HomeKarnataka Newsಹೊಟ್ಟೆಯಲ್ಲಿ ಮದ್ಯದ ವಾಸನೆ ಇತ್ತು ಎಂಬ ಕಾರಣಕ್ಕೆ ಮದ್ಯ ಸೇವನೆ ದೃಢಪಡಿಸಲು ಸಾಧ್ಯವಿಲ್ಲ; ಹೈಕೋರ್ಟ್

ಹೊಟ್ಟೆಯಲ್ಲಿ ಮದ್ಯದ ವಾಸನೆ ಇತ್ತು ಎಂಬ ಕಾರಣಕ್ಕೆ ಮದ್ಯ ಸೇವನೆ ದೃಢಪಡಿಸಲು ಸಾಧ್ಯವಿಲ್ಲ; ಹೈಕೋರ್ಟ್

For Dai;y Updates Join Our whatsapp Group

ಬೆಂಗಳೂರು: ಶವಪರೀಕ್ಷೆ ವರದಿಯಲ್ಲಿ ಹೊಟ್ಟೆಯೊಳಗಿನ ಅಂಶಗಳಿಂದ ಮದ್ಯದ ವಾಸನೆ ಬಂದಿತ್ತು ಎಂಬ ಕಾರಣಕ್ಕೆ, ಅಪಘಾತ ಸಂಭವಿಸಿದ ವೇಳೆ ಮೃತ ಕಾರ್ಮಿಕ ಮದ್ಯದ ಅಮಲಿನಲ್ಲಿದ್ದ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಲಾರಿ ಚಾಲಕನ ಕಾನೂನುಬದ್ಧ ವಾರಸುದಾರರಿಗೆ ಪರಿಹಾರ ನೀಡಲು ನಿರಾಕರಿಸಿದ್ದ ರಸ್ತೆ ಅಪಘಾತಗಳ ಪರಿಹಾರ ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ವಿ. ಹೊಸಮನಿ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಮೃತ ಲಾರಿ ಚಾಲಕನ ಪತ್ನಿ ಹಾಗೂ ಮಕ್ಕಳು ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಪ್ರಕರಣವನ್ನು ಮತ್ತೆ ನ್ಯಾಯಾಧಿಕರಣಕ್ಕೆ ಹಿಂದಿರುಗಿಸಿರುವ ಪೀಠ, ಹೊಸದಾಗಿ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದೆ. ಅಲ್ಲದೆ, ಎರಡೂ ಪಕ್ಷಗಾರರು 2026ರ ಅಕ್ಟೋಬರ್ 27ರಂದು ನ್ಯಾಯಮಂಡಳಿ ಮುಂದೆ ಹಾಜರಾಗುವಂತೆ ಸೂಚಿಸಿದೆ.

ಪ್ರತ್ಯಕ್ಷ ಸಾಕ್ಷ್ಯವಿಲ್ಲದೆ ನಿರ್ಧಾರ ಸಾಧ್ಯವಿಲ್ಲ

ಅಪಘಾತದ ವೇಳೆ ಚಾಲಕ ಮದ್ಯದ ಅಮಲಿನಲ್ಲಿದ್ದ ಎಂಬ ನಿರ್ಧಾರವನ್ನು ನ್ಯಾಯಮಂಡಳಿ ಕೇವಲ ಶವಪರೀಕ್ಷೆ ವರದಿಯಲ್ಲಿದ್ದ ಅಂಶಗಳ ಆಧಾರದ ಮೇಲೆ ಕೈಗೊಂಡಿತ್ತು. ಆದರೆ ಅಪಘಾತಕ್ಕೆ ಸಂಬಂಧಿಸಿದ ಯಾವುದೇ ಪ್ರತ್ಯಕ್ಷ ಸಾಕ್ಷಿಯನ್ನೂ ವಿಚಾರಣೆಗೊಳಪಡಿಸಿರಲಿಲ್ಲ.

ಕೇವಲ ಶವಪರೀಕ್ಷೆ ವೇಳೆ ಮದ್ಯದ ವಾಸನೆ ಬಂದಿತ್ತು ಎಂಬ ಅಂಶವನ್ನು ಆಧರಿಸಿ ವ್ಯಕ್ತಿಯೊಬ್ಬರು ಅಪಘಾತದ ಸಮಯದಲ್ಲಿ ಮದ್ಯದ ಅಮಲಿನಲ್ಲಿದ್ದರು ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

2007ರಲ್ಲಿ ನಡೆದಿದ್ದ ಅಪಘಾತ

ಆದೇಶದಲ್ಲಿನ ಮಾಹಿತಿಯ ಪ್ರಕಾರ, ಬೆಂಗಳೂರಿನ ಅಜ್ಮೀರ್ ಅಲಿಯಾಸ್ ಅಜಂ ಅವರು ಬೆಂಗಳೂರಿನ ಸಂಜಯಗಾಂಧಿ ಎಂಬುವರ ಬಳಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. 2007ರಲ್ಲಿ ಬೆಂಗಳೂರಿನಿಂದ ಹಾಸನಕ್ಕೆ ಲಾರಿ ಚಲಾಯಿಸುತ್ತಿದ್ದ ವೇಳೆ ಕೆಂಚನಹಳ್ಳಿ ಬಳಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಬಳಿಕ ಮೃತಪಟ್ಟಿದ್ದರು.

