ವಿಜಯಪುರ:- ರಾಜ್ಯ ಬಿಜೆಪಿ ಐಸಿಯುನಲ್ಲಿದ್ದು, ಯಡ್ಡಿಯೂರಪ್ಪ ಕುಟುಂಬವನ್ನ ಬಿಜೆಪಿಯಿಂದ ಮುಕ್ತ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ತುಂಬಿ ತುಳುಕುತ್ತಿದ್ದು, ಸದ್ಯ ಐಸಿಯುನಲ್ಲಿದೆ. ಬಿಜೆಪಿಯವರು ಒಂದು ಹೋರಾಟ ಮಾಡಬೇಕೆಂದರೆ ಜನ ಸೇರುವುದಿಲ್ಲ. ಇದಕ್ಕೆ ಕಾರಣ ಎಂದರೆ ರಾಜ್ಯ ಬಿಜೆಪಿ ನಾಯಕತ್ವ. ಇನ್ನೂ ಕುಮಾರಸ್ವಾಮಿಯವರ ಜೊತೆ ಕೂಡ ಹೊಂದಾಣಿಕೆ ಇಲ್ಲ. ಜೆಡಿಎಸ್ ನಮ್ಮ ಮಿತ್ರ ಪಕ್ಷವಾಗಿದ್ದರೂ ಕೂಡ ಅದನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಈಗಲಾದರೂ ಅಮಿತ್ ಶಾ ಅವರು ತಿಳಿದುಕೊಳ್ಳಬೇಕು. ಯಡ್ಡಿಯೂರಪ್ಪ ಕುಟುಂಬದ ಬಗ್ಗೆ, ಯಡ್ಡಿಯೂರಪ್ಪ ಅವರ ಅಸ್ತಿತ್ವ ಏನು ಉಳಿದಿಲ್ಲ ಎಂದು ತಿಳಿದುಕೊಳ್ಳಬೇಕು. ಈಗಲೂ ಯಡ್ಡಿಯೂರಪ್ಪನನ್ನ ಜೀ,ಜೀ ಅಂದರೆ ಕರ್ನಾಟಕದಲ್ಲಿ ಬಿಜೆಪಿಗೆ ಬಹಳ ಕಷ್ಟ ಆಗುತ್ತದೆ ಎಂದರು.
ಯಡ್ಡಿಯೂರಪ್ಪ ಕುಟುಂಬವನ್ನ ಬಿಜೆಪಿಯಿಂದ ಮುಕ್ತ ಮಾಡಬೇಕು. ಪ್ರತಿನಿತ್ಯ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿದ್ದಾರೆ. ಇವರು ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಅಹ್ಮದ್ ಜೊತೆ ಸಂತೋಷವಾಗಿದ್ದಾರೆ. ಇದು ಕಾರ್ಯಕರ್ತರಿಗೆ ಏನು ಸಂದೇಶ ಕೊಡುತ್ತದೆ. ಅವರೊಂದಿಗೆ ನಿಮಗೆ ಅಷ್ಟೊಂದು ಆತ್ಮೀಯತೆ ಇದ್ದರೆ ಕಾಂಗ್ರೆಸ್ ಪಕ್ಷ ಸೇರಿಕೊಳ್ಳಿ. ಹಿಂದೂ ಕಾರ್ಯಕರ್ತರನ್ನು ಬಲಿ ತಗೆದುಕೊಳ್ಳಬೇಡಿ ಎಂದು ಕಿಡಿಕಾರಿದರು.