ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಕಳೆದ 25 ವರ್ಷಗಳಿಂದ ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಇಲ್ಲಿಯವರೆಗೂ ಸಮಾಜದ ಕಲ್ಯಾಣಕ್ಕಾಗಿ ಮತ್ತು ಶ್ರೀಮಠದ ಅಭಿವೃದ್ಧಿಯಲ್ಲಿ ತೊಡಗಿದ್ದೇವೆ ಎಂದು ಬೆಳ್ಳಟ್ಟಿಯ ಶ್ರೀ ರಾಮಲಿಂಗೇಶ್ವರ ದಾಸೋಹಮಠದ ಬಸವರಾಜ ಸ್ವಾಮೀಜಿ ಹೇಳಿದರು.
ಅವರು ಕಳೆದ 60 ದಿನಗಳಿಂದ ಬೆಳ್ಳಟ್ಟಿಯ ಶ್ರೀ ರಾಮಲಿಂಗೇಶ್ವರ ದಾಸೋಹ ಮಠದಲ್ಲಿ ನಡೆದ ಬಸವ-ಪುರಾಣ ಪಠಣದ ಮಂಗಲೋತ್ಸವ ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗುರುಗಳು, ಹಿರಿಯರಾಗಿ ನಮ್ಮ ಜವಾಬ್ದಾರಿಯನ್ನು ನಿಭಾಯಿಸದಿದ್ದರೆ ಮುಂದಿನ ಅನಾಗರಿಕ ಸಮಾಜ ಸೃಷ್ಟಿಗೆ ಸಾಕ್ಷಿಯಾಗಬೇಕಾಗುತ್ತದೆ. ಅದಕ್ಕಾಗಿ ಮಂಟಪ ಪೂಜೆ ಮಾಡಿ ಗುರುಗಳು, ಪಾದಪೂಜೆ ಮತ್ತು ಪೂಜಾ ಕೈಂಕರ್ಯಗಳ ಮಹತ್ವವನ್ನು ಭಕ್ತರಿಗೆ ತಿಳಿಸಲಾಗಿದೆ. ಪುರಾಣ ಮಂಗಲ ಮಹೋತ್ಸವದ ದಿನದಂದು ಭಕ್ತರು ತಮ್ಮ ಮನೆಯಲ್ಲಿ ಮಾಡಿದ 8 ಕ್ವಿಂಟಲ್ ಮಾದಲಿಯನ್ನು ಶ್ರೀಮಠಕ್ಕೆ ತಂದು ದಾಸೋಹ ಮಾಡಿ ಭಕ್ತಿ ಸಮರ್ಪಿಸಿದ್ದಾರೆ. ಭಕ್ತರು ಕಷ್ಟಪಟ್ಟು ದುಡಿದು ಕೂಡಿಟ್ಟ ಹಣವನ್ನು ಶ್ರೀಮಠಕ್ಕೆ ದಾನವಾಗಿ ನೀಡಿ ಶ್ರೀಮಠವನ್ನು ಅಭಿವೃದ್ಧಿಪಡಿಸಲಾಗಿದೆ. ಆದ್ದರಿಂದ ಇದರಲ್ಲಿ ನಮ್ಮ ಕಾರ್ಯನಿಷ್ಠೆಗಿಂತ ಭಕ್ತರ ಶಕ್ತಿ ಮತ್ತು ಕಾಯಕ ದೊಡ್ಡದು ಎಂದು ಶ್ರೀಗಳು ಹೇಳಿದರು.
ಮಾಜಿ ಶಾಸಕ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಸಮಾನತೆ ತೋರಿಸುವ ಬಸವ ಪುರಾಣ ಹೇಳುವ ಮೂಲಕ ಭಕ್ತರ ಮನಸ್ಸನ್ನು ಶ್ರೀಗಳು ತಿಳಿಗೊಳಿಸಿದ್ದಾರೆ. ಪುರಾಣ ಮತ್ತು ವಚನಗಳನ್ನು ಕೇಳುವುದರ ಜೊತೆಗೆ ಅದರಲ್ಲಿನ ಶರಣರ ನಡೆ-ನುಡಿಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಆಗ ಮಾತ್ರ ನಾವು ಬದುಕಿನಲ್ಲಿ ಸಾರ್ಥಕತೆ ಕಾಣಲು ಸಾಧ್ಯವಾಗುತ್ತದೆ ಎಂದರು.
