ವಿಜಯಸಾಕ್ಷಿ ಸುದ್ದಿ, ಗದಗ : ನಿಮಗೆ ಗ್ಯಾರಂಟಿ ಉಳಿಯಬೇಕು, ಗ್ಯಾರಂಟಿ ಬೆಳೆಯಬೇಕು ಹಾಗೂ ರಾಜ್ಯದಲ್ಲಿ ಈಗಾಗಲೇ ನಿಮ್ಮ ಮನೆಗೆ ಬಂದಿರುವ ಗೃಹಲಕ್ಷ್ಮಿ, ಮುಂದಿನ ದಿನಗಳಲ್ಲಿ ಮಹಾಲಕ್ಷ್ಮಿಯಾಗಿ ಮನೆಗೆ ಬರಬೇಕು ಎಂದರೆ ಕಾಂಗ್ರೆಸ್ಗೆ ಆಶೀರ್ವಾದ ಮಾಡಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತದಾರರಲ್ಲಿ ಮನವಿ ಮಾಡಿದರು.
ನಗರದ 21ನೇ ವಾರ್ಡಿನ ಉಸಗಿನಗಟ್ಟಿ, ಯಲಿಗಾರ ಪ್ಲಾಟ್ನಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪರವಾಗಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ಬಡಜನತೆ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಆದರೆ, ಅವರ ದುಡಿಮೆ ಮಾತ್ರ ಶ್ರೀಮಂತರ ಮನೆ ಸೇರುತ್ತಿದೆ. ಇತ್ತೀಚೆಗೆ ಶ್ರೀಮಂತರೊಬ್ಬರು ಮಗನ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬರೊಬ್ಬರಿ 1,259 ಕೋಟಿ ರೂ. ಹಣವನ್ನು ಖರ್ಚು ಮಾಡಿದರು. ಮದುವೆಗೆ ಎಷ್ಟು ಖರ್ಚು ಮಾಡುತ್ತಾರೋ ಗೊತ್ತಿಲ್ಲ. ಅದು ಅವರು ಬೆವರು ಸುರಿಸಿದ ದುಡಿದ ದುಡ್ಡಾ ಎಂದು ಅವರು ಪ್ರಶ್ನಿಸಿದದರು.
ಶ್ರೀಮಂತರಿಗೆ ಕೋಟಿ ಕೋಟಿ ಸಾಲ ಮನ್ನಾ ಮಾಡಿದರೆ, ಶ್ರೀಮಂತರ ಆಸ್ತಿ ಜಾಸ್ತಿಯಾದರೆ ಅದು ಬಿಟ್ಟಿಭಾಗ್ಯ ಅಲ್ಲ. ಬೆವರು ಸುರಿಸಿ ದುಡಿದು ಸಂಸಾರ ನಡೆಸುವವರಿಗೆ, ಕಷ್ಟ ಪಡುವ ಸಾಮಾನ್ಯ ಜನರಿಗೆ ತಿಂಗಳಿಗೆ 5 ಸಾವಿರ ರೂ. ಕೊಟ್ಟರೆ ಅದು ಬಿಟ್ಟಿ ಭಾಗ್ಯ ಎಂದು ಗೇಲಿ ಮಾಡುತ್ತಿರುವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ, ನಗರಸಭೆ ಸದಸ್ಯ ಚಿಮ್ಮಿ ನದಾಫ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಮುಖಂಡರಾದ ರಾಮಣ್ಣ ಫಲದೊಡ್ಡಿ, ನಾಗಪ್ಪ ಗುಗ್ಗರಿ, ಶರಣಪ್ಪ ಅಬ್ಬಿಗೇರಿ, ಪರಪ್ಪ ಕಮತರ, ರಂಜಾನಸಾಬ್ ಅಣ್ಣಿಗೇರಿ, ಕಲಂದರಸಾಬ್ ಹುಬ್ಬಳ್ಳಿ, ಜಾಕೀರಸಾಬ್ ಕುನ್ನಿಬಾವಿ, ಪರಮೇಶಪ್ಪ ಜಂತ್ಲಿ, ಮಕ್ತುಂಸಾಬ್ ಹುಬ್ಬಳ್ಳಿ, ಅಬ್ದುಲ್ ಮುನಾಫ್ ಮುಲ್ಲಾ ಮುಂತಾದವರು ಇದ್ದರು.
ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಸುಳ್ಳು, ಮೋಸ ಮಾಡುವ ಪ್ರವೃತ್ತಿ ಉಳ್ಳವರಿಗೆ ತಕ್ಕ ಶಾಸ್ತಿ ಮಾಡಬೇಕಿದೆ. ಕಳೆದ ಚುನಾವಣೆಯಲ್ಲಿ 21ನೇ ವಾರ್ಡಿನ ಮತದಾರರು ಕೇವಲ 51 ಮತಗಳ ಲೀಡ್ ಕೊಟ್ಡಿದ್ದೀರಿ. ಈ ಬಾರಿ ಕನಿಷ್ಠ 500 ಮತಗಳ ಲೀಡ್ ಕೊಡಲೇಬೇಕು. ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ವಿಶೇವಾಗಿ ಆಶೀರ್ವಾದ ಮಾಡಿ ಸಂಸತ್ತಿಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.