ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ತಂಬಾಕು ವ್ಯಸನದಿಂದಾಗುವ ದುಷ್ಪರಿಣಾಮ ಕೋಟ್ಪಾ ಕಾಯ್ದೆ-೨೦೦೩, ತಂಬಾಕು ಮುಕ್ತ ಶಿಕ್ಷಣ ಸಂಸ್ಥೆ ಹಾಗೂ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿನ ಸೌಲಭ್ಯಗಳ ಕುರಿತು ಪೊಲೀಸ್ ಇಲಾಖೆಯ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಗುರುಪ್ರಸಾದ ಕಾರ್ಯಕ್ರಮ ಉದ್ಘಾಟಿಸಿ ತಂಬಾಕು ಬಳಕೆಯಿಂದ ಪರಿಸರ ಹಾಗೂ ನಮ್ಮ ಸುತ್ತ ಮುತ್ತಲಿನ ಪ್ರದೇಶ ಕಲುಷಿತ ಹಾಗೂ ಅನಾರೋಗ್ಯ ವಾತಾವರಣ ಉಂಟಾಗುತ್ತಿರುವದನ್ನು ತಡೆಗಟ್ಟಲು ಕ್ರಮವಹಿಸಬೇಕೆಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ ಮಾತನಾಡುತ್ತ, ತಂಬಾಕು ನಿಯಂತ್ರಣ ಕುರಿತು ನಮ್ಮ ಇಲಾಖೆಯ ವತಿಯಿಂದ ವಿವಿಧ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳಿಗೆ, ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವದರ ಮೂಲಕ ಜಿಲ್ಲೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೋಟ್ಪಾ ಕಾಯ್ದೆ ಅನುಷ್ಠಾನಕ್ಕೆ ಮುಖ್ಯವಾಗಿ ಪೊಲೀಸ್ ಇಲಾಖೆ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್ನಂತಹ ಭಯಾನಕ ಖಾಯಿಲೆಗಳು, ಅಸಾಂಕ್ರಾಮಿಕ ಕಾಯಿಲೆಗಳು ಹೆಚ್ಚುತ್ತಿದ್ದು, ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಶೀಘ್ರ ಚಿಕಿತ್ಸೆ ಪಡೆಯಲು ತಿಳಿಸಿದರಲ್ಲದೆ, ಜಿಲ್ಲಾ ವ್ಯಸನಮುಕ್ತ ಕೇಂದ್ರದಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಉಪ ಪೊಲೀಸ್ ಅಧೀಕ್ಷಕ ಜೆ.ಎಚ್. ಇನಾಮದಾರ ಮಾತನಾಡಿ, ತಂಬಾಕು ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮ ಸೆರಿದಂತೆ ಇನ್ನಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಲ್ಲಿ, ಕೋಟ್ಪಾ ಕಾಯ್ದೆ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಇಲಾಖೆಯ ಸಹಕಾರ ಸದಾ ಇರುವದಾಗಿ ತಿಳಿಸಿದರು.
ಎನ್.ಟಿ.ಸಿ.ಪಿ. ಜಿಲ್ಲಾ ಸಲಹೆಗಾರ ಗೋಪಾಲ ಸುರಪುರ ಮಾತನಾಡಿ, ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-೨೦೦೩ ಕುರಿತು ಮಾತನಾಡುತ್ತಾ, ತಂಬಾಕು ಬಳಕೆ ಹಾಗೂ ಮಾರಾಟ ಕೋಟ್ಪಾ ಕಾಯ್ದೆಯಡಿ ಮಾಡಲು ಸೆಕ್ಷನ್ ೪ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, ಸೆಕ್ಷನ್ ೫ ತಂಬಾಕು ಉತ್ಪನ್ನಗಳ ನೇರ/ಪರೋಕ್ಷ ಜಾಹಿರಾತು ನಿಷೇಧ, ಸೆಕ್ಷನ್ ೬ಎ ೧೮ ವರ್ಷದೊಳಗಿನವರಿಗೆ ನಿಷೇಧ, ೬ಬಿ ಶಿಕ್ಷಣ ಸಂಸ್ಥೆಗಳ ಆವರಣದಿಂದ ೧೦೦ ಗಜದ ವರೆಗೆ ತಂಬಾಕು ನಿಷೇಧ, ಸೆಕ್ಷನ್ ೭ ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಆರೋಗ್ಯ ಎಚ್ಚರಿಕೆ ಚಿಹ್ನೆ ಕಡ್ಡಾಯ ಎಂದು ವಿವರಿಸಿದರು.
ಎಸ್.ಎಸ್. ಪೀರಾ ಕಾರ್ಯಕ್ರಮ ನಿರೂಪಿಸಿರು. ಯಮುನಾ ಪ್ರಾರ್ಥಿಸಿದರು. ವಿಠ್ಠಲ್ ನಾಯ್ಕ ಸ್ವಾಗತಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್. ರಬ್ಬನಗೌಡರ ವಂದಿಸಿದರು. ಕಾರ್ಯಕ್ರಮದಲ್ಲಿ ವೃತ್ತ ಪೊಲೀಸ್ ನಿರೀಕ್ಷಕರಾದ ಬಿ.ಎ. ಜಾದವ, ಶಿವಕುಮಾರ ಬಗಾಡೆ, ಪೈಯಾಜ ಎಂ, ಜಿಲ್ಲಾ ಸಮೀಕ್ಷಾ ಘಟಕದ ಸಿಬ್ಬಂದಿಗಳು, ಆರ್.ಡಿ.ಪಿ.ಆರ್ ವಿದ್ಯಾರ್ಥಿಗಳಾದ ಪವಿತ್ರ, ಸಿದ್ದು.ಎಸ್, ಯಮುನಾ ಹಾಜರಿದ್ದರು.
ಜಿಮ್ಸ್ ಸಹ ಪ್ರಾಧ್ಯಾಪಕ ಡಾ.ಅರವಿಂದ ಕರಿನಾಗಣ್ಣವರ್ ಮಾತನಾಡಿ, ತಂಬಾಕಿನಲ್ಲಿರುವ ನಿಕೋಟಿನ್ ಅಂಶ ದೇಹದಲ್ಲಿ ಸೇರಿ ನರಮಂಡಲದ ಕಾರ್ಯದ ಮೇಲೆ ಪರೀಣಾಮ ಬೀರಿ, ರಕ್ತ ಹಾಗೂ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ತಂಬಾಕು ತ್ಯಜಿಸಲು ನಮ್ಮ ಜೀವನ ಶೈಲಿಯಲ್ಲಿ ಕೈಗೊಳ್ಳಬೇಕಾದ ಬದಲಾವಣೆಗಳ ಕುರಿತು ಪರಿಣಾಮಕಾರಿ ತಿಳಿಸಿದರು.