ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಗಳು ಮಾಡದೇ ಇರುವ ಕೆಲಸಗಳನ್ನು ಇಂದು ಸಂಘ ಸಂಸ್ಥೆಗಳು ಮಾಡುತ್ತಿವೆ. ಅದರಲ್ಲಿ ವಿಶೇಷವಾಗಿ ಮಹಿಳಾ ಸಂಘಗಳ ಮತ್ತು ಯುವಕ-ಯುವತಿ ಸಂಘಗಳ ಪಾತ್ರ ಸಮಾಜದಲ್ಲಿ ಅತ್ಯಂತ ಮುಖ್ಯವಾಗಿದೆ. ಅದರಂತೆ ಮಹಿಳಾ ಸಂಘಗಳು ಸಮಾಜಮುಖಿಯಾಗಿ ಕೆಲಸ ಮಾಡಲಿ ಎಂದು ದೋಣಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರು ಹಾಗೂ ಜಿಲ್ಲಾ ರೈತ ಮುಖಂಡರಾದ ಶಂಕರಗೌಡ ಎಂ. ಜಾಯನಗೌಡ್ರ ಮಾತನಾಡಿದರು.
ಅವರು ಮುಂಡರಗಿ ತಾಲೂಕಿನ ದೋಣಿ ಗ್ರಾಮದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ವಿವಿಧೋದ್ದೇಶಗಳ ಮಹಿಳಾ ಸಂಘ ಎಸ್.ಟಿ. ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಚಲನಚಿತ್ರ ಹಿನ್ನೆಲೆ ಗಾಯಕರು ಹಾಗೂ ಜನಪದ ಕಲಾವಿದರಾದ ನಿಂಗಪ್ಪ ಎಚ್. ಗುಡ್ಡದ ಮಾತನಾಡುತ್ತಾ, ಇಂದು ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್, ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ನಮ್ಮ ಮೂಲ ಸಂಸ್ಕೃತಿ ಕಡಿಮೆಯಾಗುತ್ತಿರುವುದು ಖೇದಕರ ಸಂಗತಿ. ಇದನ್ನು ನಾವು ಖಂಡಿಸುವುದರ ಜೊತೆಗೆ ಯುವ ಪೀಳಿಗೆಗಳಿಗೆ ಮೂಲ ಜಾನಪದ ಸಾಹಿತ್ಯದ ಪರಿಚಯವನ್ನು ಮಾಡಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಅಶ್ಲೀಲ ಸಾಹಿತ್ಯವನ್ನು ಮತ್ತು ಸಂಗೀತವನ್ನು ಪ್ರದರ್ಶನ ಮಾಡುವವರಿಗೆ ಇಂದು ಹೆಚ್ಚಿನ ಬೆಲೆ ಇದೆ. ಇದು ನಮ್ಮ ಸಂಸ್ಕೃತಿಗೆ ಧಕ್ಕೆ ಆಗುವ ಸಾಹಿತ್ಯವಾಗಿದೆ. ಅಂಥಹ ಸಾಹಿತ್ಯದಿಂದ ನಾವು ದೂರವಿರಬೇಕೆಂದರು.
ಅಧ್ಯಕ್ಷತೆಯನ್ನು ಹುಲಿಗೆಮ್ಮ ಮಲ್ಲಪ್ಪ ಅಳವುಂಡಿ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಸದಸ್ಯರಾದ ರೇಣವ್ವ ತಳವಾರ, ಅಲ್ಲಾಭಕ್ಷ ದೊಡ್ಡಮನಿ, ರೈತ ಸಂಘದ ಮುಖಂಡ ಸೋಮಪ್ಪ ದುಂದೂರ, ಸಂಗೀತ ಕಲಾವಿದೆ ಪೂಜಾ ಬೇವೂರ, ಪ್ರಗತಿಪರ ರೈತರಾದ ದೇವಪ್ಪ ದಾಳಿನ, ಗ್ರಾ.ಪಂ ಮಾಜಿ ಸದಸ್ಯರಾದ ದೇವಮ್ಮ ಕವಲೂರ, ಯುವ ಮುಖಂಡರಾದ ಮಂಜುನಾಥ ಕವಲೂರ, ಮಹಿಳಾ ಸಂಘದ ನೇತ್ರಾವತಿ ಬೆಳ್ಳಿಗೌಡ್ರು, ಜುಮ್ಮಣ್ಣ ಮರಡಿ, ಶೋಭಾ ಬಸಪ್ಪ ಅಸುಂಡಿ ಮುಂತಾದವರು ಪಾಲ್ಗೊಂಡಿದ್ದರು.
ಮಂಜುನಾಥ ದೊಡ್ಡಮನಿ ಸ್ವಾಗತಿಸಿದರು. ಕೊನೆಯಲ್ಲಿ ಭೀಮವ್ವ ಗುಡೇನಕಟ್ಟಿ ವಂದಿಸಿದರು. ವೇದಿಕೆಯಲ್ಲಿ ಹುಯಿಲಗೋಳ ಗ್ರಾಮದ ಬಸವರಾಜ ಎಫ್. ಈರಣ್ಣವರ ಸಂಗಡದಿಂದ ಜಾನಪದ ನೃತ್ಯ, ಸಂಗೀತ ಕಾರ್ಯಕ್ರಮ ನಡೆಯಿತು. ಸನ್ನಿಧಿ ಜೊಂಡಿ ಇವರಿಂದ ಭರತನಾಟ್ಯ ಜರುಗಿತು.
ಇದೇ ವೇಳೆ ಸಾಧಕರಾದ ಗಂಗಾಧರಯ್ಯ ಹಿರೇಮಠ, ಸಮೃದ್ಧಿ ಹಳೆಮನೆ, ಸೌಮ್ಯ ಮೀಸಿ, ಸಹನಾ ಸಿದ್ದಲಿಂಗಪ್ಪ ಹರ್ತಿ, ಮೃತ್ಯುಂಜಯ ಬಾಳಿಹಳ್ಳಿಮಠ ಮುಂತಾದವರನ್ನು ಗೌರವಿಸಲಾಯಿತು.


