HomeGadag Newsದಾನಶೂರ ಶಿರಸಂಗಿ ಲಿಂಗರಾಜರು

ದಾನಶೂರ ಶಿರಸಂಗಿ ಲಿಂಗರಾಜರು

For Dai;y Updates Join Our whatsapp Group

Spread the love

ಶಿಕ್ಷಣ ಸೇವೆಯೇ ದೇವರ ಸೇವೆ’ ಎಂಬ ಅಚಲವಾದ ನಂಬಿಕೆಯ ಇಂದ ಶಿಕ್ಷಣ ಸಂಸ್ಥೆ ಸ್ಥಾಪಿಸಲು ನಿಸ್ವಾರ್ಥ ಮನೋಭಾವನೆಯಿಂದ ಸಂಸ್ಥಾನದ ಇಡೀ ಆಸ್ತಿಯನ್ನೇ ಸಮರ್ಪಿಸಿದ ದಾನಶೂರ ಕರ್ಣ ಶಿರಸಂಗಿ ಲಿಂಗರಾಜ ದೇಸಾಯಿಯವರಾಗಿದ್ದಾರೆ.

ಲಕ್ಷ್ಮೇಶ್ವರ ಸಮೀಪದ ಶಿಗ್ಲಿಯಲ್ಲಿ ಸುಮಾರು 1861ರ ಜನವರಿ 10ರಂದು ಕೃಷಿ ಕುಟುಂಬದಲ್ಲಿ ಜನಿಸಿದರು. ತಂದೆ ಗೂಳಪ್ಪ ಮಡ್ಲಿ, ತಾಯಿ ಎಲ್ಲವ್ವ ದಂಪತಿಗಳ 6 ಜನ ಮಕ್ಕಳಲ್ಲಿ ರಾಮಪ್ಪ ಎಂಬ ಹೆಸರಿನ ಲಿಂಗರಾಜರು ನಾಲ್ಕನೆಯವರು. ಕೇವಲ 12 ವರ್ಷದವರಿದ್ದಾಗ 1872ರಲ್ಲಿ ನವಲಗುಂದ ಸಂಸ್ಥಾನಕ್ಕೆ ದತ್ತಕರಾದಾಗ ಸಂಸ್ಥಾನದ ಒಡತಿ ಗಂಗಾಬಾಯಿ ಇವರನ್ನು ದತ್ತಕ ಪಡೆದ ತಾಯಿಗಿಂತಲೂ ಅತ್ಯಂತ ಪ್ರೀತಿ-ವಾತ್ಸಲ್ಯದಿಂದ ಬೆಳೆಸಿದರು.

ಲಿಂಗರಾಜರು ಸಿರಸಂಗಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಕೊಲ್ಲಾಪುರದಲ್ಲಿ ಉನ್ನತ ವ್ಯಾಸಂಗ ಮಾಡುವ ಸಂದರ್ಭದಲ್ಲಿ ಇವರ ದತ್ತಕ ತಂದೆ ಜಾಯಪ್ಪ ಅವರಿಗೆ ಸಿರಸಂಗಿ ಸೇರಿದಂತೆ ಹತ್ತು ಗ್ರಾಮಗಳು ಉಂಬಳಿಯಾಗಿ ಸಿಕ್ಕಿದವು. ಲಿಂಗರಾಜರಿಗೆ ಕೃಷಿ ಕ್ಷೇತ್ರದ ಮೇಲಿದ್ದ ಪ್ರೀತಿಯಿಂದ ಕೆರೆ ಕಟ್ಟಿಸುವುದು, ಸುಧಾರಿತ ಬೀಜ, ಗೊಬ್ಬರ ಬಳಕೆ ಮೂಲಕ ವೈಜ್ಞಾನಿಕ ಕೃಷಿಗೆ ಒತ್ತು ನೀಡಿದರು. ಅನಾಥರ ರಕ್ಷಣೆಗಾಗಿ ಧರ್ಮ ಶಾಲೆಗಳ ಸ್ಥಾಪನೆ ಮಾಡಿದರು. ಧರ್ಮದ ಬಗ್ಗೆ ಅಪಾರ ಗೌರವ ಹೊಂದಿದ್ದ ಅವರು ಅಥಣಿ, ಅವರಾಧಿ, ಗದಗ, ಹಾನಗಲ್ ಶ್ರೀಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. 1903ರಲ್ಲಿ ಅಖಿಲ ಭಾರತ ವೀಶಶೈವ ಮಹಾಸಭಾ ಸ್ಥಾಪನೆಯ ಪ್ರಮುಖರಾಗಿದ್ದರು. ಧಾರವಾಡ ಮತ್ತು ಬೆಂಗಳೂರಿನಲ್ಲಿ ನಡೆದ ಮಹಾಸಭಾದ ಅಧ್ಯಕ್ಷತೆ ವಹಿಸಿದ್ದ ಅವರು, ಅಂದು ಸ್ತ್ರೀ ಶಿಕ್ಷಣ, ನೀತಿ ಶಿಕ್ಷಣ, ವ್ಯಾಪಾರ, ಕೃಷಿ, ಸಾಂಸ್ಕೃತಿ, ಧಾರ್ಮಿಕ ಬದುಕಿನ ಬಗ್ಗೆ ಮಂಡಿಸಿದ ವಿಚಾರಗಳು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿವೆ.