ಮೃತ ಚಾಲಕನ ಪತ್ನಿ ಹಾಗೂ ಮಕ್ಕಳು 2014ರಲ್ಲಿ ಬೆಂಗಳೂರು ಮೂಲದ ನ್ಯಾಯಮಂಡಳಿಯ ಮುಂದೆ ಉದ್ಯೋಗಿಗಳ ಪರಿಹಾರ ಕಾಯಿದೆಯ ಸೆಕ್ಷನ್ 22ರ ಅಡಿಯಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು.

ಆದರೆ, ಶವಪರೀಕ್ಷೆ ವರದಿಯಲ್ಲಿ ಕರುಳಿನಲ್ಲಿದ್ದ ಅಂಶಗಳಿಂದ ಮದ್ಯದ ವಾಸನೆ ಬರುತ್ತಿತ್ತು ಎಂಬುದನ್ನು ಆಧರಿಸಿ, ಅಪಘಾತದ ವೇಳೆ ಚಾಲಕ ಮದ್ಯದ ಅಮಲಿನಲ್ಲಿದ್ದರು ಎಂದು ನ್ಯಾಯಮಂಡಳಿ ನಿರ್ಧರಿಸಿತ್ತು. ಉದ್ಯೋಗಿಗಳ ಪರಿಹಾರ ಕಾಯಿದೆಯ ಸೆಕ್ಷನ್ 3(1)(ಬಿ)(ಐ) ಅನ್ವಯ ಇಂತಹ ಸಂದರ್ಭದಲ್ಲಿ ಉದ್ಯೋಗದಾತರು ಪರಿಹಾರ ನೀಡುವ ಹೊಣೆಗಾರಿಕೆಯಿಂದ ಮುಕ್ತರಾಗುತ್ತಾರೆ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಮೃತರ ಕುಟುಂಬಸ್ಥರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಮೃತ ಚಾಲಕನ ಪರ ವಕೀಲರ ವಾದವೇನು?

ವಿಚಾರಣೆ ವೇಳೆ ಮೃತ ಚಾಲಕನ ಪರ ವಕೀಲರು, ಕೇವಲ ಮದ್ಯದ ವಾಸನೆ ಇತ್ತು ಎಂಬ ಅಂಶದಿಂದ ಚಾಲಕ ವಾಹನ ಚಲಾಯಿಸುವಾಗ ಮದ್ಯದ ಅಮಲಿನಲ್ಲಿದ್ದರು ಅಥವಾ ಅಪಘಾತವು ಅವರ ನಿರ್ಲಕ್ಷ್ಯದಿಂದ ಸಂಭವಿಸಿತು ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.

ವೈದ್ಯರು ಶವಪರೀಕ್ಷೆ ವರದಿಯಲ್ಲಿ ಕರುಳಿನಲ್ಲಿದ್ದ ಅಂಶಗಳಿಂದ ಮದ್ಯದ ವಾಸನೆ ಬರುತ್ತಿತ್ತು ಎಂದು ಮಾತ್ರ ಉಲ್ಲೇಖಿಸಿದ್ದಾರೆ. ಆದರೆ ಅಪಘಾತ ಸಂಭವಿಸಿದ ಸಮಯದಲ್ಲಿ ಚಾಲಕ ಮದ್ಯದ ಪ್ರಭಾವದಲ್ಲಿದ್ದರು ಎಂಬುದನ್ನು ಸಾಬೀತುಪಡಿಸುವ ಯಾವುದೇ ಪೂರಕ ದಾಖಲೆ ಅಥವಾ ಸಾಕ್ಷ್ಯವನ್ನು ನೀಡಲಾಗಿಲ್ಲ ಎಂದು ವಕೀಲರು ಪೀಠದ ಗಮನಕ್ಕೆ ತಂದರು.

ವಿಮಾ ಸಂಸ್ಥೆಯ ವಾದ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಮಾ ಸಂಸ್ಥೆಯ ಪರ ವಕೀಲರು, ಶವಪರೀಕ್ಷೆ ವರದಿಯಲ್ಲಿ ಮದ್ಯದ ಅಂಶ ಕಂಡುಬಂದಿರುವುದರಿಂದ ನ್ಯಾಯಮಂಡಳಿ ನೀಡಿರುವ ತೀರ್ಪು ಸರಿಯಾಗಿದೆ ಎಂದು ವಾದಿಸಿದರು. ಹೀಗಾಗಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆ ಮನವಿ ಮಾಡಿದರು.

ಎರಡೂ ಪಕ್ಷಗಳ ವಾದ ಆಲಿಸಿದ ಬಳಿಕ ಹೈಕೋರ್ಟ್, ಕೇವಲ ಶವಪರೀಕ್ಷೆ ವರದಿಯಲ್ಲಿ ಮದ್ಯದ ವಾಸನೆ ಉಲ್ಲೇಖವಾಗಿದೆ ಎಂಬ ಕಾರಣಕ್ಕೆ ಅಪಘಾತದ ವೇಳೆ ಚಾಲಕ ಮದ್ಯದ ಅಮಲಿನಲ್ಲಿದ್ದರು ಎಂದು ನಿರ್ಧರಿಸಲಾಗದು ಎಂದು ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಪರಿಹಾರ ಅರ್ಜಿಯನ್ನು ತಿರಸ್ಕರಿಸಿದ್ದ ನ್ಯಾಯಮಂಡಳಿ ಆದೇಶವನ್ನು ರದ್ದುಪಡಿಸಿ, ಪ್ರಕರಣವನ್ನು ಮರು ವಿಚಾರಣೆಗೆ ಕಳುಹಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img