ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಿತ್ಯ ನೂರಾರು ಜನರನ್ನು ಹೊತ್ತು ಸಾಗಿಸುವ ಸಾರಿಗೆ ವಾಹನಗಳ ನಿರ್ವಾಹಕ, ಚಾಲಕ ಮತ್ತು ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುವವರ ಸೇವೆ ಸದಾ ಶ್ಲಾಘನೀಯವಾಗಿದ್ದು, ಸಾರಿಗೆ ಸೇವೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಕಾರ್ಯವನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಸಮಾಜ ಮಾಡಬೇಕಾಗಿದೆ ಎಂದು ನಗರ ಸಾರಿಗೆ ಘಟಕ ವ್ಯವಸ್ಥಾಪಕಿ ಸವಿತಾ ಆದಿ ಹೇಳಿದರು.
ಅವರು ಪಟ್ಟಣದ ಜೆಸಿಐ ಲಕ್ಷ್ಮೇಶ್ವರ ಪುಲಿಗೆರೆ ಪ್ರಭೆ ಸಂಸ್ಥೆಯ ವತಿಯಿಂದ ಶುಕ್ರವಾರ ಕೆಎಸ್ಆರ್ಟಿಸಿ ಹಿರಿಯ ಸಿಬ್ಬಂದಿಗಳಿಗೆ ಸೇವಾಭಾವನೆ, ಶಿಸ್ತು ಮತ್ತು ಸಮಯಪಾಲನೆಯ ಪ್ರತ್ಯೇಕವಾಗಿ ಗುರುತಿಸಲ್ಪಡುವ ಚಾಲಕರಿಗೆ, ನಿರ್ವಾಹಕರಿಗೆ, ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಗೆ ಸನ್ಮಾನ, ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಇಲ್ಲಿನ ಘಟಕದಲ್ಲಿನ ಬಹುತೇಕ ಸಿಬ್ಬಂದಿಗಳು ಉತ್ತಮವಾಗಿ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ತಮ್ಮ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಇದರಿಂದ ಘಟಕಕ್ಕೆ ಉತ್ತಮ ಹೆಸರು ಲಭ್ಯವಾಗಿದೆ. ಘಟಕದಲ್ಲಿ ನಡೆಯುವ ಎಲ್ಲ ಕಾರ್ಯಗಳಿಗೂ ಸಿಬ್ಬಂದಿಗಳ ಸಹಕಾರವೇ ಮುಖ್ಯವಾಗಿದ್ದು, ನಮ್ಮ ಘಟಕದ ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಿರುವ ಜೆಸಿಐ ಸಂಸ್ಥೆಗೆ ಧನ್ಯವಾದ ಅರ್ಪಿಸುವದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಲಕ್ಷ್ಮೇಶ್ವರ ಪುಲಿಗೆರೆ ಪ್ರಭೆ ಸಂಸ್ಥೆಯ ಅಧ್ಯಕ್ಷೆ ಲಕ್ಷ್ಮೀ ಹಂಗನಕಟ್ಟಿ ಮಾತನಾಡಿ, ಸಾರಿಗೆ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿ, ಅವರ ನಿಸ್ವಾರ್ಥ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪುರಸಭೆ ಸದಸ್ಯ ವಸೀಂ ಮುಚ್ಚಾಲೆ, ಜೆಸಿಐ ಕಾರ್ಯದರ್ಶಿ ಪ್ರಶಾಂತ ನರಸಮ್ಮನವರ, ಉಪಾಧ್ಯಕ್ಷ ಬಸವರಾಜ್ ಮಜ್ಜಿಗುಡ್ಡದ, ಬಸವರಾಜ ಅರಳಿ, ರಾಜೇಶ ಕೆರೂರು, ಶಿವಪ್ರಕಾಶ ಗುಡ್ಡಿಮಠ ಮತ್ತು ಲಕ್ಷ್ಮೇಶ್ವರ ಸಾರಿಗೆ ಘಟಕದ ಎಲ್ಲ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.