ಬದುಕಿನಲ್ಲಿ ಬೆಳೆಯುವ ಛಲ ಒಂದಿದ್ದರೆ ಏನಾದರೂ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಅಕ್ಷರಶಃ ನಿರೂಪಿಸಿದವರು ಬಾಗಲಕೋಟೆಯ ಹೆಸರಾಂತ ಚರ್ಮರೋಗ ತಜ್ಞ ವೈದ್ಯರಾಗಿರುವ ಡಾ. ಮಹಾಜಬೀನ್ ಮಧುರಕರ್. ವಿಜಯಪುರ ಜಿಲ್ಲೆಯ ರಾಮಪುರ ಗ್ರಾಮದಲ್ಲಿ 19-11-1986ರಂದು ಮಧ್ಯಮ ವರ್ಗದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಮಹಾಜಬೀನ್ರವರು ನಿವೃತ್ತ ಕರಣಿಕರಾದ ಶ್ರೀ ಸಾಹೇಬ್ ಪಟೇಲ್ ಬಿ. ಮದರ್ಕರ್ ಮತ್ತು ಗೃಹಿಣಿ ಶಹಪುರಿ ಬೇಗಂ ಅವರ ಆರನೇಯ ಮಗಳು.
ಬಾಲ್ಯದಿಂದಲೇ ಗಾಲಿ ಕುರ್ಚಿಗೆ ಸೀಮಿತವಾಗಿ ಎಲ್ಲರಂತೆ ಬೆಳೆಯದೇ ತುಸು ವಿಭಿನ್ನವಾಗಿ ಬೆಳೆದು ನಿಂತಿದ್ದು ಸಾಹಸವೇ ಸರಿ. ತಂದೆ-ತಾಯಿಯ ಮುದ್ದಿನ ಮಗಳಾಗಿ, ಮೂರು ವರ್ಷದವರಿದ್ದಾಗ ಇದ್ದಕ್ಕಿಂತೆಯೇ ವ್ಯಾಪಕ ಜ್ವರಕ್ಕೆ ತುತ್ತಾಗಿ, ವೈದ್ಯರ ನಿರ್ಲಕ್ಷ್ಯವೋ, ವಿಧಿಯ ಆಟವೋ, ಔಷಧಿಯ ಅಸ್ಪಂದನೆಯೋ ಯಾರಿಗೂ ತಿಳಿಯದ ಪ್ರಶ್ನೆ. ವೈದ್ಯರ ಚುಚ್ಚುಮದ್ದಿನ ಪರಿಣಾಮ ಜ್ವರ ಉಲ್ಬಣಗೊಂಡು ವಿಧಿಯಾಟಕ್ಕೆ ಬಲಿಯಾಗಿ ಪೋಲಿಯೋ ರೋಗಕ್ಕೆ ತುತ್ತಾಗಬೇಕಾಯಿತು. ಮೂರು ವರ್ಷದ ಮಗುವಿಗೆ ಆದ ದುಷ್ಪರಿಣಾಮ ನೆನೆದ ತಾಯ್ತಂದೆಯರು ಮನದಲ್ಲಿ ಮರುಗುತ್ತ ಬಹಳವೇ ಕಷ್ಟಪಟ್ಟು ಅತ್ಯಂತ ಕ್ರಮಬದ್ಧವಾಗಿ ಜೋಪಾನ ಮಾಡಿ ಬೆಳೆಸಿದರು.
ತನಗಾದ ದೈಹಿಕ ಅಸ್ವಸ್ಥತೆಯನ್ನು ಲೆಕ್ಕಿಸದ ಮಹಾಜಬೀನ್ರವರು ತಮ್ಮ ಬುದ್ಧಿವಂತಿಕೆಯಿಂದ ಶಿಕ್ಷಣದಲ್ಲಿ ಅಪಾರ ಪ್ರಮಾಣದ ಏಳ್ಗೆಯನ್ನು ಕಂಡರು. ಪ್ರಾಥಮಿಕ ಶಿಕ್ಷಣವನ್ನು ಆಲಮಟ್ಟಿಯಲ್ಲಿ, ಪ್ರೌಢ ಶಿಕ್ಷಣವನ್ನು ವಿಜಯಪುರದ ಡಿ.ಎನ್.ದರ್ಬಾರ್ ಶಾಲೆಯಲ್ಲಿ ಪೂರ್ಣಗೊಳಿಸಿ ಶೇ.92 ಅಂಕಗಳನ್ನು ಪಡೆದರು.
