ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಲೋಕಸಭಾ ಚುನಾವಣೆಯ ಪ್ರಣಾಳಿಕೆ ಮೊದಲು ಬಿಜೆಪಿ ಜನಾಭಿಪ್ರಾಯ ಸಂಗ್ರಹದ ಸಂಕಲ್ಪಪತ್ರ ಮಹಾಅಭಿಯಾನ ಆರಂಭಿಸಿದೆ. ಅದಕ್ಕಾಗಿ ಸಮಾಜದ ರೈತರು, ಮಹಿಳೆಯರು, ಯುವಜನತೆ ಸಹಿತ ಎಲ್ಲ ವರ್ಗದ ಜನರಿಂದ ಅಭಿಮತ ಸಂಗ್ರಹಿಸಲಿದ್ದೇವೆ ಎಂದು ಗದಗ ಜಿಲ್ಲಾ ಬಿಜೆಪಿ ಪ್ರಕೋಷ್ಠಗಳ ಸಂಚಾಲಕ ಶಶಿಧರ ದಿಂಡೂರ ತಿಳಿಸಿದರು.
ಅವರು ಮಂಗಳವಾರ ಪಟ್ಟಣದಲ್ಲಿ ವಿಕಸಿತ ಭಾರತ ಸಂಕಲ್ಪಪತ್ರ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿಯ ಕೇಂದ್ರ ಸರಕಾರವು 2014 ಮತ್ತು 2019ರ ಚುನಾವಣೆ ಸಂದರ್ಭದಲ್ಲಿ ನೀಡಿದ ಬಹುತೇಕ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಸ್ವಾತಂತ್ರೋತ್ಸವದ 100ನೇ ವರ್ಷಾಚರಣೆ ವೇಳೆ 2047ರಲ್ಲಿ `ನಮ್ಮ ಭಾರತ ವಿಕಸಿತ ಭಾರತ’ ಎಂಬ ಸಂಕಲ್ಪವನ್ನು ಮೋದಿ ಅವರು ಮುಂದಿಟ್ಟಿದ್ದಾರೆ. ಅದನ್ನು ಸಾಕಾರಗೊಳಿಸಲು ಬರುವ ಚುನಾವಣೆಯ ಪ್ರಣಾಳಿಕೆ ಮೊದಲು ಜನಾಭಿಪ್ರಾಯ ಸಂಗ್ರಹ ಮತ್ತು ಸಂಕಲ್ಪಪತ್ರ ಅಭಿಯಾನಕ್ಕೆ ಸೂಚಿಸಿದ್ದಾರೆ. ಕಳೆದ 75 ವರ್ಷಗಳ ಕಾಲ ದೇಶವನ್ನಾಳಿದ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ಭರವಸೆ ಪುಸ್ತಕ ಆಗಿದ್ದವು. ಆದರೆ ನರೇಂದ್ರ ಮೋದಿ ಎಂತಹ ಸಂಕಷ್ಟದ ನಡುವೆಯೂ ಕೊಟ್ಟ ಬಹುತೇಕ ಭರವಸೆ ಈಡೇಸುವ ಕಾರ್ಯ ಮಾಡಿದ್ದಾರೆ ಎಂದರು.
ಜಿಲ್ಲಾ ಸಹ ಸಂಚಾಲಕ ರಮೇಶ ಸಜ್ಜಲಗಾರ, ಬಿಜೆಪಿ ಶಿರಹಟ್ಟಿ ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಮಾತನಾಡಿ, ದೇಶದ ಸಾಮಾನ್ಯ ವರ್ಗ, ರೈತರು, ಕೂಲಿಕಾರರು ಎದುರಿಸುತ್ತಿರುವ ಸಮಸ್ಯೆ, ಬೇಕು-ಬೇಡಿಕೆಗಳೇನು ಎಂಬ ಜನಾಭಿಪ್ರಾಯ ಪಡೆದು ಈಡೇರಿಸುವ ಸಂಕಲ್ಪದೊಂದಿಗೆ ಬಿಜೆಪಿ ಚುನಾವಣೆಗೆ ಮುಂದಾಗಲಿದೆ. ಜನರೇ ಅಭಿಪ್ರಾಯ ತಿಳಿಸುವ ಪ್ರಣಾಳಿಕೆ ರೂಪಿತವಾಗಬೇಕು ಎನ್ನುವುದು ಮೋದಿಯವರ ಅವರ ಅಭಿಪ್ರಾಯ. ಈ ಹಿನ್ನಲೆ ಬಿಜೆಪಿ `ಸಂಕಲ್ಪ ಪತ್ರ’ ಅಭಿಯಾನ ಆರಂಭಿಸಿದೆ. ಸಮಾಜದ ಕಟ್ಟಕಡೆಯ ಪ್ರಜೆಗಳ ಅಭಿಪ್ರಾಯ ಕ್ರೋಢೀಕರಿಸಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಆಯೋಜಿಸಲಾಗಿದೆ ಎಂದು ಹೇಳಿದರು.
ಈ ವೇಳೆ ಪಕ್ಷದ ಯುವ ಮುಖಂಡರಾದ ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ಸಂತೋಷ ಜಾವೂರ, ಶಕ್ತಿ ಕತ್ತಿ, ವಿಜಯ ಕುಂಬಾರ, ಭೀಮಣ್ಣ ಯಂಗಾಡಿ, ವಿಶಾಲ ಬಟಗುರ್ಕಿ, ವಿರೇಶ ಸಾಸಲವಾಡ, ಆಕಾಶ ಸೌದತ್ತಿ ಮುಂತಾದವರಿದ್ದರು.
ಶೇ.33 ಮಹಿಳಾ ಮೀಸಲು, ಗರೀಬ ಕಲ್ಯಾಣ ಯೋಜನೆ, ಆಯುಷ್ಮಾನ ಆರೋಗ್ಯ ಯೋಜನೆ, ವಸತಿ ಯೋಜನೆ, ಪ್ರತಿ ಮನೆಗೆ ಕುಡಿಯುವ ನೀರು, ಉಜ್ವಲ್ ಯೋಜನೆ, ಸ್ವಚ್ಛ ಭಾರತ, ಬೆಳಕು, ಔಷಧೋಪಚಾರ, ಪಿಎಂ ಕಿಸಾನ್, ರಸಗೊಬ್ಬರ ಸಬ್ಸಿಡಿ, ಬೀದಿ ಬದಿ ವ್ಯಾಪಾರಸ್ಥರ ಕಲ್ಯಾಣ, 370 ಕಲಂ ರದ್ದುಪಡಿಸಿರುವುದು, ದಿನಕ್ಕೆ 37 ಕಿಲೋಮೀಟರ್ ಹೆದ್ದಾರಿ ನಿರ್ಮಾಣ, ರಾಮಮಂದಿರ ನಿರ್ಮಾಣದಂತಹ ಮಹೋನ್ನತ ಕಾರ್ಯಗಳೊಂದಿಗೆ ವಿಶ್ವದ ಆರ್ಥಿಕತೆಯಲ್ಲಿ ದೇಶ 5ನೇ ಸ್ಥಾನಕ್ಕೇರಿದೆ. ಸಂಕಲ್ಪಪತ್ರ 9090902024 ಮಿಸ್ಕಾಲ್ ಮಾಡಿ ಸಲಹಾ ಪೆಟ್ಟಗೆ ಮುಖಾಂತರ ಜನರ ಅಭಿಪ್ರಾಯ ತಿಳಿಸಬಹುದು ಎಂದು ಶಶಿಧರ ದಿಂಡೂರ ಹೇಳಿದರು.