‘ಭೀಮ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಗೆಲುವು ಕಂಡಿದೆ. ಮೊದಲ ವಾರಾಂತ್ಯಕ್ಕೆ 10 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಬಾಚಿಕೊಂಡಿದ್ದ ‘ಭೀಮ’ ರಾಜ್ಯದ ಬಹುತೇಕ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಭೀಮ’ ಸಿನಿಮಾವು ಸುಮಾರು ಎರಡೂವರೆ ವರ್ಷಗಳ ಪ್ರಾಜೆಕ್ಟ್. ‘ಸಲಗ’ ಹಿಟ್ ಆಗಿದ್ದರಿಂದ ‘ಭೀಮ’ ಆರಂಭ ಆದ ದಿನದಿಂದಲೂ ದೊಡ್ಡ ನಿರೀಕ್ಷೆ ಹುಟ್ಟುಹಾಕಿತ್ತು. ಹಾಡುಗಳು ಕೂಡ ಭಾರಿ ಸೌಂಡು ಮಾಡಿದ್ದವು.
ಹೀಗಿದ್ದರೂ ‘ಭೀಮ’ನಿಗೆ ಅಂದುಕೊಂಡ ಮಟ್ಟಕ್ಕೆ ಪ್ರೀ-ರಿಲೀಸ್ ಬ್ಯುಸಿನೆಸ್ ಆಗಿರಲಿಲ್ಲ. ಇದು ಚಿತ್ರತಂಡಕ್ಕೆ ಕೊಂಚ ಆತಂಕ ತಂದಿತ್ತು. ಆದರೂ ಧೈರ್ಯ ಮಾಡಿ, ಥಿಯೇಟರ್ಗಳಿಂದಲೇ ಹಾಕಿದ ಬಂಡವಾಳ ತೆಗೆಯುವ ರಿಸ್ಕ್ ತೆಗೆದುಕೊಂಡು ನಿರ್ಮಾಪಕರು ಸಿನಿಮಾ ರಿಲೀಸ್ ಮಾಡಿದ್ದರು. ಅದು ಈಗ ಅವರ ಕೈಹಿಡಿದಿದೆ ಎಂದೇ ಹೇಳಬಹುದು.
ಈ ಖುಷಿಯಲ್ಲೇ ