ಧಾರವಾಡ: ಭಾರತದಲ್ಲಿ ಇಂದು ತುರ್ತು ಪರಿಸ್ಥಿತಿಗಿಂತಲೂ ಕೆಟ್ಟ ಪರಿಸ್ಥಿತಿ ಇದೆ ಎಂದು ಹೇಳುವ ಮೂಲಕ ಕೇಂದ್ರದ ವಿರುದ್ಧ ಸಚಿವ ಸಂತೋಷ್ ಲಾಡ್ ಆಕ್ರೋಶ ಹೊರ ಹಾಕಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, 50 ವರ್ಷದ ಹಿಂದಿನ ತುರ್ತು ಪರಿಸ್ಥಿತಿ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಆದರೆ, ಇಂದು ದೇಶದಲ್ಲಿ ತುರ್ತು ಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಅದರ ಬಗ್ಗೆ ಬಿಜೆಪಿಯವರು ಮೊದಲು ಮಾತನಾಡಲಿ. ಪೆಹಲ್ಗಾಮ್, ಪುಲ್ವಾಮಾ ಬಗ್ಗೆ ಬಿಜೆಪಿಯವರು ಮಾತನಾಡುವುದಿಲ್ಲ. ಅದರ ಬಗ್ಗೆ ಯಾರೂ ಕೇಳಬಾರದು ಎನ್ನುತ್ತಾರೆ. ವಿಷಯಾಧಾರಿತ ಸಮಸ್ಯೆ ಜನರಿಗೆ ಗೊತ್ತಾಗದಂತೆ ಹೊಸ ಹೊಸ ವಿಷಯ ತರುವುದೇ ಬಿಜೆಪಿಯವರ ಕೆಲಸ.
11 ವರ್ಷದಿಂದ ಕೇಂದ್ರದಲ್ಲಿ ಅವರೇ ಅಧಿಕಾರದಲ್ಲಿದ್ದಾರೆ. ಜನರಿಗೆ ಯಾವುದೇ ಮಾಹಿತಿ ಇರಬಾರದು ಎಂಬುದು ಅವರ ಅನಿಸಿಕೆ. ಯಾವುದೇ ದೇಶಕ್ಕೆ ನಮ್ಮ ದೇಶ ಹೋಲಿಸಿ ನಾವು ನೋಡಬಾರದು. ಬೇರೆ ರಾಜ್ಯಕ್ಕೆ ನಮ್ಮನ್ನು ನಾವು ಹೋಲಿಕೆ ಮಾಡಬಾರದು. ನಮ್ಮ ದೇಶವೇ ಗ್ರೇಟ್, ನಮ್ಮ ಪ್ರಧಾನಿಯೇ ಗ್ರೇಟ್ ಎಂದು ಟಿವಿಯಲ್ಲಿ ತೋರಿಸುವುದನ್ನು ಬಿಟ್ಟರೆ ಈ ದೇಶದಲ್ಲಿ ಏನೂ ಆಗುತ್ತಿಲ್ಲ ಎಂದರು.