ವಿಜಯಸಾಕ್ಷಿ ಸುದ್ದಿ, ರೋಣ: ವೈದ್ಯ ವೃತ್ತಿ ಅತ್ಯಂತ ಪವಿತ್ರ ಎನ್ನುವುದನ್ನು ಸಾಬೀತು ಮಾಡಿದ್ದು ಡಾ. ಕೆ.ಬಿ. ಧನ್ನೂರ ಎನ್ನುವುದರಲ್ಲಿ ಸಂದೇಹವಿಲ್ಲ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ರವಿವಾರ ಆರ್ಜಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಡಾ. ಕೆ.ಬಿ. ಧನ್ನೂರರ `ಸಮಾಜಮುಖಿ’ ಅಭಿನಂದನಾ ಗ್ರಂಥ ಬಿಡುಗಡೆ ಮತ್ತು ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಓರ್ವ ಮನುಷ್ಯ ಸಮಾಜದಲ್ಲಿ ಹಣ ಗಳಿಸುವುದು ಸುಲಭ. ಆದರೆ ಹೆಸರು ಗಳಿಸುವುದು ಕಷ್ಟದ ಕೆಲಸ. ಇದಕ್ಕೆ ಅಪವಾದ ಎನ್ನುವಂತೆ ಡಾ. ಕೆ.ಬಿ. ಧನ್ನೂರರು ನನಗೆ ಹಣ ಮುಖ್ಯವಲ್ಲ, ಬದಲಾಗಿ ನನ್ನ ಬಳಿ ಬಂದ ರೋಗಿ ಗುಣಮುಖರಾದರೆ ಸಾಕು ಎನ್ನುತ್ತಾ ಸಮಾಜ ಸೇವೆಗೈದರು. ಇಂದು ಅವರ ಮಗನೂ ಸಹ ಪ್ರಸಿದ್ಧ ವೈದ್ಯನಾಗಿ ಬಡವರ ಸೇವೆಯನ್ನು ಮಾಡುತ್ತಾ ಸಾಗಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಮಾಜಿ ಸಂಸದ ಆರ್.ಎಸ್. ಪಾಟೀಲ ವಹಿಸಿದ್ದರು.
ಮುಪ್ಪಿನ ಬಸವಲಿಂಗ ಶ್ರೀಗಳು, ಗುರುಪಾದ ಶ್ರೀಗಳು, ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು, ಅಭಿನವ ಚನ್ನಬಸವ ಶ್ರೀಗಳು ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು. ಎಂ.ಎಸ್. ಧಡೆಸೂರಮಠರು ಡಾ. ಕೆ.ಬಿ. ಧನ್ನೂರ ನಡೆದು ಬಂದ ಹಾದಿ ಕುರಿತು ಉಪನ್ಯಾಸ ನೀಡಿದರು. ಡಾ. ಕೆ.ಬಿ. ಧನ್ನೂರ ದಂಪತಿಗಳನ್ನು ಅವರ ಅಭಿಮಾನಿಗಳು ಹಾಗೂ ಸಾರ್ವಜನಿಕರು ಸನ್ಮಾನಿಸಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ, ಐ.ಎಸ್. ಪಾಟೀಲ, ವಿ.ಆರ್. ಗುಡಿಸಾಗರ, ವೀರಣ್ಣ ಶೆಟ್ಟರ, ಬಸವರಾಜ ನವಲಗುಂದ, ಪ್ರಭು ಮೇಟಿ, ಯೂಸುಪ್ ಇಟಗಿ, ಪರಶುರಾಮ ಅಳಗವಾಡಿ, ವಿ.ಬಿ. ಸೋಮನಕಟ್ಟಿಮಠ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ಗ್ರಾಮೀಣ ಭಾಗಗಳಲ್ಲಿ ವೈದ್ಯರು ಸೇವೆ ಸಲ್ಲಿಸುವುದು ಅತ್ಯಂತ ವಿರಳ. ಆದರೆ ಡಾ. ಕೆ.ಬಿ. ಧನ್ನೂರರು ಕಳೆದ 50 ವರ್ಷಗಳಿಂದ ನರೆಗಲ್ಲ ಗ್ರಾಮದಲ್ಲಿ ತಮ್ಮ ವೈದ್ಯ ವೃತ್ತಿಯ ಸೇವೆ ಮಾಡುತ್ತ ಆ ಭಾಗದ ಜನರಿಗೆ ಚಿರಪರಿಚಿತರು. ದಿನದ 24 ಗಂಟೆಗಳ ಕಾಲ ಯಾವುದೇ ಸಮಯ ಹಾಗೂ ಸಂದರ್ಭಗಳಲ್ಲಿಯೂ ಆಸ್ಪತ್ರೆಗೆ ತೆರಳಿದರೆ ಸಾಕು, ಅಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎಂಬ ಭರವಸೆಯನ್ನು ಜನರು ಹೊಂದಿದ್ದರು. ಹೀಗಾಗಿ ಅವರ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಅಭಿಪ್ರಾಯಪಟ್ಟರು.