ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜೀವನದಲ್ಲಿ ಎದುರಾಗುವ ಎಡರು-ತೊಡರುಗಳನ್ನು ಸಮರ್ಥವಾಗಿ ಎದುರಿಸಿ ಸಮರ್ಪಕವಾಗಿ ಮುನ್ನಡೆದಾಗ ನಮಗೆ ಯಶಸ್ಸು ಸಿಗಲು ಸಾಧ್ಯ. ಗೃಹರಕ್ಷಕ ಸಿಬ್ಬಂದಿಗಳು ಕೂಡ ತಮ್ಮೆಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಗೃಹರಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಶಾಸಕ, ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ. ಜಿ.ಎಸ್. ಪಾಟೀಲ ಹೇಳಿದರು.
ಅವರು ಸ್ಥಳೀಯ ಗಾಂಧಿ ಭವನದಲ್ಲಿ ನಡೆದ ಗೃಹರಕ್ಷಕ ದಳದ 21ನೇ ವಾರ್ಷಿಕೋತ್ಸವ ಮತ್ತು ಕಾರ್ಯಾಲಯದ ಉದ್ಘಾಟನೆ ಹಾಗೂ ವಿಶ್ವ ಪರಿಸರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ಆಂತರಿಕ ಭದ್ರತೆಯನ್ನು ಕಾಪಾಡಲು ಹಾಗೂ ಪೊಲೀಸ್ ಇಲಾಖೆಗೆ ಪೂರಕವಾಗಿ ಕಾರ್ಯನಿರ್ವಹಿಸಲು ನೆರವಾಗುವ ನಾಗರಿಕ ಸ್ವಯಂ ಸೇವಕದಳ ಗೃಹ ರಕ್ಷಕದಳವಾಗಿದ್ದು, ಸದಸ್ಯರು ಪೊಲೀಸರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುವ ಮೂಲಕ ತುರ್ತು ಪರಿಸ್ಥಿಯಲ್ಲಿ ನೆರವಾಗುವ ಮಹತ್ತರ ಸಂಸ್ಥೆ ಇದಾಗಿದೆ ಎಂದರು.
ಕಾರ್ಯಕ್ರಮದ ನೇತೃತ್ವವನ್ನು ಸಿದ್ದನಕೊಳ್ಳದ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾದ ಎಮ್.ಬಿ. ಸಂಕದ ವಹಿಸಿದ್ದರು. ವೇದಿಕೆ ಮೇಲೆ ರವೀಂದ್ರನಾಥ ದೊಡ್ಡಮೇಟಿ, ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ, ಸಿಪಿಐ ಎಸ್.ಎಸ್. ಬೀಳಗಿ, ಪಿಎಸ್ಐ ಐಶ್ವರ್ಯ ನಾಗರಾಳ, ಗೃಹರಕ್ಷಕ ದಳದ ನರೇಗಲ್ಲ ಘಟಕದ ಮುಖ್ಯಸ್ಥ ಸುರೇಶ ಹಳ್ಳಿಕೇರಿ, ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಬಸವರಾಜ ಗೂಳರಡ್ಡಿ, ಜಿಲ್ಲಾ ಬೋಧಕರು, ಗೃಹರಕ್ಷಕ ದಳದ ಕಿರಣಕುಮಾರ ಕಟಗಿ, ಟಿ.ಎಲ್. ರಾಜಕುಮಾರ, ನಿವೃತ್ತ ಶಿಕ್ಷಕ ಎಮ್.ಎಸ್. ಧಡೆಸೂರಮಠ, ಅಂದಪ್ಪ ಬಿಚ್ಚೂರ, ಶಿವನಗೌಡ ಪಾಟೀಲ, ಜಿಲ್ಲಾ ಕರವೇ ಅಧ್ಯಕ್ಷ ಹನಮಂತಪ್ಪ ಅಬ್ಬಿಗೇರಿ ಮುಂತಾದವರಿದ್ದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡು ಬಂದಿರುವ ಏಕೈಕ ಸಂಸ್ಥೆಯೇ ಗೃಹರಕ್ಷಕ ದಳವಾಗಿದ್ದು, ನರೇಗಲ್ಲ ಹಾಗೂ ಸುತ್ತಮುತ್ತಲ 20 ಗ್ರಾಮಗಳಲ್ಲೂ ಸೇವೆ ಸಲ್ಲಿಸುತ್ತಿದ್ದು, ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲೂ ಗೃಹರಕ್ಷಕ ದಳದ ಕಾರ್ಯ ಶ್ಲಾಘನೀಯ ಎಂದರು.