ವಿಜಯಸಾಕ್ಷಿ ಸುದ್ದಿ, ಗದಗ: ಭಾರತ ಅತಿಹೆಚ್ಚು ಯುವಜನರನ್ನು ಹೊಂದಿದ ದೇಶವಾಗಿದ್ದು, ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಇದು ಲಾಭದಾಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನಾಂಗ ಅನೇಕ ದುಶ್ಚಟಗಳತ್ತ ವಾಲುತ್ತಿದೆ. ಇದು ದೇಶಕ್ಕೆ ಮಾರಕವಾಗಿದ್ದು, ಯುವಜನರ ಪ್ರಗತಿಯೇ ದೇಶದ ಉನ್ನತಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ನುಡಿದರು.
ಅವರು ನಗರದ ತೋಂಟದಾರ್ಯ ಕಲ್ಯಾಣಕೇಂದ್ರದಲ್ಲಿ ಜರುಗಿದ ತೋಂಟದ ಸಿದ್ಧೇಶ್ವರ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಪ.ಪೂ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ತೋಂಟದಾರ್ಯ ಮಠದ ಶೈಕ್ಷಣಿಕ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿವೆ. ವಿದ್ಯಾರ್ಥಿಗಳು ಸರ್ವಾಂಗೀಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಆದ್ಯತೆ ನೀಡಬೇಕಿದೆ. ಬಡವ, ಶ್ರೀಮಂತ, ಕನ್ನಡ-ಆಂಗ್ಲ ಮಾಧ್ಯಮ ಹೀಗೆ ಯಾವುದೇ ಬಗೆಯ ಕೀಳರಿಮೆಗಳಿಗೆ ಆಸ್ಪದ ನೀಡದೇ ನಮ್ಮಲ್ಲಿ ಅಡಗಿರುವ ಸಾಮರ್ಥ್ಯವನ್ನು ಹೊರಹಾಕುವತ್ತ ಚಿಂತನೆ ನಡೆಸಬೇಕು. ಶೈಕ್ಷಣಿಕ, ಸಾಹಿತ್ಯಿಕ-ಸಾಮಾಜಿಕವಾಗಿ ನಾಡಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ಅನೇಕ ಮಹಾತ್ಮರು ಗದುಗಿನ ಕೀರ್ತಿಪತಾಕೆಯನ್ನು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಪಸರಿಸಿದ್ದಾರೆ. ಕೃಷಿ, ಕೈಗಾರಿಕೆ ಹೀಗೆ ಯಾವುದೇ ಕ್ಷೇತ್ರ ಇದ್ದರೂ ಕಾಯಕಕ್ಕೆ ಹಿಂಜರಿಯಬಾರದು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ. ಎಸ್.ಎಸ್ .ಪಟ್ಟಣಶೆಟ್ಟರ ಮಾತನಾಡಿ, ತೋಂಟದ ಸಿದ್ಧೇಶ್ವರ ಪ.ಪೂ ಕಾಲೇಜು ಸ್ಥಾಪನೆಯಾದ ಅಲ್ಪಾವಧಿಯಲ್ಲೇ ಅತ್ಯುತ್ತಮ ಫಲಿತಾಂಶ ನೀಡಿ ಈ ಪರಿಸರದಲ್ಲಿ ತನ್ನದೇ ಹೆಸರು ಸ್ಥಾಪಿಸಿದೆ. ವಿದ್ಯಾರ್ಥಿಗಳು ಹದ್ದಿನಂತೆ ತೀಕ್ಷ÷್ಣ ಗುರಿಯನ್ನು ಹೊಂದಿ ಅದನ್ನು ತಲುಪಲು ಪರಿಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಪಿ.ಯು.ಸಿಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಗಳಿಸಿದರೆ ಇಂಜಿನಿಯರಿಂಗ್ ಹಾಗೂ ಪದವಿ ಕೋರ್ಸುಗಳಿಗೆ ಉಚಿತ ಪ್ರವೇಶ ನೀಡುವುದಾಗಿ ತಿಳಿಸಿದ ಅವರು, ಎಲ್ಲಾ ಸಂಪತ್ತಿಗಿಂತ ವಿದ್ಯಾಸಂಪತ್ತು ಶ್ರೇಷ್ಠ. ಹಾಗಾಗಿ ವಿದ್ಯೆಯ ಸಂಪಾದನೆಯಲ್ಲಿ ಮಕ್ಕಳು ನಿರತರಾಗಲು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಎಸ್.ಬಿ. ಶೆಟ್ಟರ್ ಮಾತನಾಡಿ, ಪಿಯುಸಿ ಹಂತ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಪ್ರಮುಖ ಘಟ್ಟವಾಗಿದ್ದು, ಶ್ರದ್ಧೆ-ಪ್ರಾಮಾಣಿಕತೆಯಿಂದ ಕಲಿತರೆ ಗುರಿ ಮುಟ್ಟುವುದು ಸುಲಭವಾಗುತ್ತದೆ. ದೇಶವು ರಚನಾತ್ಮಕವಾಗಿ ಬೆಳೆಯಬೇಕಾದರೆ ವಿದ್ಯಾರ್ಥಿಗಳ ಕೊಡುಗೆ ಮಹತ್ವದ್ದಾಗಿದೆ ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ಲೋಯೊಲಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ರೇನಿಟಾ ಪೀಂಟೂ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಸ್ತು-ಸಂಯಮ ಹಾಗೂ ಸಮಯಪ್ರಜ್ಞೆಯ ಪ್ರಾಮುಖ್ಯತೆ ಕುರಿತು ತಿಳಿಸಿದರು.