ಬದುಕಿನುದ್ದಕ್ಕೂ ಶಿಕ್ಷಣ ಮತ್ತು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ ಅವರು ತಮ್ಮ ಕೊನೆಯ ದಿನಗಳಲ್ಲಿ ಸಂಸ್ಥಾನದ ಆಸ್ತಿಯನ್ನು ಸಮಾಜಕ್ಕೆ ಸಮರ್ಪಿಸುವ ದೃಢ ನಿರ್ಧಾರದಿಂದ ಇಚ್ಛಾಪತ್ರ ಬರೆದು ಆಗಿನ ಕಲೆಕ್ಟರ್ ಮೇ|| ಜಾಕ್ಸನ್‌ರವರ ಕೈಗಿತ್ತು ತಮ್ಮ ಮರಣಾನಂತರ ವಿಷಯ ಬಹಿರಂಗಪಡಿಸಬೇಕೆಂದು ಮನವಿ ಮಾಡಿದ್ದರು. ಈಗಿನ ಪ್ರಸಿದ್ಧ ಕೆಎಲ್‌ಇ ಸಂಸ್ಥೆಗೆ ಸಂಸ್ಥಾನದ ಆಸ್ತಿಯನ್ನು ಭೂದಾನ ನೀಡಿದ ಯುಗಪುರುಷ ಶಿರಸಂಗಿ ಲಿಂಗರಾಜರು. ಅವರ ಶುದ್ಧ ಮನಸ್ಸಿನ ಸಮರ್ಪಣಾಭಾವದ ಕಾಮಧೇನು, ಶಿಕ್ಷಣ ಪ್ರೇಮಿ ಲಿಂಗರಾಜರು 23-8-1906ರಲ್ಲಿ ನವಲಗುಂದದಲ್ಲಿ ದೈವಾಧೀನರಾದರು.

ಆದರೆ ದುರ್ದೈವದ ಸಂಗತಿಯೆಂದರೆ, ಸಮಾಜಕ್ಕಾಗಿಯೇ ಸಮರ್ಪಿಸಿಕೊಂಡ ಮಹಾನ್ ಪುರುಷ ಲಿಂಗರಾಜರ ಹುಟ್ಟೂರಿನಲ್ಲಿ ಅವರ ಹೆಸರಿನ ವೃತ್ತವೊಂದನ್ನು ಬಿಟ್ಟರೆ ಮತ್ತೇನಿಲ್ಲ. ಮುಖ್ಯವಾಗಿ ಅವರು ಹುಟ್ಟಿ ಬೆಳೆದ ಮನೆ ಈಗಲೂ ಪಾಳುಬಿದ್ದಿರುವುದು ಖೇದಕರ ಸಂಗತಿ.

ಈ ಕುರಿತು ನಾಡಿನ ಹಿತಕ್ಕಾಗಿ ತಮ್ಮ ಬೆಲೆ ಕಟ್ಟಲಾಗದಷ್ಟು ಆಸ್ತಿಯನ್ನು ದಾನ ಮಾಡಿದ ಲಿಂಗರಾಜರ ಹೆಸರಿನಲ್ಲಿ ಅವರ ಹುಟ್ಟೂರಾದ ಶಿಗ್ಲಿಯಲ್ಲಿ ಅವರ ಸ್ಮಾರಕ ಮತ್ತು ಸಮಾಜಕ್ಕೆ ಉಪಯೋಗವಾಗುವ ಸೇವಾ ಸಂಸ್ಥೆ ಪ್ರಾರಂಭಿಸಬೇಕೆಂಬುದು ಗ್ರಾಮದ ಜನರ ಅಭಿಪ್ರಾಯವಾಗಿದೆ. ಈ ಬಗ್ಗೆ ಸರಕಾರಕ್ಕೆ ಗ್ರಾಮಸ್ಥರು ಮನವಿಯನ್ನು ಸಲ್ಲಿಸಿದ್ದಾರೆ. ಇದಕ್ಕಾಗಿ ಗ್ರಾ.ಪಂ ವತಿಯಿಂದ ಹೂವಿನ ಶಿಗ್ಲಿ ರಸ್ತೆಯಲ್ಲಿ ನೀಡಿದ 6 ಗುಂಟೆ ನಿವೇಶನದಲ್ಲಿ ಅವರ ಹೆಸರಿನ ಸಮುದಾಯ ಭವನ ನಿರ್ಮಾಣಕ್ಕಾಗಿ ಬುನಾದಿ ಹಾಕಿ ಕೈಬಿಡಲಾಗಿದೆ.

ಈ ನಡುವೆ ಪ್ರತಿ ವರ್ಷ ಜನವರಿ 10ರಂದು ಶಿಗ್ಲಿಯ ಲಿಂಗರಾಜರ ಜನ್ಮದಿನಾಚರಣೆಯ ದಿನ ಸಮಾಜ ಬಾಂಧವರು ಮತ್ತು ಗ್ರಾಮಸ್ಥರು ಸೇರಿ ವೃತ್ತದಲ್ಲಿನ ಮೂರ್ತಿಗೆ ಪೂಜೆ ಸಲ್ಲಿಸುವ ಕಾರ್ಯ ಮಾತ್ರ ನಡೆಯುತ್ತಿರುವುದು ಸಮಾಧಾನದ ಸಂಗತಿ.

  • ಮಲ್ಲು ಕಳಸಾಪುರ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!