ವಿಜಯಸಾಕ್ಷಿ ಸುದ್ದಿ, ಗದಗ : ಬಡವರ, ಸಣ್ಣ ರೈತರ ಪ್ರಕರಣಗಳ ಪರಿಹಾರಕ್ಕಾಗಿ ಮಾ. 4ರಂದು ರಾಜ್ಯಾದ್ಯಂತ ನೂತನ ಕಾನೂನು ಜಾರಿಗೆ ಬರಲಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗದಗ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರ, ಸಣ್ಣ ರೈತರ ಪ್ರಕರಣಗಳು ಕೋರ್ಟ್ಗಳಲ್ಲಿ ವಿಳಂಬವಾಗದ ರೀತಿಯಲ್ಲಿ ಆದ್ಯತೆ ಮೇರೆಗೆ ಪ್ರಕರಣ ನಡೆಸುವ ಮೂಲಕ 6 ತಿಂಗಳೊಳಗಾಗಿ ಬಡವರ, ಸಣ್ಣ ರೈತರ ಪ್ರಕರಣಗಳು ಪರಿಹರಿಸಬೇಕು ಎಂಬ ಮಸೂದೆಯನ್ನು ಜಾರಿಗೆ ತರಲಾಗಿತ್ತು.
ಮಸೂದೆಯು ವಿಧಾನ ಪರಿಷತ್ ಹಾಗೂ ವಿಧಾನಸಭೆಯಲ್ಲಿ ಪಾಸಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದ್ದರು. ಫೆ. 18ರಂದು ರಾಷ್ಟ್ರಪತಿಗಳು ಮಸೂದೆಗೆ ಅಂಕಿತ ಹಾಕಿದ್ದು, ಸರಕಾರ ರಾಜ್ಯಪತ್ರದಲ್ಲಿ ಫೆ. 29ರಂದು ಮಸೂದೆ ಜಾರಿಗೆ ಬರುವಂತೆ ಗೆಜೆಟ್ ನೊಟಿಫಿಕೇಶನ್ ಜಾರಿ ಮಾಡಿದೆ. ಮಾ. 4ರಿಂದ ಈ ಕಾನೂನು ಜಾರಿಗೆ ಬರಲಿದೆ. ಈ ಕಾನೂನು ರಾಜ್ಯದಲ್ಲಿಯೇ ಬಡವರಿಗೆ ನ್ಯಾಯಾಲಯದ ವಿಶೇಷ ಆದ್ಯತೆ ಮಾಡುವ ಮೊದಲ ಕಾನೂನು ಆಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ್, ವಾರ್ತಾಧಿಕಾರಿ ವಸಂತ ಮಡ್ಲೂರ, ತಹಸೀಲ್ದಾರ ಶ್ರೀನಿವಾಸ ಮೂರ್ತಿ ಕುಲಕರ್ಣಿ ಹಾಜರಿದ್ದರು.
ಈಗಾಗಲೇ ಹಲವಾರು ಕಾನೂನುಗಳಲ್ಲಿ ಬಡವರು, ಸಣ್ಣ ರೈತರು ಎಂಬ ಮಾನದಂಡಗಳನ್ನು ತಿಳಿಸಲಾಗಿದೆ. ಮಾ. 4 ರಂದು ಕಾನೂನು ಜಾರಿಗೆ ಬರುವ ನೋಟಿಫಿಕೇಶನ್ನಲ್ಲಿ ಯಾರು ಯಾರು ಬಡವರ, ಸಣ್ಣ ರೈತರು ಎಂಬುದರ ಬಗ್ಗೆ ವಿವರಣೆ ನೀಡಲಾಗಿದೆ.
ಎಚ್.ಕೆ. ಪಾಟೀಲ, ಗದಗ ಜಿಲ್ಲಾ ಉಸ್ತುವಾರಿ ಸಚಿವರು