ಸ್ವಾಭಿಮಾನದಿಂದ ಮುನ್ನಡೆದು ವಿಜಯಪುರದಲ್ಲಿ ಮುಂದಿನ ಶಿಕ್ಷಣ ಪಡೆಯಲು ಅನಾನುಕೂಲವಾದಾಗ ಧಾರವಾಡಕ್ಕೆ ಬಂದು ಎಸ್.ಡಿ.ಎಮ್. ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದು ತಮ್ಮ ಸಾಮರ್ಥ್ಯವನ್ನು ತೋರಿದವರು.
ಮುಂದೆ ವೈದ್ಯಕೀಯ ರಂಗವನ್ನು ಪ್ರವೇಶ ಮಾಡಿದ ಮಹಾಜಬೀನ್ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಎಮ್.ಬಿ.ಬಿ.ಎಸ್. ಅಧ್ಯಯನ ಆರಂಭಿಸಿದರು. ಹಾಸ್ಟೇಲ್ನಲ್ಲಿದ್ದಕೊಂಡು ಸ್ನೇಹಿತರ ಸಹಕಾರಗಳಿಂದ ವಿವಿಧ ಆಯಾಮಗಳಲ್ಲಿ ಕಾರ್ಯನಿರ್ವಹಿಸಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದರು. ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಮ್.ಡಿ. ಕೋರ್ಸ್ ಸೇರ್ಪಡೆಗೊಂಡು ಚರ್ಮರೋಗ ವಿಭಾಗದಲ್ಲಿ ಸಂಶೋಧನೆ ಕೈಗೊಂಡರು. ಅಧ್ಯಯನ ಸಂದರ್ಭದಲ್ಲಿ ಅನೇಕ ರೋಗಿಗಳ ಚರ್ಮಕಾಯಿಲೆಯನ್ನು ಗುಣಮುಖಗೊಳಿಸುವಲ್ಲಿ ಯಶಸ್ವಿಯಾದ ಮಹಾಜಬೀನ್ ಎಲ್ಲರ ಮೆಚ್ಚಿನವರಾದರು. ಇವರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದವರ ಮುಂದೆಯೇ ಏನೆಲ್ಲ ಸಾಧನೆ ಮಾಡಿ ತೋರಿಸಿದರು.
