ವಿಜಯಸಾಕ್ಷಿ ಸುದ್ದಿ, ಗದಗ: ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳು ಗದಗ ಶಹರದ ಸಿದ್ದಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯನ್ನು ದತ್ತು ಪಡೆದ ಮೇಲೆ ಶಾಲೆಯ ಕಳೆ ಹೆಚ್ಚುವುದರ ಜೊತೆಗೆ ಅದರ ಗೌರವ, ಮಹತ್ವ ಸಹ ಹೆಚ್ಚಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.
ಅವರು ಬಳ್ಳಾರಿಯಲ್ಲಿ ನಡೆದ ಹೊರಟ್ಟಿಯವರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭದಲ್ಲಿ ಸಿದ್ದಲಿಂಗ ನಗರ ಸರ್ಕಾರಿ ಪ್ರೌಢಶಾಲೆಯ ದತ್ತು ಉಸ್ತುವಾರಿ ಡಾ. ಬಸವರಾಜ್ ಧಾರವಾಡ ಅವರಿಂದ ಶಾಲೆಯ ಕುರಿತ ಕಿರು ಪರಿಚಯವುಳ್ಳ ಕರಪತ್ರವನ್ನು ಸ್ವೀಕರಿಸಿ ಮಾತನಾಡಿದರು.
ಈಗಾಗಲೇ ಈ ಶಾಲೆಯ ಕುರಿತು ಸಾಕಷ್ಟು ಮಾಹಿತಿಗಳನ್ನ ಪಡೆದಿದ್ದೇನೆ. ಕೇವಲ ಎರಡು ವರ್ಷಗಳಲ್ಲಿ ಬಸವರಾಜ ಹೊರಟ್ಟಿ ಹಾಗೂ ಇನ್ನಿತರ ಜನಪ್ರತಿನಿಧಿಗಳು, ದಾನಿಗಳು ಹಾಗೂ ಸ್ಥಳೀಯ ನಗರಸಭೆಯ ಸಹಕಾರದಿಂದ ಸಾಕಷ್ಟು ಅಭಿವೃದ್ಧಿ ಹೊಂದಿರುವುದು ಖುಷಿ ತಂದಿದೆ. ಈ ಬಾರಿಯ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದೆ. ಈಗಾಗಲೇ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತಂದಿದ್ದೇವೆ ಎಂದರು.
ಯಾವ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತರಾಗಬಾರದು ಶಾಲೆ ಬಿಟ್ಟ ಮಕ್ಕಳಿಗಾಗಿಯೇ ವಿಶೇಷ ಯೋಜನೆಯನ್ನು ತಂದಿದ್ದೇವೆ. ಗದಗ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲರು ವಿಶೇಷ ಆಸಕ್ತಿ ವಹಿಸಿ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ದಾಖಲಿಸುವ ಕಾರ್ಯಕ್ರಮಕ್ಕೆ ಕೈಜೋಡಿಸಿ ತಮ್ಮದೇ ಆದ ವಿಶೇಷ ಯೋಜನೆಯನ್ನು ರೂಪಿಸಿ ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಗೆ ಖುದ್ದಾಗಿ ಭೇಟಿ ನೀಡಿ `ಭವ್ಯ ಭವಿಷ್ಯಕ್ಕಾಗಿ ನಾಳೆಗೆ ಬನ್ನಿ ಬನ್ನಿ ಶಾಲೆಗೆ’ ಎಂಬ ಅಭಿಯಾನ ಆರಂಭಿಸಿ ತಮ್ಮ ಕಾರಿನಲ್ಲಿ ವಿದ್ಯಾರ್ಥಿಗಳನ್ನು ಶಾಲೆಯವರೆಗೆ ಕರೆದುಕೊಂಡು ಬಂದಿರುವ ಕಾರ್ಯಕ್ರಮ ಶ್ಲಾಘನೀಯ ಮತ್ತು ಮಾದರಿಯಾಗಿದೆ ಎಂದರು.