರೋಗ್ಯ ಬಹುತೇಕ ಸುಧಾರಿಸಿದ್ದರಿಂದ ಈ ವರ್ಷ 50 ಜನ ಅಸ್ತಮಾ ಬಾಧಿತರನ್ನು ಕರೆದುಕೊಂಡು ಬಂದಿದ್ದಾಗಿ ಹೇಳಿದರು.

ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ದಿ. ವೈದ್ಯ ಬಾಬುರಾವ್ ಅವರು ನೀಡುತ್ತಿದ್ದ ಔಷಧಿ ಪರಿಣಾಮಕಾರಿಯಾಗಲು ಅವರಿಗಿರುವ ಗುರುರಾಯರ ಕೃಪಾಶೀರ್ವಾದ ಮತ್ತು ಆಧ್ಯಾತ್ಮಿಕ, ಸಾತ್ವಿಕ ಶಕ್ತಿಯ ಬಲ ಕಾರಣವಾಗಿದೆ. ಔಷಧೀಯ ಶಕ್ತಿಯ ಜೊತೆಗೆ ಶೃದ್ಧೆ, ದೇವರ ಪ್ರಾರ್ಥನೆ ಮತ್ತು ನಂಬಿಕೆ ಮುಖ್ಯವಾಗಿದೆ. ಈ ಪುಣ್ಯದ ಕಾರ್ಯವನ್ನು ಸಾರ್ವಜನಿಕರ ಸಹಕಾದೊಂದಿಗೆ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಶೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.


Spread the love

LEAVE A REPLY

Please enter your comment!
Please enter your name here