ವಿಜಯಸಾಕ್ಷಿ ಸುದ್ದಿ, ಗದಗ: ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣವು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ವ್ಯಕ್ತಿಯನ್ನು ಅತ್ಯುನ್ನತ ಸ್ಥಾನಕ್ಕೆ ತಲುಪಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಎಲ್ಲರೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ನಿವೃತ್ತ ಉಪನ್ಯಾಸಕ, ಹಾಸ್ಯ ಕಲಾವಿದ ಅನಿಲ ವೈದ್ಯ ಹೇಳಿದರು.
ಸೋಮವಾರ ನಗರದ ಅಕ್ಕನ ಬಳಗದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಣವು ಜ್ಞಾನ ಕೌಶಲ್ಯ ಮತ್ತು ಸಾಧನೆಯ ಮಾರ್ಗವನ್ನು ಒದಗಿಸುತ್ತದೆ. ಜೊತೆಗೆ ಶಿಕ್ಷಣವು ಸರ್ವಾಂಗೀಣ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ. ಈ ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಹಲವಾರು ಗುಣಾತ್ಮಕ ಬದಲಾವಣೆಯನ್ನು ತರುವ ಮೂಲಕ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕ್ರಮ ಜರುಗಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಕ್ಕನ ಬಳಗದ ಅಧ್ಯಕ್ಷೆ ಜಯಶ್ರೀ ಹುಬ್ಬಳ್ಳಿ ಮಾತನಾಡಿದರು. ಅನಿಲ ವೈದ್ಯ ಹಾಗೂ ಭಾರತಿ ವಿಶಾಲವಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬೀನಾ ಮಾನ್ವಿ ಪ್ರಾರ್ಥಿಸಿದರು. ಸುವರ್ಣಾ ವಸ್ತ್ರದ ಹಾಗೂ ಬೀನಾ ಮಾನ್ವಿ ಭಕ್ತಿ ಸೇವೆ ವಹಿಸಿದ್ದರು. ಜ್ಯೋತಿ ದಾನಪ್ಪಗೌಡ್ರ ನಿರೂಪಿಸಿದರು. ಕಾರ್ಯದರ್ಶಿ ಜಯಶ್ರೀ ಪಾಟೀಲ ವಂದಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಕಸ್ತೂರಿ ಹಿರೇಗೌಡರ, ಟ್ರಸ್ಟಿಗಳಾದ ಅನ್ನಪೂರ್ಣ ಮಾಳೆಕೊಪ್ಪಮಠ, ಶಾಂತಾ ಗೌಡರ, ಉಷಾ ದಡೂತಿ, ಶಿವಲೀಲಾ ಕುರಡಗಿ, ನಾಗರತ್ನಾ ಹುಬ್ಬಳ್ಳಿಮಠ, ಮೀನಾಕ್ಷಿ ಸಜ್ಜನ, ಪ್ರೇಮಾ ಮೇಟಿ, ಗೀತಾ ಮಾನ್ವಿ, ಶಾರದಾ ಹಿರೇಮಠ, ಸುಜಾತಾ ಮಾನ್ವಿ, ಶಶಿರೇಖಾ ಶಿಗ್ಲಿಮಠ, ಶಾಂತಾ ಸಂಕನೂರ, ಸುವರ್ಣ ವಸ್ತ್ರದ, ಲಲಿತಾ ಬಾಳಿಹಳ್ಳಿಮಠ, ಶೈಲಾ ಹಿರೇಮಠ, ಪಾರ್ವತಿದೇವಿ ಮಾಳೇಕೊಪ್ಪಮಠ ಅಲ್ಲದೆ ಶೈಲಜಾ ಕವಲೂರ, ವಿದ್ಯಾ ಹುಲಬನ್ನಿ, ರೇಣುಕಾ ಅಮಾತ್ಯ ಮುಂತಾದವರಿದ್ದರು.
ನ್ಯಾಯವಾದಿ ಭಾರತಿ ವಿಶಾಲವಾಡಿ ಮಾತನಾಡಿ, ಒತ್ತಡಗಳನ್ನು ನಿಗ್ರಹಿಸಿ ಶಾಂತಿ-ಸಮಾಧಾನದಿಂದ ಬದುಕು ನಡೆಸುವ ಬಗೆಯನ್ನು ವಿವರಿಸಿ, ನಿತ್ಯ ಪ್ರಾರ್ಥನೆ, ಧ್ಯಾನ, ಲಘು ವ್ಯಾಯಾಮ, ಸಂಗೀತ ಆಲಿಕೆಯಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಅವಕಾಶವಿದೆ. ಹಿತ-ಮಿತ ಆಹಾರ ಸೇವಿಸುವ ಮೂಲಕ ಸಮತೋಲನ ಕಾಯ್ದುಕೊಳ್ಳಬೇಕು. ಅವಸರ, ಆವೇಶ, ಸಿಟ್ಟು, ಉದ್ವೇಗಕ್ಕೆ ಒಳಗಾಗದಂತೆ ಶಾಂತಚಿತ್ತದ ಜೀವನ ಶೈಲಿ ರೂಢಿಸಿಕೊಂಡಲ್ಲಿ ಬದುಕು ಬಲು ಸುಂದರ ಎಂದರು.