ಮೈಸೂರು: ಮನೆ ನಿರ್ಮಾಣಕ್ಕಾಗಿ ಪಡೆದ ಸಾಲವನ್ನು ತೀರಿಸಲಾಗದೆ ಯೋಧನೋರ್ವ ಆತ್ಮಹತ್ಯೆಗೆ ಶರಣಾದ ದುರ್ಘಟನೆ ಹುಣಸೂರು ನಗರದಲ್ಲಿ ನಡೆದಿದೆ. ಮೃತರನ್ನು ಎಂ. ಚಂದ್ರಶೇಖರ್ (35) ಎಂದು ಗುರುತಿಸಲಾಗಿದ್ದು, ಅವರು ನಂಜಾಪುರದ ನಿವಾಸಿ ಹಾಗೂ ಸೈನಿಕರಾಗಿದ್ದರು.
ಎರಡು ವರ್ಷಗಳ ಹಿಂದೆ ಹುಣಸೂರು ಹೊಸ ಬಡಾವಣೆಯಲ್ಲಿ ಮನೆ ನಿರ್ಮಿಸಲು ಬ್ಯಾಂಕ್ ಮತ್ತು ಸ್ನೇಹಿತರ ಬಳಿ ಸಾಲ ಮಾಡಿದ್ದ ಅವರು, ಇತ್ತೀಚೆಗೆ ಸಾಲದ ಬಾಧೆಯಿಂದ ಪರದಾಡುತ್ತಿದ್ದರು ಎಂದು ತಿಳಿದುಬಂದಿದೆ.
15 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರ, ಆಗ್ರಾ, ಚೀನಾ ಗಡಿಯಲ್ಲಿ ಚಂದ್ರಶೇಖರ್ ಕರ್ತವ್ಯ ನಿರ್ವಹಿಸಿದ್ದರು. 1 ತಿಂಗಳ ಹಿಂದೆ ಅವರು ರಜೆ ಮೇಲೆ ಮನೆಗೆ ಬಂದಿದ್ದರು. ದೀಪಾವಳಿ ಹಬ್ಬದ ನಂತರ ಕರ್ತವ್ಯಕ್ಕೆ ವಾಪಸ್ಸಾಗ ಬೇಕಿತ್ತು. ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



