ದಾವಣಗೆರೆ:- ಹಿಂದೂಗಳ ಸಂಖ್ಯೆ ಹೆಚ್ಚಾಗಬೇಕು, ಇಲ್ಲದಿದ್ರೆ ಭಾರತ ಪಾಕಿಸ್ತಾನ್ ಆಗುತ್ತೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಹಿಂದೂಗಳ ಸಂಖ್ಯೆ ಹೆಚ್ಚಾಗದೇ ಇದ್ದರೆ ಭಾರತ, ಪಾಕಿಸ್ತಾನ ಆಗಲಿದೆ. ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಹಿಂದೂ ಸಂಸ್ಕೃತಿ ಸರ್ವನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಸಂಕಲ್ಪವನ್ನು ಸಂಘ ಪರಿವಾರ ಮಾಡುತ್ತಿದೆ. ಈಗ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ ಕೆಲಸವು ಅದೇ ಆಗಿದೆ ಎಂದಿದ್ದಾರೆ.
ದೇಶ ಉಳಿಯಬೇಕು, ಹಿಂದೂ ಸಂಸ್ಕೃತಿ ಉಳಿಯಬೇಕು ಎಂಬುದು ನಮ್ಮ ಆಶಯ. ಅದ್ದರಿಂದ ಹಿಂದೂಗಳ ಸಂಖ್ಯೆ ಹೆಚ್ಚಾಗಬೇಕಿದೆ. ದೇಶದಲ್ಲಿ ಮೆಕಾಲೆ ಶಿಕ್ಷಣ ಪ್ರಭಾವ ಹೆಚ್ಚಾಗಿದೆ. ಎಲ್ಲರೂ ತಮ್ಮ ಭಾಷೆಗಳನ್ನು ಬಿಟ್ಟು ಇಂಗ್ಲಿಷ್ ಕಲಿಯಲು ಶುರು ಮಾಡಿದ್ದಾರೆ. ಆದರೆ ನಮ್ಮ ಸಂಸ್ಕೃತಿ ಉಳಿಯಬೇಕಾಗಿದೆ ಎಂದು ಹೇಳಿದ್ದಾರೆ.
ಸ್ವದೇಶಿ ವಸ್ತುಗಳನ್ನ ಬಳಸಿ ಎಂದು ಸಂಘ ಹೇಳುತ್ತಿದೆ. ನಾವು ಬೆಳಗ್ಗೆ ಎದ್ದು ಉಪಯೋಗಿಸುವ ಪೇಸ್ಟ್ನಿಂದ ಹಿಡಿದು ಎಲ್ಲವನ್ನೂ ಸ್ವದೇಶಿ ವಸ್ತು ಬಳಕೆ ಮಾಡಬೇಕು. ಈಗ ಸಂಘ ಪರಿವಾರ ಪಂಚ ಪರಿವರ್ತನೆ ಜಾರಿಗೆ ತರಲಿದೆ. ಸ್ವದೇಶಿ ಬ್ರಹ್ಮೋಸ್ ಪ್ರಯೋಗ ಮಾಡಿ ಅಪರೇಷನ್ ಸಿಂದೂರ ಹೆಸರಿನಲ್ಲಿ ಪಾಕಿಸ್ತಾನವನ್ನು ಪುಡಿ ಪುಡಿ ಮಾಡಿದ್ದೇವೆ ಎಂದಿದ್ದಾರೆ.



