ವಿಜಯಸಾಕ್ಷಿ ಸುದ್ದಿ, ಡಂಬಳ: ಧರ್ಮಸ್ಥಳ ಕ್ಷೇತ್ರದ ಅನೇಕ ಕಾರ್ಯಕ್ರಮಗಳಲ್ಲಿ ಕೆರೆ ಅಭಿವೃದ್ಧಿ ಅತ್ಯಂತ ಪ್ರಮುಖವಾದುದ್ದು. ಕೃಷಿ, ಮನುಷ್ಯರು ಹಾಗೂ ಪ್ರಾಣಿ-ಪಕ್ಷಿಗಳಿಗೆ ನೀರು ಅತಿ ಅಗತ್ಯ. ಇದಕ್ಕಾಗಿ ಜೀವಜಲ ಉಳಿಸುವೆಡೆಗೆ ಕೆರೆ ಪುನಶ್ಚೇತನ ಕಾರ್ಯವನ್ನು ಕೈಗೊಂಡಿರುವುದು ಪ್ರಶಂಸನೀಯ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಡಂಬಳ ಹೋಬಳಿಯ ಬರದೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮ ಪಂಚಾಯಿತಿ ಮೇವುಂಡಿ ಮತ್ತು ಕೆರೆ ಅಭಿವೃದ್ಧಿ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ದೇವೀಂದ್ರಪ್ಪ ಗದಗ ಅವರು ದಾನ ನೀಡಿದ ಜಮೀನಿನಲ್ಲಿ `ನಮ್ಮ ಊರು ನಮ್ಮ ಕೆರೆ’ ಕಾರ್ಯಕ್ರಮದಡಿಯಲ್ಲಿ ಜೀರ್ಣೋದ್ಧಾರಗೊಂಡ ಬರದೂರ ಗ್ರಾಮದ ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಡರಗಿ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಶತನಾಡಿ, ದೇವೀಂದ್ರಪ್ಪ ಗದಗ ಅವರು ಕೆರೆಗಾಗಿ ಭೂದಾನ ನೀಡಿರುವುದು ಪ್ರಶಂಸನೀಯ. ಕೆರೆಯನ್ನು ಸಂರಕ್ಷಿಸಿದಲ್ಲಿ ಗಂಗೆಯನ್ನು ರಕ್ಷಿಸಿದಂತೆ. ಹಾಗಾಗಿ ಪುನಶ್ಚೇತನಗೊಳಿಸಿದ ಕೆರೆಯ ಶುಚಿತ್ವ ಕಾಯ್ದುಕೊಳ್ಳುವುದು ಗ್ರಾಮಸ್ಥರ ದೊಡ್ಡ ಹೊಣೆ ಎಂದು ಹೇಳಿದರು.
ಪಿಡಿಒ ಫಕ್ರುದ್ದಿನ ನದಾಫ್ ಮಾತನಾಡಿ, ಗ್ರಾಮಸ್ಥರ ಬೇಡಿಕೆಯಂತೆ ಕೆರೆಗೆ ಗ್ರಾ.ಪಂ ಮೂಲಕ ಕೆರೆಯ ಸುತ್ತ ಕಲ್ಲು ಹೊಂದಿಸುವುದು ಮತ್ತು ತಂತಿ ಬೇಲಿ ಹಾಕಲಾಗುವುದು ಎಂದು ಭರವಸೆಯನ್ನು ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಗದಗ ಜಿಲ್ಲಾ ನಿರ್ದೇಶಕ ಕೇಶವ್ ದೇವಾಂಗ ಮಾತನಾಡಿದರು. ಕಾರ್ಯಕ್ರಮದಲ್ಲಿ ಭೂದಾನಿಗಳಾದ ದೇವೀಂದ್ರಪ್ಪ ಗದಗ, ಚಂದ್ರಶೇಖರ ಜೆ, ಗ್ರಾ.ಪಂ ಅಧ್ಯಕ್ಷೆ ದುರಗಮ್ಮ ತಳಗೇರಿ, ಉಪಾಧ್ಯಕ್ಷೆ ಮಲ್ಲವ್ವ ಹಾರೋಗೇರಿ, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಪರ್ವತಗೌಡ ಹಿರೇಗೌಡ, ಸತೀಶ ಎಸ್.ಎಮ್, ವಿಶಾಲಾ ಮಲ್ಲಾಪೂರ, ಅನ್ನಪ್ಪಾ ಬಾರಕಿ, ಗ್ರಾ.ಪಂ ಸದಸ್ಯರು, ಕೆರೆ ಅಭಿವೃದ್ಧಿ ಸಮಿತಿ ಸದಸ್ಯರು, ರೈತರು, ಗ್ರಾಮಸ್ಥರು ಇದ್ದರು.
ಪರಿಸರವಾದಿ ಗೋಣಿಬಸಪ್ಪ ಕೊರ್ಲಹಳ್ಳಿ, ಎ.ಕೆ. ಮುಲ್ಲಾನವರ ಮಾತನಾಡಿ, ಬೆಳ್ಳಿ ಬಂಗಾರ ನೋಡಿ, ಧರಿಸಿ ಆನಂದಪಡಬಹುದು. ಆದರೆ ಪ್ರತಿಯೊಬ್ಬರಿಗೆ ಅವಶ್ಯಕವಾದದ್ದು ನೀರು, ಗಾಳಿ, ಆಹಾರ. ಈ ಮೂರರಲ್ಲಿ ಒಂದು ಇಲ್ಲದಿದ್ದರೂ ಬದುಕಲು ಸಾಧ್ಯವಿಲ್ಲ. ಸ್ವಚ್ಛವಾದ ಪ್ರಕೃತಿ ಉಳಿಸಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳದ ಪೂಜ್ಯರಾದ ಡಾ.ವೀರೇಂದ್ರ ಹೆಗ್ಗಡೆ ಮತ್ತು ಡಾ. ಹೇಮಾವತಿ ವಿ. ಹೆಗ್ಗಡೆಯವರು ನಾಡಿನಾದ್ಯಂತ ಶ್ರಮಿಸುತ್ತಿರುವುದು ಪ್ರಶಂಸನೀಯ ಎಂದರು.