ವಿಜಯಸಾಕ್ಷಿ ಸುದ್ದಿ, ಗದಗ: ಜಾತಿ ವ್ಯವಸ್ಥೆಯೇ ಶ್ರೇಷ್ಠ ಮತ್ತು ಕನಿಷ್ಠತೆಯನ್ನು ಹುಟ್ಟು ಹಾಕಿದೆ. ಈ ಬಗ್ಗೆ ದೇಶದಲ್ಲಿ ಸರಿಯಾದ ಅಧ್ಯಯನ ಆಗಬೇಕು. 1931ರಲ್ಲಿ ಜಾತಿ ಗಣತಿ ನಡೆದಿದ್ದು, ಅಂದಿನಿಂದ ಇಂದಿನವರೆಗೂ ನಿಖರವಾದ ಜಾತಿ ಗಣತಿ ನಡೆದಿಲ್ಲ. ಹಿಗಿದ್ದರೂ ಜಾತಿ ಗಣತಿ ಆಧಾರದ ಮೇಲೆ ಹಲವು ತಿರ್ಮಾನ ಆಗುತ್ತಿರುವುದು ಸರಿಯಾದ ಕ್ರಮವಲ್ಲ. ಬಲಾಢ್ಯ ಜಾತಿಗಳು ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ, ರಾಜಕೀಯ ಅಧಿಕಾರ ಮುಂದಿಟ್ಟು ಕೆಳಜಾತಿಯನ್ನು ನಿಯಂತ್ರಿಸುವ ಕೆಲಸ ಮಾಡುತ್ತಿವೆ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂತರಾಜು ವರದಿ ಇನ್ನೂ ಸಂಪೂರ್ಣವಾಗಿ ಬಿಡುಗಡೆ ಆಗದಿದ್ದರೂ ಅವೈಜ್ಞಾನಿಕ ಎಂದು ಹೇಳುವುದು ಸರಿಯಲ್ಲ. ರಾಜ್ಯದ ಮಠಾಧೀಶರು ಸೇರಿದಂತೆ ಹಲವರು ತಮ್ಮ ಸಮುದಾಯವನ್ನು ಉಳಿಸಿಕೊಳ್ಳಲು ಈ ವರದಿಯನ್ನು ನಿರಾಕರಿಸುತ್ತಿವೆ. ಜೊತೆಗೆ, ತಮ್ಮ ಅಧಿಕಾರ ಕಳೆದುಕೊಳ್ಳುತ್ತೇವೆ ಎನ್ನುವ ಭೀತಿಯಲ್ಲಿದೆ. ಕಾಂತರಾಜು ವರದಿ ಕೇವಲ ಜಾತಿ ಜನಗಣತಿ ಅಲ್ಲ. ಸಾಮಾಜಿಕ ಸ್ಥಿತಿಗತಿಯೂ ಅದರಲ್ಲಿ ಅಡಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ನಲ್ಲಿರುವ ಮೇಲ್ಜಾತಿಯ ನಾಯಕರು ವಿರೋಧ ಮಾಡುತ್ತಿರುವುದು ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾವನೂರ ವರದಿ, ಚಿನ್ನಪ್ಪರೆಡ್ಡಿ ವರದಿ ಸೇರಿದಂತೆ ಹಲವಾರು ವರದಿಗಳನ್ನು ಮೇಲ್ಜಾತಿಯವರು ಒಪ್ಪಿಕೊಂಡಿಲ್ಲ. ಅದೇ ರೀತಿ ಕಾಂತರಾಜು ವರದಿಯನ್ನು ತಿರಸ್ಕಾರ ಮಾಡುವ ಹುನ್ನಾರ ನಡೆದಿದ್ದು, ಆರ್ಥಿಕವಾಗಿ ಬಲಾಢ್ಯವಾಗಿರುವ ಲಿಂಗಾಯತರು ಹಾಗೂ ಒಕ್ಕಲಿಗರು ಈ ವರದಿಯನ್ನು ಒಪ್ಪಿಕೊಳ್ಳುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಮೇಲ್ಜಾತಿಯವರ ರಾಜಕೀಯ ಒತ್ತಡಕ್ಕೆ ಮಣಿಯದೇ ವರದಿಯನ್ನು ಅನುಷ್ಠಾನಗೋಳಿಸಬೇಕು. ಈ ವರದಿ ಜಾರಿಯಾಗುವುದರಿಂದ ಹಿಂದುಳಿದ ವರ್ಗಗಳ ಏಳಿಗೆಗೆ ಸಹಾಯವಾಗುತ್ತದೆ. ವರದಿಯಲ್ಲಿ ದೋಷ ಕಂಡುಬಂದರೆ ಅಧ್ಯಯನ ಮಾಡಲಿ ಎಂದು ಸಲಹೆ ನೀಡಿದರು.
ಈ ವೇಳೆ ಮುಖಂಡರಾದ ಬಾಲರಾಜ ಅರಬರ, ಬಸವರಾಜ ಪೂಜಾರ, ಶರೀಫ್ ಬಿಳೆಯಲಿ, ಆನಂದ ಸಿಂಗಾಡಿ, ಪರಸುರಾಮ ಕಾಳೆ, ಅನಿಲ ಕಾಳೆ, ಮುತ್ತು ಬಿಳೆಯಲಿ ಉಪಸ್ಥಿತರಿದ್ದರು.