ಶಾಸಕ ಡಾ. ಚಂದ್ರು ಲಮಾಣಿ, ಸುಜಾತಾ ದೊಡ್ಡಮನಿ, ಶಿವಪ್ರಕಾಶ ಮಹಾಜನ ಶೆಟ್ಟರ ಮಾತನಾಡಿದರು. ಬನ್ನಿಕೊಪ್ಪ ಮಠದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಗಳು, ಶಿವಯೋಗೀಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಬೆಳ್ಳಟ್ಟಿ ಗ್ರಾ.ಪಂ ಅಧ್ಯಕ್ಷ ರಮೇಶ ನಿರ್ವಾಣಶೆಟ್ಟರ, ಸಣ್ಣವೀರಪ್ಪ ಹಳ್ಳೆಪ್ಪನವರ, ಹುಮಾಯೂನ ಮಾಗಡಿ, ತಿಮ್ಮರಡ್ಡಿ ಮರಡ್ಡಿ, ಶಿವನಗೌಡ ಪಾಟೀಲ, ಮೋಹನ ಗುತ್ತೆಮ್ಮನವರ, ಮಹೇಶ ಮೇಟಿ, ಸಿದ್ದರಾಮಪ್ಪ ಮೊರಬದ, ವಿರೂಪಾಕ್ಷ ನಂದೆಣ್ಣವರ, ಕೊಟ್ರೇಶ ಸಜ್ಜನ, ಆರ್.ಆರ್. ಗಡ್ಡದೇವರಮಠ, ಕಮಲಾ ತಾಯಿ, ಶಂಕರ ಮರಾಠಾ, ರಾಜೀವರಡ್ಡಿ ಬೊಮ್ಮನಕಟ್ಟಿ, ಸುರೇಶ ಬಸವರಡ್ಡಿ, ಮಹೇಶ ಶೆಟ್ಟಿಕೇರಿ ಮುಂತಾದವರು ಪಾಲ್ಗೊಂಡಿದ್ದರು.
ನೀಲಗೊಂದ ಮಠದ ಪ್ರಭುಲಿಂಗ ಸ್ವಾಮಿಗಳು ಮಾತನಾಡಿ, ಮಠದಿಂದ ಘಟ್ಟ ಗುರುತಿಸಬಾರದು, ಘಟ್ಟದಿಂದ ಮಠವನ್ನು ಗುರುತಿಸುವಂತಾಗಬೇಕು. ಈ ದಿಶೆಯಲ್ಲಿ ಏನೂ ಇಲ್ಲದ ಮಠಕ್ಕೆ ಬಂದು ಶ್ರೀಮಠವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಭಕ್ತರ ಮನಸ್ಸನ್ನು ಸ್ವಚ್ಛ ಮಾಡಿ ಭಕ್ತಿಯ ಬೆಳೆಯನ್ನು ಬೆಳೆದ ಕೀರ್ತಿ ಬಸವರಾಜ ಶ್ರೀಗಳಿಗೆ ಸಲ್ಲುತ್ತದೆ. ಕಳೆದ 60 ದಿನಗಳ ಕಾಲ ಮಠದಲ್ಲಿ ಬಸವ ಪುರಾಣ ಹೇಳುವ ಮೂಲಕ ತಮಗೆಲ್ಲ ಪುರಾಣ ಪುಣ್ಯ ಕಥೆಗಳ ರಸದೌತಣವನ್ನು ಬಡಿಸಿದ್ದಾರೆ ಎಂದರು.



