ಗದಗ:- ಸತತವಾಗಿ ಸುರಿದ ಭಾರೀ ಮಳೆಯಿಂದ ಕೆಸರು ಗದ್ದೆಯಾದ ರಸ್ತೆಯಲ್ಲಿ ಎತ್ತಿನಗಾಡಿ ಬಿದ್ದು ರೈತ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ಜರುಗಿದೆ.
ದೊಡ್ಡೂರುನಿಂದ ಹೆಸರೂರಿಗೆ ಸಂಪರ್ಕಿಸುವ ರಸ್ತೆಯಲ್ಲಿ ಅವಘಡ ಸಂಭವಿಸಿದೆ. ದೊಡ್ಡೂರುನಿಂದ 4 ಕಿಲೋಮೀಟರ್ ದೂರದ ಹೆಸರೂರಿಗೆ ಸರಿಯಾದ ರಸ್ತೆ ಇಲ್ಲ. ರೈತರು ಕೆಸರು ಗದ್ದೆಯಂತಾದ ರಸ್ತೆಯಲ್ಲಿ ನಿತ್ಯ ಓಡಾಟ ಮಾಡುವಂತಾಗಿದೆ. ಎತ್ತಿನಗಾಡಿ ಬಿದ್ದು ಪುತ್ರಪ್ಪ ಎನ್ನುವ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಸ್ತೆಯಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು, ಹದಗೆಟ್ಟಿರುವ ರಸ್ತೆಯಲ್ಲಿ ರೈತರು ಓಡಾಡ್ತಾರೆ. ಸಾಕಷ್ಟು ಬಾರಿ ಶಾಸಕರಿಗೆ, PWD ಅಧಿಕಾರಿಗಳಿಗೆ, ಗ್ರಾ.ಪಂ.ಗೆ ಮನವಿ ಮಾಡಿದ್ರು ಕ್ಯಾರೇ ಎನ್ನುತ್ತಿಲ್ಲ. ಜಿಲ್ಲಾಧಿಕಾರಿಗಳ ಜನ ಸ್ಪಂದನ ಕಾರ್ಯಕ್ರಮದಲ್ಲಿ ರಸ್ತೆ ಸಮಸ್ಯೆ ಕುರಿತು ರೈತರು ಮನವಿ ಸಲ್ಲಿಸಿದ್ದಾರೆ.
ಆದಷ್ಟು ಬೇಗನೆ ರಸ್ತೆ ದುರಸ್ತಿ ಮಾಡಿ. ಇಲ್ದೇ ಹೋದ್ರೆ ಗ್ರಾಮ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಜಿಲ್ಲಾಡಳಿತಕ್ಕೆ ರೈತರು ಎಚ್ಚರಿಕೆ ಕೊಟ್ಟಿದ್ದಾರೆ.