ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: 1997ರಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯು ತಿದ್ದುಪಡಿಯಿಂದ ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರಕಾರವಾಗಿ ಪರಿವರ್ತನೆಯಾಗಿದ್ದರಿಂದ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗಲು ಸಾಧ್ಯವಾಯಿತು ಎಂದು ಕರ್ನಾಟಕ ರಾಜ್ಯ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಉಪಕುಲಪತಿ ಎಸ್.ವಿ. ನಾಡಗೌಡರ ಹೇಳಿದರು.
ಇಲ್ಲಿಯ ಎಂ.ಕೆ.ಬಿ.ಎಸ್ ಶಾಲೆಯಲ್ಲಿ ಗ್ರಾ.ಪಂ ವತಿಯಿಂದ ಏರ್ಪಡಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಹಾಗೂ ವಿಕಲಚೇತನರ ಗ್ರಾಮ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪಂಚಾಯತ್ ರಾಜ್ ಕಾಯ್ದೆಯನ್ನು 2015ರಲ್ಲಿ ಗ್ರಾಮ ಸ್ವರಾಜ್ ಕಾಯ್ದೆಯನ್ನಾಗಿ ಅಂದಿನ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಎಚ್.ಕೆ. ಪಾಟೀಲರು ಗದಗದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಿ ಬದಲಾವಣೆ ಮಾಡಿದ್ದರಿಂದ ಮಕ್ಕಳ, ಮತ್ತು ಮಹಿಳಾ ಮತ್ತು ವಿಕಲಚೇತನರ ಅಭಿವೃದ್ಧಿ ಕಾಯ್ದೆಗಳು ಜಾರಿಗೆ ಬಂದವು. ಇದರಿಂದ ಗ್ರಾಮೀಣ ಜನ ಜೀವನ ಸುಧಾರಣೆಯಾಗಿದೆ. ಸ್ಥಳೀಯ ಸರಕಾಗಿರುವ ಗ್ರಾಮ ಪಂಚಾಯಿತಿಯು ತಮ್ಮ ಶಾಲೆಗಳ ಮೂಲಭೂತ ಸೌಲಭ್ಯವನ್ನು ಕಲ್ಪಿಸಿ ಕಲಿಕಾ ಪರಿಸರವನ್ನು ನಿರ್ಮಿಸಿಕೊಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಕಳೆದ ಗ್ರಾಮ ಸಭೆಯಲ್ಲಿ ಮಕ್ಕಳು ಕೇಳಿದ ಕುಡಿಯುವ ನೀರು, ಶೌಚಾಲಯ, ಮೈದಾನ, ಕಾಂಪೌಂಡ್ ನಿರ್ಮಾಣ ಸೇರಿದಂತೆ ಪ್ರೋತ್ಸಾಹದಾಯಕವಾಗಿ ಬಹುಮಾನ ಕೊಡಲಾಗಿದೆ. ಈಗ ಮಕ್ಕಳು ಕೇಳಿರುವ ಬಸ್ ಸೌಲಭ್ಯ, ಹೆಚ್ಚಿನ ಶೌಚಾಲಯ, ಕಾಂಪೌಂಡ್ ನಿರ್ಮಾಣ, ಆಟದ ಮೈದಾನ, ಶಾಲೆಗೆ ಸುಣ್ಣ-ಬಣ್ಣ, ಪರಿಸರ ನೈರ್ಮಲ್ಯ ಕಾಪಾಡುವುದು ಸೇರಿದಂತೆ ಶಿಕ್ಷಣ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗುವುದು ಎಂದು ಭರವಸೆ ನೀಡಿದರು.
