ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕು ವ್ಯಾಪ್ತಿಯಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ ಮುಗಿಯದಂತಾಗಿದೆ. ಪಟ್ಟಣದ ಗೊಬ್ಬರ ಅಂಗಡಿಗಳಲ್ಲಿ ರೈತರು ಪಾಳಿಯಲ್ಲಿ ನಿಂತು ಗೊಬ್ಬರ ಪಡೆದಿದ್ದು, ಇದೀಗ ಪಟ್ಟಣದ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಿಂದ ಗೊಬ್ಬರವನ್ನು ನೀಡಲಾಗಿದೆ. ಮಂಗಳವಾರ ಸುಮಾರು 25 ಟನ್ಗಳಷ್ಟು ಗೊಬ್ಬರ ನೀಡಲಾಗಿದ್ದು, ಶನಿವಾರ ಸುಮಾರು 20 ಟನ್ಗಳಷ್ಟು ಗೊಬ್ಬರ ವಿತರಿಸಲಾಗಿದೆ.
ತಾಲೂಕು ವ್ಯಾಪ್ತಿಯಲ್ಲಿ ಹದವರ್ತಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಬೇಡಿಕೆ ಹೆಚ್ಚಾಗಿದೆ. ಗೊಬ್ಬರ ದೊರೆಯದೆ ರೈತರು ಪರಿತಪಿಸುತ್ತಿದ್ದಾರೆ. ಈಗಾಗಲೇ ಮತ್ತೆ ಬೇವು ಲೇಪಿತ ಯೂರಿಯಾ ಗೊಬ್ಬರ ಪಟ್ಟಣದ ಕೆಲವು ಗೊಬ್ಬರ ಅಂಗಡಿಗಳಲ್ಲಿ ಲಭ್ಯವಿದ್ದು, ರೈತರು ಖರೀದಿಸುತ್ತಿದ್ದಾರೆ.
ಇದೀಗ ಟಿಎಪಿಸಿಎಂಎಸ್ ಆವರಣದಲ್ಲಿ ಎರಡು ದಿನಗಳ ಕಾಲ ರೈತರಿಗೆ ಒಂದು ಅಥವಾ ಎರಡು ಚೀಲಗಳಂತೆ ನಿಗದಿತ ದರದಲ್ಲಿ ವಿತರಣೆ ಮಾಡಲಾಗಿದೆ. ಪ್ರಸ್ತುತ ವರ್ಷ ತಾಲೂಕಿನಲ್ಲಿ ಗೋವಿನಜೋಳದ ಬಿತ್ತನೆ ಪ್ರದೇಶ ಸಾವಿರಾರು ಹೆಕ್ಟೇರ್ ಹೆಚ್ಚಾಗಿದ್ದು, ಉತ್ತಮ ಮಳೆಯೂ ಸುರಿದ ಪರಿಣಾಮ ಯೂರಿಯಾ ಗೊಬ್ಬರಕ್ಕೆ ಒಮ್ಮೆಲೇ ಬೇಡಿಕೆ ಹೆಚ್ಚುವಂತಾಗಿದೆ. ನ್ಯಾನೋ ಯೂರಿಯಾ ಬಳಕೆ ಬಗ್ಗೆ ರೈತರಿಗೆ ಸಾಕಷ್ಟು ಮಾಹಿತಿ ನೀಡಲಾಗಿದ್ದು, ರೈತರು ನ್ಯಾನೋ ಯೂರಿಯಾ ಬಳಕೆಗೆ ಮುಂದಾಗಬೇಕು ಎಂದು ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ ತಿಳಿಸಿದರು.