ದೈಹಿಕ ಶಿಕ್ಷಣ ಪರಿವೀಕ್ಷಕರಾದ ಜಯಲಕ್ಷ್ಮೀ ಅಣ್ಣಿಗೇರಿ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಪ್ರಚುರಪಡಿಸಲು ಅನೇಕ ಕ್ಷೇತ್ರಗಳಿದ್ದು, ವಿದ್ಯಾರ್ಥಿಗಳು ಕೇವಲ ಶಿಕ್ಷಣ ಸಂಪಾದನೆ ಅಲ್ಲದೇ ಪ್ರತಿಭಾ ಅನಾವರಣಕ್ಕೆ ಮನಸ್ಸು ಮಾಡಬೇಕು. ಮೊಬೈಲ್ ಬಳಕೆಯನ್ನು ಮಿತಿಯಲ್ಲಿರಿಸಿ ಅದನ್ನು ಧನಾತ್ಮಕವಾಗಿ ಬಳಸಲು ಕರೆ ನೀಡಿದ ಅವರು, ಜೀವನದಲ್ಲಿ ಸಂಸ್ಕಾರದ ಪ್ರಾಮುಖ್ಯತೆಯನ್ನು ವಿವರಿಸಿದರು.
ಕಳೆದ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕರಾಟೆ ಹಾಗೂ ಅಣಕು ಸಂಸತ್ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಚಾರ್ಯರಾದ ವೈ.ಎಸ್. ಮತ್ತೂರ ಸ್ವಾಗತಿಸಿದರು. ನಯನಾ ಅಳವಂಡಿ ಹಾಗೂ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಎನ್.ವಿ. ಕಡಗದ ನಿರೂಪಿಸಿದರೆ, ಶಿಲ್ಪಾ ಪಾಟೀಲ ವಂದಿಸಿದರು.
ವೇದಿಕೆ ಮೇಲೆ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ತೋಂಟದಾರ್ಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಸಂತೋಷ ಕೊಟೆಣ್ಣವರ, ನಗೀನಾ ನದಾಫ, ಯಲ್ಲಪ್ಪ ಬಡಪ್ಪನವರ ಇದ್ದರು.
ಸಾನ್ನಿಧ್ಯ ವಹಿಸಿದ್ದ ಭೈರನಟ್ಟಿ-ಶಿರೋಳ ಮಠದ ಶಾಂತಲಿAಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ತೋಂಟದ ಸಿದ್ಧೇಶ್ವರ ಮಹಾವಿದ್ಯಾಲಯ ಬೆಳೆದುಬಂದ ಹಾದಿಯನ್ನು ಹತ್ತಿರದಿಂದ ಗಮನಿಸಿದ್ದು, ವಿದ್ಯಾರ್ಥಿಗಳ ವಯಕ್ತಿಕ ಕಾಳಜಿಗೆ ಇಲ್ಲಿ ಆದ್ಯತೆ ನೀಡಲಾಗುತ್ತದೆ. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು ಮಕ್ಕಳಿಗೆ ಅವಶ್ಯವಿದ್ದು, ಆದರ್ಶ ವ್ಯಕ್ತಿಗಳ ಹಾದಿಯಲ್ಲಿ ನಡೆಯುವ ಮೂಲಕ ನೀವೂ ಅವರಂತೆ ಸಾಧಕರಾಗಬೇಕು ಎಂದರು.