ವೈಧ್ಯಾಧಿಕಾರಿ ಅಮೃತ ಹರಿದಾಸ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ ಕೇಂದ್ರ ಆಡಳಿತಾಧಿಕಾರಿ ಸುಜಾತಾ ಶಾಸ್ತ್ರಿಮಠ, ಸಖಿ ಕೇಂದ್ರದ ಕಾನೂನು ಸಲಹಗಾರರಾದ ಖಾಜಿಮುನ್ನಿ ನಾಯ್ಕರ, ಸಿ.ಡಿ.ಪಿ.ಒ ಸಂರಕ್ಷಣಾಧಿಕಾರಿ ರಾಜೇಶ್ವರಿ ಮೇಟಿ, ಸಿ.ಡಿ.ಪಿ.ಒ ಮಿಷನ್ ಶಕ್ತಿಯ ಯೋಜನೆಯ ಮಧುಶ್ರೀ ಉಪ್ಪಾರ, ತಾ.ಪಂ ನರೇಗಾ ಯೋಜನೆಯ ಸಹಾಯಕ ನಿರ್ದೆಶಕ ಕುಮಾರ ಪೂಜಾರ ಮಾತನಾಡಿದರು. ಪಿ.ಡಿ.ಒ ಅಮೀರನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಯಶೋದಾ ಉಪ್ಪಿನ, ಅಶೋಕ ಬೂದಿಹಾಳ, ಚಂದ್ರಕಲಾ ಮಾಡಲಗೇರಿ, ವೈ.ಎಚ್. ತೆಕ್ಕಲಕೋಟಿ, ಉದ್ದಣ್ಣವರ, ಶಾಹಿದಾಬೇಗಂ ಹತ್ತಿವಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷೆ ನಾಗಮ್ಮ ಹಾಲಿನವರ ಸೇರಿದಂತೆ ಗ್ರಾ.ಪಂ ಸರ್ವ ಸದಸ್ಯರು, ವಿವಿಧ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಉಪಸ್ಥಿತರಿದ್ದರು. ವೈ.ವೈ. ಬೆಟಗೇರಿ ಸ್ವಾಗತಿಸಿದರು. ಎಸ್.ಎಚ್. ಶೆಟ್ಟಿನಾಯ್ಕರ ನಿರೂಪಿಸಿ ವಂದಿಸಿದರು.
ಮೂಲಭೂತ ವ್ಯವಸ್ಥೆ ಕಲ್ಪಿಸಿ
257ಕ್ಕೂ ಹೆಚ್ಚು ಮಕ್ಕಳಿರುವ ಬಾಲಕಿಯರ ಸರಕಾರಿ ಪ್ರೌಢಶಾಲೆಗೆ ಹೆಚ್ಚುವರಿಯಾಗಿ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಬಾಲಕಿಯರು ಒತ್ತಾಯಿಸಿದರು. ಶಾಲೆಗೆ ಸುಣ್ಣ-ಬಣ್ಣ, ಶೌಚಾಲಯ, ಕ್ರೀಡಾ ಮೈದಾನ ಅಭಿವೃದ್ಧಿಗೊಳಿಸಿ ಶಾಲಾ ಪರಿಸರವನ್ನು ಅನೈತಿಕ ಚಟುವಟಿಕೆಯಿಂದ ರಕ್ಷಿಸಬೇಕು ಎಂದು ಕೆ.ಜಿ.ಎಸ್ ಹೆಣ್ಣು ಮಕ್ಕಳ ಶಾಲೆಯ ಮಕ್ಕಳು ಆಗ್ರಹಿಸಿದರು. ಎಂಕೆ.ಬಿಎಸ್ ಶಾಲೆಯ ಮಕ್ಕಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಲು ಎಲ್ಲಾ ಶಾಲೆಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಬೇಕು ಎಂದು ಡಿ.ಪಿ.ಇ.ಪಿ ಪ್ರಾಥಮಿಕ ಶಾಲೆಯ ಮಕ್ಕಳು ವಿನಂತಿಸಿಕೊಂಡರು. ಸರಕಾರಿ ಉರ್ದು ಶಾಲೆಯ ಮಕ್ಕಳು ಮೈದಾನ ಮತ್ತು ಶೌಚಾಲಯ ನಿರ್ಮಿಸಿ ಕೊಡಬೇಕೆಂದರು. ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ಮಕ್ಕಳು ಮೈದಾನ ಅಭಿವೃದ್ಧಿ ಮತ್ತು ಬಸ್ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕೆಂದು ಕೇಳಿಕೊಂಡರು.