ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಬಹುತೇಕ ರಸ್ತೆಗಳು ಹಾಳಾಗಿದ್ದು, ರಸ್ತೆ ದುರಸ್ಥಿ-ಮರು ನಿರ್ಮಾಣಕ್ಕಾಗಿ ಸರ್ಕಾರಕ್ಕೆ ವರ್ಷಗಳಿಂದ ಮನವಿ, ಆಗ್ರಹ, ಹೋರಾಟ ನಡೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಆಯಾ ಭಾಗದ ಶಾಸಕರು, ಜನಪ್ರತಿನಿಧಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾ ಜಾಣ ಮೌನ ತಳೆಇದ್ದಾರೆ.
ಈ ನಡುವೆ ಅಲ್ಲಲ್ಲಿ ತೆರೆಮರೆಯಲ್ಲಿ ಸ್ಥಳೀಯರಿಂದಲೇ ಗುಂಡಿ ಮುಚ್ಚುವ ಕಾರ್ಯಗಳೂ ನಡೆಯುತ್ತಿವೆ. ಲಕ್ಷ್ಮೇಶ್ವರ -ಗದಗ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಗೊಜನೂರ ಗ್ರಾಮದ ಹಳ್ಳದ ಹತ್ತಿರ ಬಿದ್ದಿರುವ ಗುಂಡಿಗಳನ್ನು ಹೈವೇ ಮೊಬೈಲ್ ವಾಹನದ ಪೊಲೀಸ್ ಸಿಬ್ಬಂದಿಗಳು ಮುಚ್ಚುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸತತ ಮಳೆಯಿಂದಾಗಿ ರಸ್ತೆಯುದ್ದಕ್ಕೂ ಬಿದ್ದಿರುವ ಗುಂಡಿಗಳಿಂದ ವಾಹನ ಸವಾರರು ನಿತ್ಯ ತೊಂದರೆಗೀಡಾಗುತ್ತಿದ್ದರು. ಇದನ್ನು ಮನಗಂಡ ಈ ಮಾರ್ಗದಲ್ಲಿ ಸಂಚರಿಸುವ ಗಸ್ತು ಮೊಬೈಲ್ ವಾಹನದ ಪೊಲೀಸರು ಹಿರಿಯ ಪೊಲೀಸ್ ಅಧಿಕಾರಿಗಳ ಸಲಹೆ ಪಡೆದು ಈ ಮಾರ್ಗದಲ್ಲಿ ಎಂಸ್ಯಾಂಡ್, ಖಡಿ ಸಾಗಿಸುವ ವಾಹನದವರಿಗೆ ಮನವಿ ಮಾಡಿ ಹಲವರಿಂದ ಸ್ವಲ್ಪ ಪ್ರಮಾಣದ ಸಾಮಗ್ರಿ ಪಡೆದು ಸ್ವತಃ ಗುಂಡಿ ಮುಚ್ಚುವ ಕೆಲಸ ಮಾಡಿದರು.
ಹೈವೇ ಪಾಟ್ರೋಲ್ ಸಿಬ್ಬಂದಿ ಎಎಸ್ಐ ಯಲ್ಲಪ್ಪ ದೊಡ್ಡಮನಿ, ಪೇದೆ ಮಲ್ಲಿಕಾರ್ಜುನ್ ವಡ್ಡರ ಅವರು ಸಾಮಾಜಿ ಕಳಕಳಿಯ ಸೇವೆ ಮಾಡಿದ್ದಾರೆ. ಪೊಲೀಸರ ಈ ಕಾರ್ಯವಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಶಾಸಕರು, ಸಚಿವರ ಕಣ್ಣು ತೆರೆಸಲಿ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.