ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಗಡಿ ಕಾಯುವಲ್ಲಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಸೈನಿಕರ ಪಾತ್ರ ಅತ್ಯಂತ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ರವಿವಾರ ಗದಗದ ಮುಳಗುಂದ ರಸ್ತೆಯ ಆದಿತ್ಯ ನಗರದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದ ನೂತನ ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೈನಿಕರು ದೇಶದ ಹಿತಕ್ಕಾಗಿ ಹಗಲಿರುಳು ಶ್ರಮಿಸುತ್ತಾರೆ. ಅವರಿಗೆ ನೈತಿಕ ಬಲ ಮತ್ತು ಆತ್ಮಸ್ಥೈರ್ಯ ತುಂಬುವುದು ನಮ್ಮ ಕರ್ತವ್ಯ. ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿ, ದಾನಿಗಳ ಸಹಕಾರದಿಂದ ನಿರ್ಮಿಸಿದ ಈ ಭವನ ರಾಜ್ಯಕ್ಕೆ ಮಾದರಿ ಎಂದು ಅವರು ಶ್ಲಾಘಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, “ಸೈನಿಕ, ರೈತ ಮತ್ತು ಶಿಕ್ಷಕ — ಈ ಮೂವರು ರಾಷ್ಟ್ರದ ಬಲವಾದ ಕಂಬಗಳು. ಯುವಪೀಳಿಗೆಯಲ್ಲಿ ದೇಶಭಕ್ತಿ ಬೆಳೆಯಲು ಸೈನಿಕ ತರಬೇತಿ ಮತ್ತು ಮಾರ್ಗದರ್ಶನ ಅಗತ್ಯ,” ಎಂದು ಹೇಳಿದರು.
ಸಮಾರಂಭದಲ್ಲಿ ಓಂಕಾರೇಶ್ವರ ಹಿರೇಮಠದ ಪೂಜ್ಯ ಫಕೀರೇಶ್ವರ ಪಟ್ಟಾಧ್ಯಕ್ಷರು ಸೈನಿಕರ ಸೇವೆಯನ್ನು ಶ್ಲಾಘಿಸಿದರು.
ವಿಶೇಷ ಆಹ್ವಾನಿತರಾಗಿ ಅರವಿಂದ ಶಿಗ್ಗಾಂವಿ, ಸುಧೀಂದ್ರ ಇಟ್ನಾಳ, ಟಿ.ಎಸ್. ಪಾಟೀಲ, ಬಸವರಾಜ ನಿಂಗನಗೌಡರ, ಶಿವಲೀಲಾ ಭಾವಿಕಟ್ಟಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಎಸ್.ಆರ್. ಪಾಟೀಲ ಸ್ವಾಗತಿಸಿದರು, ಸುಧೀರಸಿಂಹ ಘೋರ್ಪಡೆ ನಿರೂಪಿಸಿದರು, ಸಂಘದ ಅಧ್ಯಕ್ಷ ಜಿ.ಬಿ. ಮಾಲಗಿತ್ತಿಮಠ ಪ್ರಾಸ್ತಾವಿಕ ಭಾಷಣ ಮಾಡಿದರು ಮತ್ತು ಕಾರ್ಯದರ್ಶಿ ಸಿ.ಜಿ. ಸೊನ್ನದ ವಂದಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಫ್. ಹೊನ್ನಪ್ಪನವರ, ಈರಣ್ಣ ತಳ್ಳಿಕೇರಿ, ಮಹೇಶ ಆಶಿ, ಮಹಮ್ಮದ ಹನೀಫ್ ಶೇಖಬಾಯಿ, ಬಿ.ವಿ. ಅಬ್ಬಿಗೇರಿ, ಎಚ್.ಬಿ. ಜಂಗಣ್ಣವರ, ಲಲಿತಾ ಕುರಹಟ್ಟಿ, ಶರಣಪ್ಪ ಸರ್ವಿ, ವೀರಪ್ಪ ಬಿಂಗಿ, ಕೆ.ಎಸ್. ಹಿರೇಮಠ ಮುಂತಾದವರು ಹಾಜರಿದ್ದರು.
ಮಾಜಿ ಸೈನಿಕರಿಗೆ ಸೌಲಭ್ಯ ಸಕಾಲಕ್ಕೆ ಸಿಗಲಿ — ಏರ್ ಕಮಾಂಡರ್ ಸಿ.ಎಸ್. ಹವಲ್ದಾರ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ವಾಯುಸೇನಾ ಅಧಿಕಾರಿ ಸಿ.ಎಸ್. ಹವಲ್ದಾರ ಹೇಳಿದರು, “ಮಾಜಿ ಸೈನಿಕರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಕಾಲಕ್ಕೆ ದೊರೆಯುತ್ತಿಲ್ಲ. ಕೇವಲ ಪ್ರಶಂಸೆ ಸಾಲದು, ಅವರಿಗೆ ಯೋಗ್ಯ ಸ್ಥಾನಮಾನ, ಮೀಸಲಾತಿ ಮತ್ತು ರಾಜಕೀಯ ಹಕ್ಕು ದೊರಕಬೇಕು. ಸರ್ಕಾರ ಈ ಕುರಿತು ಗಂಭೀರವಾಗಿ ಚಿಂತಿಸಬೇಕು,” ಎಂದು ಮನವಿ ಮಾಡಿದರು.