ತಮ್ಮ ಸಂಕಲ್ಪ ಮತ್ತು ದಿಟ್ಟ ನಡೆಗಳಿಂದ ವಿಕಲಾಂಗತೆಯನ್ನು ಹೋಗಲಾಡಿಸುವಲ್ಲಿ ಇಂದಿಗೂ ಸಹ ಉಚಿತ ಸೇವೆ ನೀಡುವ ಮುಖಾಂತರ ಲೋಕಪ್ರಖ್ಯಾತರಾಗಿದ್ದಾರೆ. ಬಾಗಲಕೋಟೆಯ ಹೃದಯಭಾಗದಲ್ಲಿ ಮದರಕರ್ ಆಸ್ಪತ್ರೆ ತೆರೆದು ಅನೇಕ ಉಚಿತ ಶಿಬಿರಗಳನ್ನು, ವೈದ್ಯಕೀಯ ತಪಾಸಣೆಗಳನ್ನು ಆಯೋಜಿಸಿ ಅನೇಕರಿಗೆ ಆಶಾಜ್ಯೋತಿಯಾಗಿದ್ದಾರೆ. ಡಾ. ಮಹಾಜಬೀನ್ `ಮದರಕರ್ ಚಾರಿಟೇಬಲ್ ಫೌಂಡೇಶನ್’ನ ನಿರ್ದೇಶಕರಾಗಿ, ಬೀಳಗಿಯ ಎಸ್.ಆರ್. ಪಾಟೀಲ ಮೆಡಿಕಲ್ ಕಾಲೇಜಿನ ಚರ್ಮರೋಗಶಾಸ್ತç ವಿಭಾಗದ ಮುಖ್ಯಸ್ಥರಾಗಿ, ಬಾಗಲಕೋಟೆಯ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರ ಕಾರ್ಯನಿಷ್ಠೆ ಮತ್ತು ಸೇವಾತತ್ಪರತೆಯನ್ನು ಅವಗಾಹಿಸಿದ ಕರ್ನಾಟಕ ಸರ್ಕಾರ ಅಂಗವಿಲ ದಿನಾಚರಣೆಯಂದು 2014-15ನೇ ಸಾಲಿನ ರಾಜ್ಯಪ್ರಶಸ್ತಿ ನೀಡಿದೆ. ಅಲ್ಲದೇ ನಾಡಿನ ಹಲವಾರು ಮಠ-ಮಾನ್ಯಗಳು, ಸಂಘ-ಸಂಸ್ಥೆಗಳು ಪದವಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.
ಇದೀಗ, ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠವು ಮಾ. 22ರಂದು ಶ್ರೀಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ, ನಾಡಿನ ಶ್ರೀಗಳ, ವಿವಿಧ ಗಣ್ಯಮಾನ್ಯ ಪ್ರತಿಷ್ಠಿತ ರಾಜಕೀಯ ಮುತ್ಸದ್ಧಿಗಳ, ಸದ್ಭಕ್ತರ ಸಹಯೋಗದಲ್ಲಿ ಜರುಗುವ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಧರ್ಮ ಸಮಾರಂಭದ ಸುಸಂದರ್ಭದಲ್ಲಿ ಅತ್ಯುನ್ನತವಾದ `ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತಿದೆ. ಈ ಪ್ರಶಸ್ತಿಯು ಕಂಚಿನ ಪತ್ರ ಸಮೇತ 1 ಲಕ್ಷ ರೂಪಾಯಿ ನಗದು ಬಹುಮಾನ ಹೊಂದಿದೆ.
– ಡಾ. ಗುರುಪಾದಯ್ಯ ವೀ. ಸಾಲಿಮಠ.
ಸವಣೂರು.
ವಿಶೇಷ ವಿಕಲ ಚೇತನರಿಗೆ ಮತ್ತು ವಯೋವೃದ್ಧರಿಗಾಗಿ ಮದರಕರ ಚಾರಿಟೇಬಲ್ ಸಂಸ್ಥೆಯನ್ನು ಸ್ಥಾಪಿಸಿ ಅತ್ಯುನ್ನತ ಸ್ತರದ ನೆರವನ್ನು ಚಾಚಿದವರು. ವಿಶೇಷ ಚೇತನರ ಮತ್ತು ವಯೋವೃದ್ಧರ ಸಂಪೂರ್ಣ ಆರೋಗ್ಯ ತಪಾಸಣೆ ಮತ್ತು ಔಷಧೋಪಚಾರಗಳನ್ನು ಬಡವರಿಗೆ ಉಚಿತವಾಗಿ ನೀಡುವುದಲ್ಲದೇ ಸಮಗ್ರ ಆರೋಗ್ಯಯುಕ್ತ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ತೊಟ್ಟು ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಲಕ್ಷಾಂತರ ಜನರ ಬದುಕಿಗೆ ವಿಶೇಷ ಚೈತನ್ಯವಿಟ್ಟು ಆರೋಗ್ಯಪೂರ್ಣ ಬದುಕನ್ನು ನೀಡಿರುವುದು ಸಂತೋಷದ ಸಂಗತಿ.