ವಿಜಯಸಾಕ್ಷಿ ಸುದ್ದಿ, ಗದಗ: ಈ ಜಗತ್ತಿನಲ್ಲಿ ಯಾವುದೇ ಧರ್ಮ ತನ್ನ ಸರಳ ಮತ್ತು ಸತ್ಯದ ಆಚರಣೆಗಳನ್ನು ಕಳೆದುಕೊಳ್ಳುತ್ತಾ ಹೋದಾಗ, ಆ ಧರ್ಮದಲ್ಲಿ ಬರೀ ಮೂಢನಂಬಿಕೆ-ಕಂದಾಚಾರಗಳೇ ತುಂಬಿಕೊಂಡಾಗ, ಅವಕಾಶವಾದಿಗಳು ಆ ಧರ್ಮದ ಆಚಾರಗಳ ಹೆಸರಿನಲ್ಲಿ ಸುಲಿಗೆಗಿಳಿದಾಗ, ಅದು ಜನರ ಶೋಷಣೆಗೆ ಕಾರಣವಾದಾಗ ಅದು ಜಡತೆಯನ್ನು ಪಡೆಯುತ್ತದೆ, ನೇಪಥ್ಯಕ್ಕೆ ಸರಿಯುತ್ತದೆ. ಇಲ್ಲಿ ಧರ್ಮ ತನ್ನ ತತ್ವ ನೀತಿಗಳಿಂದ ಜನಸಾಮಾನ್ಯರನ್ನು ತಮಂಧದಿಂದ ಜ್ಞಾನದ ಬೆಳಕಿತ್ತ ಹೊರಳಿಸಬೇಕೇ ಹೊರತು ಅವರಲ್ಲಿ ಅಂಧತ್ವ ತುಂಬಿ ಅಜ್ಞಾನಿಗಳನ್ನಾಗಿ ಮಾಡಬಾರದು ಎಂದು ಶರಣ ತತ್ವ ಚಿಂತಕಿ ಗಿರಿಜಕ್ಕ ಧರ್ಮರಡ್ಡಿ ಹೇಳಿದರು.
ಅವರು ಬಸವದಳದ ಶರಣ ಸಂಗಮ ಕಾರ್ಯಕ್ರಮದಲ್ಲಿ `ಲಿಂಗಾಯತ ಧರ್ಮ ಸಂಸ್ಕಾರಗಳು’ ವಿಷಯದ ಕುರಿತು ಉಪನ್ಯಾಸ ನೀಡುತ್ತಿದ್ದರು.
ಲಿಂಗಾಯತ ಧರ್ಮದ ಸಂಸ್ಕಾರವು ಶಿಶು ಗರ್ಭದೊಳಗಿರುವಾಗಲೇ ಆರಂಭವಾಗುವುದು. ಜನನದ ನಂತರ ವಿವಿಧ ವಯೋಮಾನಗಳವರೆಗೆ ನೀಡುವ ಸಂಸ್ಕಾರಗಳಿಂದ ಮಾನವ ಶರಣತ್ವದ ಕಡೆ ನಡೆಯುತ್ತಾನೆ. ಸದ್ಯ ಇಂಥ ಧರ್ಮ ಸಂಸ್ಕಾರವನ್ನು ಶರಣೆ ಪೂಜಾ, ದರ್ಶನ ಐದನಾಳ ಇವರಿಗೆ ನೀಡಲಾಗಿದೆ. ಲಿಂಗಾಯತವೆಂದರೆ ಜಾತಿಯಲ್ಲ, ಅದು ಧರ್ಮ. ಮನುಷ್ಯ ಸಂಸ್ಕಾರಯುತವಾಗಿ ಬದುಕುವ ರೀತಿ ಲಿಂಗಾಯತವಾಗಿದೆ. ಇಲ್ಲಿ ಯಾರು ಬೇಕಾದರೂ ಅಂಗದ ಮೇಲೆ ಇಷ್ಟಲಿಂಗವನ್ನು ಧರಿಸಿಕೊಳ್ಳಬಹುದು. ಅವರೇ ಲಿಂಗಾಯತರಾಗುವರೆಂದರು.
ಗದಗ ನಗರದ ಸೌಖ್ಯದಾ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ. ತೇಜಸ್ವಿ ಹಿರೇಮಠ ಮಾತನಾಡುತ್ತಾ, ಗರ್ಭ ಧರಿಸಿದ ಸ್ತ್ರೀಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರಬೇಕು. ಬಾಣಂತಿಯರಿಗೆ ಆಹಾರ, ಮಗುವಿನ ಆರೈಕೆ, ವೈದ್ಯರ ಸಲಹೆಯಂತೆ ಔಷಧಿ ಸೇವನೆ, ಕಾಲಕಾಲಕ್ಕೆ ಮಗುವಿಗೆ ಚುಚ್ಚುಮದ್ದು ಹಾಕಿಸುವುದು, ಎದೆ ಹಾಲು ಕುಡಿಸುವುದು, ಬಾಣಂತಿ, ಮಗುವಿನ ಪಾಲನೆಗೆ ಅತಿ ಅವಶ್ಯವಾದ ಮಹತ್ವದ ವಿಚಾರಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಗರ್ಭವತಿಯಾದ ಶರಣೆ ಪೂಜಾ ದರ್ಶನ ಐದನಾಳ ಲಿಂಗಸಗೂರು ಇವರನ್ನು ಬಸವದಳದ ವತಿಯಿಂದ ಗೌರವಿಸಿ ಶುಭ ಹಾರೈಸಲಾಯಿತು.
ಪ್ರಕಾಶ ಅಸುಂಡಿ ಸ್ವಾಗತಿಸಿದರು. ಮಂಜುಳಾ ಹಾಸೀಲಕರ ನಿರೂಪಿಸಿದರು. ನೀಲಲೋಚನ ಹಂಚಿನಾಳ ಶರಣು ಸಮರ್ಪಣೆಗೈದರು. ಕಾರ್ಯಕ್ರಮದಲ್ಲಿ ಬಸವ ದಳದ ಶರಣ ಬಂಧುಗಳಿಂದ ಪ್ರಸಾದ ಕಾರ್ಯಕ್ರಮ ಜರುಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಶರಣ ವಿ.ಕೆ. ಕರೇಗೌಡ್ರ ವಹಿಸಿ, ಅಧ್ಯಕ್ಷೀಯ ನುಡಿಗಳನ್ನಾಡಿ, ಇಂದು ಸಮಾಜಕ್ಕೆ ಅತಿ ಅವಶ್ಯವಾಗಿ ತಿಳಿಹಬೇಕಾಗಿರುವುದು ಬಸವಾದಿ ಶರಣರ ನಿಜಚಾರಣೆಗಳು, ಬಸವದಳದಿಂದ ಈ ಶುಭ ಕಾರ್ಯಕ್ರಮದಲ್ಲಿ ನೆರವೇರಿದ್ದು ಸಂತಸಕರವಾಗಿದೆ. ಹಾಗೆಯೇ ಇದೇ ಸಮಾರಂಭದಲ್ಲಿ ತಮ್ಮ ಪಾಂಡಿತ್ಯಪೂರ್ಣ ಉಪನ್ಯಾಸದ ಮೂಲಕ ಬಾಣಂತಿ, ಮಗುವಿನ ಪಾಲನೆಗೆ ಬೇಕಾದ ಉಪಯುಕ್ತ ಸಲಹೆ ನೀಡಿದ ಡಾ. ತೇಜಸ್ವಿ ಹಿರೇಮಠರನ್ನು ಶ್ಲಾಘಿಸಿದರು.