ಸಂಘ ಬೆಳೆಯಲು ಸಮುದಾಯಯದ ಪಾತ್ರ ಮುಖ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಹಲ್ಗಾಮ್‌ನಲ್ಲಿ ಕನ್ನಡಿಗರು ಸೇರಿ 26 ಜನ ಭಾರತೀಯರ ಮೇಲಿನ ಉಗ್ರರ ದಾಳಿಗೆ ಪ್ರತಿಯಾಗಿ ರಾತ್ರೋರಾತ್ರಿ ಉಗ್ರರ ಅಡಗುದಾಣಗಳ ಮೇಲೆ ಮಾಕ್‌ಡ್ರಿಲ್ ದಾಳಿ ಮಾಡಲು ರಕ್ಷಣಾ ವ್ಯವಸ್ಥೆಗೆ ಮುಕ್ತ ಸ್ವಾತಂತ್ರ್ಯ ನೀಡಿರುವ ಪ್ರಧಾನಮಂತ್ರಿಗಳ ಕ್ರಮ ಸ್ವಾಗತಾರ್ಹ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ ಹೇಳಿದರು.

Advertisement

ಅವರು ಬುಧವಾರ ತಾಲೂಕಿನ ಅಡರಕಟ್ಟಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೇಶದ ನಂದನವನ ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಏನೂ ತಪ್ಪು ಮಾಡದ ನಮ್ಮವರನ್ನು ಪಾಕಿಸ್ತಾನದ ಉಗ್ರಗಾಮಿ ಅಮಾನವೀಯ ರೀತಿಯಲ್ಲಿ ಹತ್ಯೆ ಮಾಡಿ ಭಾರತೀಯರಲ್ಲಿ ಭಯ ಹುಟ್ಟಿಸಬೇಕೆಂಬ ಹುನ್ನಾರ ಮಾಡಿದ್ದಾರೆ. ಇದು ಶಾಂತಿ ಪ್ರಿಯರಾದ ಭಾರತೀಯರೆಲ್ಲರ ಸ್ವಾಭಿಮಾನ ಕೆರಳಿಸಿದೆ. ಭಾರತೀಯ ಸೇನೆ ಅತ್ಯಂತ ಬಲಾಢ್ಯವಾಗಿದ್ದು, ಇದಕ್ಕೆ ಉತ್ತರ ಕೊಡಲೇಬೇಕಾದ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಸೇನಾಪಡೆಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದಾರೆ. ದೇಶದ 140 ಕೋಟಿ ಭಾರತೀಯರು ಇನ್ನು ಮುಂದೆ ಪಾಕಿಸ್ತಾನದ ಉಗ್ರಗಾಮಿಗಳಿಗೆ ತಕ್ಕ ಶಾಸ್ತಿ ನೀಡಲು ಬದ್ಧರಾಗಿದ್ದೇವೆ ಎಂದರು.

ಅಡರಕಟ್ಟಿ ಪಿಕೆಪಿಎಸ್ ಸಂಘದ ಸಾಧನೆ ಶ್ಲಾಘನೀಯವಾಗಿದೆ. ಭಾರತೀಯ ಸಹಕಾರ ರಂಗದಲ್ಲಿ ಸಾಧನೆಯ ಮೈಲುಗಲ್ಲು ಮುಟ್ಟಿದ ಕೀರ್ತಿ ನಮ್ಮ ಜಿಲ್ಲೆಯದ್ದಾಗಿದೆ. ಒಬ್ಬರು ಎಲ್ಲರಿಗಾಗಿ-ಎಲ್ಲರೂ ಒಬ್ಬರಿಗಾಗಿ ಎಂಬ ಮಹಾನ್ ತತ್ವದಡಿ ಸಹಕಾರಿ ಕ್ಷೇತ್ರವನ್ನು ಬೆಳೆಸುವ ಜವಾಬ್ದಾರಿ ಸಹಕಾರಿಗಳದ್ದಾಗಿದೆ. ಸಹಕಾರಿ ಕ್ಷೇತ್ರದಲ್ಲಿ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿದಾಗ ಮಾತ್ರ ಅದು ಬೆಳೆಯಲು ಸಾಧ್ಯವಾಗುತ್ತದೆ. ಸಹಕಾರಿ ಕ್ಷೇತ್ರ ಬೆಳೆಯಲು ಸಮುದಾಯಯದ ಪಾತ್ರ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಅಡರಕಟ್ಟಿ ಗ್ರಾಮದ ಸಹಕಾರಿ ಸಂಘ ಗ್ರಾಮೀಣರ ಆಶಾಕಿರಣ/ಆಧಾರ ಸ್ತಂಬವಾಗಿ ಅಮೃತ ಮಹೋತ್ಸವ ಸಂಭ್ರಮದಲ್ಲಿರುವುದು ಶ್ಲಾಘನೀಯ ಎಂದರು.

