ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮನುಷ್ಯನ ಮನಸ್ಸಿಗೂ ದೇಹಕ್ಕೂ ಅವಿನಾಭಾವ ಸಂಬಂಧವಿದೆ. ಮನಸ್ಸು ಹಿಗ್ಗಿದಾಗ ದೇಹವು ಹಿಗ್ಗುತ್ತದೆ, ಮನಸ್ಸು ಕುಗ್ಗಿದಾಗ ದೇಹವು ಕುಗ್ಗುತ್ತದೆ. ಆದ್ದರಿಂದ ಮನಸ್ಸು ಯಾವಾಗಲೂ ಖುಷಿಯಿಂದ ಇರುವಂತೆ ನೋಡಿಕೊಳ್ಳಬೇಕೆಂದು ಹಾಲಕೆರೆ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗಶ್ರೀಗಳು ಹೇಳಿದರು.
ಪಟ್ಟಣದ ಕೋಡಿಕೊಪ್ಪದಲ್ಲಿನ ಶ್ರೀ ಅನ್ನದಾನೇಶ್ವರ ಮಂಟಪದಲ್ಲಿ ಮಂಗಳವಾರ ನಡೆದ ದಾನಿ ಪಾರ್ವತಮ್ಮ ಮೆಣಸಿಗಿಯವರ 12ನೇ ಪುಣ್ಯ ಸ್ಮರಣೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡುತ್ತಿದ್ದರು.
ಯಾರು ಹೆತ್ತ ತಂದೆ-ತಾಯಿಗಳ ಸೇವೆಯನ್ನು ಮನಃಪೂರ್ವಕವಾಗಿ ಮಾಡುತ್ತಾರೆಯೋ ಅಂಥವರ ಜೀವನ ಅರ್ಥಪೂರ್ಣವಾಗಿರುತ್ತದೆ. ತಮ್ಮ ತಾಯಿ ಪಾರ್ವತಮ್ಮ 97 ವರ್ಷ ಬದುಕಲು ಮಲ್ಲಿಕಾರ್ಜುನ ಅವರನ್ನು ನೋಡಿಕೊಂಡ ರೀತಿಯೇ ಕಾರಣ. ತಾನೆಲ್ಲಿ ಮದುವೆಯಾದರೆ ಬಂದ ಮಡದಿ ತನ್ನ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲವೋ ಎಂಬ ದಿಗಿಲಿನಿಂದ ಬ್ರಹ್ಮಚಾರಿಯಾಗಿಯೇ ಉಳಿದ ಮಲ್ಲಿಕಾರ್ಜುನ ತನ್ನ ಸಂಪಾದನೆಯನ್ನೆಲ್ಲ ಮಠಕ್ಕೆ ಧಾರೆಯೆರೆಯುವ ಮೂಲಕ ದಾನದ ಮಹತ್ವವನ್ನು ಸಾರಿ ಹೇಳಿದ್ದಾರೆ. ಅಂತಹ ಗುಣವನ್ನು ಮಗನಲ್ಲಿ ಬೆಳೆಸಿದ ತಾಯಿ ಪಾರ್ವತಮ್ಮನವರ ಪುಣ್ಯಸ್ಮರಣೆ ಮಾಡುತ್ತಿರುವುದು ನಮಗೂ ಸಂತೋಷ ತಂದಿದೆ ಎಂದು ತಿಳಿಸಿದ ಶ್ರೀಗಳು, ಪಾರ್ವತಮ್ಮನವರ ಹೆಸರಿನಲ್ಲಿ ಕಟ್ಟಡವೊಂದನ್ನು ನಿರ್ಮಿಸುವ ಯೋಚನೆಯಿದೆ ಎಂದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಅಡುಗೆ ಸಹಾಯಕರನ್ನು, ಸಿಬ್ಬಂದಿಯವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಎಫ್.ಎನ್. ಹುಡೇದ ಪಾರ್ವತಮ್ಮ ಮೆಣಸಗಿಯವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಾತ್ವಿಕ ಶಿರ್ಸಿ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಸ್ವಾಗತಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ಮಲ್ಲಿಕಾರ್ಜುನಪ್ಪ ಮೆಣಸಗಿ, ಸಿ.ಐ. ಮರಡಿಮಠ, ಎಂ.ಡಿ. ಕಮತರ, ಡಾ. ಎಸ್.ಎ. ಪಾಟೀಲ ಉಪಸ್ಥಿತರಿದ್ದರು. ಶಿಕ್ಷಕ ಒಂಟೆಲಿ ನಿರೂಪಿಸಿ, ವಂದಿಸಿದರು.
ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಮನಸ್ಸು ಯಾವಾಗಲೂ ಪ್ರಫುಲ್ಲಿತವಾಗಿರುತ್ತದೆ. ಈ ಮೌಲ್ಯಗಳು ಸುಮ್ಮನೆ ಬರುವಂತಹವಲ್ಲ. ವ್ಯಕ್ತಿಗೆ ಸರಿಯಾದ ಸಂಸ್ಕಾರ ಇದ್ದಾಗ ಮಾತ್ರ ಈ ಮೌಲ್ಯಗಳು ಅವನಲ್ಲಿ ಬರಲು ಸಾಧ್ಯ. ಅಂತಹ ಜೀವನ ಮೌಲ್ಯಗಳನ್ನು ಪಾರ್ವತಮ್ಮ ತಮ್ಮ ಮಗ ಮಲ್ಲಿಕಾರ್ಜುನನಿಗೆ ನೀಡಿದ್ದರಿಂದ ಅವರು ತಮ್ಮದೆಲ್ಲವನ್ನೂ ತ್ಯಾಗ ಮಾಡಿ ಶ್ರೀಮಠದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಶ್ರೀ ಮುಪ್ಪಿನ ಬಸವಲಿಂಗಶ್ರೀಗಳು ತಿಳಿಸಿದರು.