ವಿಜಯಸಾಕ್ಷಿ ಸುದ್ದಿ, ಗದಗ: 18 ವರ್ಷಗಳ ಬಳಿಕ ಐಪಿಎಲ್ ಗೆದ್ದ ಆರ್ಸಿಬಿ ತಂಡಕ್ಕೆ ಸಿಕ್ಕ ಜನರ ಪ್ರೀತಿಗೆ ಎಲ್ಲರ ಮನಸೋತ್ತಿದ್ದು ನಿಜ. ಈ ಪ್ರೀತಿ ಹಾಗೂ ಉತ್ಸಾಹವನ್ನು ನೋಡಿ ಸಿಎಂ ಹಾಗೂ ಡಿಸಿಎಂ ಇದರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋಗಿ 11 ಯುವಕರನ್ನು ಬಲಿ ಪಡೆದಿದ್ದಾರೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್.ಗೋವಿಂದಗೌಡ್ರ ರಾಜ್ಯ ಸರ್ಕಾರದ ಬೇಜವಾಬ್ದಾರಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಧಾನಸೌಧದ ಮುಂದೆ ಆರ್ಸಿಬಿ ತಂಡದ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ರಾಜ್ಯ ಸರ್ಕಾರದಿಂದ ಏರ್ಪಟ್ಟಿತ್ತು. ಇದರ ಶ್ರೇಯಸ್ಸು ಮುಖ್ಯಮಂತ್ರಿಗಳಿಗೆ ಹೋಗಿದೆ ಎಂದು ಉಪಮುಖ್ಯಮಂತ್ರಿಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್ಲರಿಗೂ ಉಚಿತ ಪ್ರವೇಶವೆಂದು ಘೋಷಣೆ ಮಾಡಿ ಕೇವಲ ಮೂರೇ ಗೇಟುಗಳನ್ನು ತೆರೆದು ಈ ಅವಘಡಕ್ಕೆ ಕಾರಣರಾಗಿದ್ದಾರೆ. ಅದರ ಕ್ರೆಡಿಟ್ ಪಡೆಯಲು ಹೋಗಿ ಎಲ್ಲಾ ಅವಾಂತರಗಳಿಗೆ ಕಾರಣರಾಗಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಇಷ್ಟು ದೊಡ್ಡ ದುರಂತ ನಡೆದರೂ ಕೂಡ ರಾಜ್ಯದ ಉಪ ಮುಖ್ಯಮಂತ್ರಿಗಳು ಪ್ರಚಾರ ಗಿಟ್ಟಿಸಿಕೊಳ್ಳುವಲ್ಲಿ ಮಗ್ನರಾಗಿದ್ದರು ಎಂದು ಈ ನಡವಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ.
ರಾಜ್ಯ ವಕ್ತಾರರ ಈ ಹೇಳಿಕೆಯನ್ನು ಬಸವರಾಜ ಅಪ್ಪಣ್ಣವರ, ಎಂ.ಎಸ್. ಪಾರ್ವತಗೌಡ್ರ, ರಮೇಶ ಹುನಸಿಮರದ, ಸಂತೋಷ ಪಾಟೀಲ, ಪ್ರಫುಲ್ಲ ಪುನೀಕರ, ಪುಲಿಕೇಶಿ ಗಾಲಿ, ಜಿ.ಕೆ. ಕೊಳ್ಳಿಮಠ, ಮಂಜುಳಾ ಮೇಟಿ, ಸಿದ್ದಲಿಂಗಯ್ಯ ಹೊಂಬಾಳೆಮಠ, ಶರಣಪ್ಪ ಹೂಗಾರ, ಕಲ್ಕುಸಾ ಸಿಂಗ್ರಿ ಸಮರ್ಥಿಸಿದ್ದಾರೆ.