ಮುಕ್ತಿಮಂದಿರ ಧರ್ಮಕ್ಷೇತ್ರ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಗಂಜಿಗಟ್ಟಿಯ ಡಾ. ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯರು, ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯರು, ಸಂಕದಾಳದ ಹಾಲಸ್ವಾಮಿಗಳು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಮಹಾಂತೇಶ ಬಸಪ್ಪ ಹವಳದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮಾಜಿ ಸಹಕಾರಿ ಸಚಿವ ಎಸ್.ಎಸ್. ಪಾಟೀಲ, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಚನ್ನಪ್ಪ ಜಗಲಿ, ಎಸ್.ಪಿ. ಬಳಿಗಾರ, ಜಿ.ವಿ. ಪಾಟೀಲ ಸೇರಿ ಕೆಸಿಸಿ ಬ್ಯಾಂಕಿನ ನಿರ್ದೇಶಕರು, ಪಿಕೆಪಿಎಸ್ ಸಂಘದ ಆಡಳಿತ ಮಂಡಳಿ, ಕೃಷಿ ಇಲಾಖೆ, ಸಹಕಾರಿ ಸಂಘದ ಅಧಿಕಾರಿಗಳು ಸೇರಿ ಗ್ರಾಮದ ಹಿರಿಯರು, ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.

ಚನ್ನಪ್ಪ ಹಳಮನಿ, ವಿ.ಎಂ ಶಿಗ್ಲಿ, ನಿಂಗನಗೌಡ ಪಾಟೀಲ ಸೇರಿ ಪಿಕೆಪಿಎಸ್‌ನ ನಿರ್ದೇಕರು, ಸಿಬ್ಬಂದಿ ನಿರ್ವಹಿಸಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಗ್ರಾಮದ ಹಿರಿಯ ಶ್ರಮ, ಸಾಧನೆಯಿಂದ ಸಂಘ 75 ವರ್ಷಗಳ ಸುದೀರ್ಘ ಸೇವೆ ಮಾಡಲು ಸಾಧ್ಯವಾಗಿದೆ. ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಕೃಷಿಯನ್ನೇ ಬದುಕಾಗಿಸಿಕೊಂಡಿರುವ ಗ್ರಾಮೀಣ ಭಾಗದ ರೈತರನ್ನು ಕೃಷಿ ಜತೆಗೆ ಕೃಷಿ ಸಂಬಂಧಿತ ವೃತ್ತಿಗಳಲ್ಲಿ ತೊಡಗಿಸಿ ಅವರ ಆರ್ಥಿಕ ಸ್ಥಿತಿ, ಬದುಕಿನ ಗುಣಮಟ್ಟ ಹೆಚ್ಚಿಸುವಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ. ಸಕಲ ಜೀವರಾಶಿಗಳಿಗೆ ಅನ್ನ ನೀಡುವ ಅನ್ನದಾತನ ಬದುಕು ಹಸನಾಗಬೇಕು. ಅದಕ್ಕಾಗಿ ಸರ್ಕಾರ ರೈತರ ಹಿತ ಕಾಯುವ ಕೆಲಸ ಮಾಡಬೇಕು ಎಂದರು.


Spread the love

LEAVE A REPLY

Please enter your comment!
Please enter your name here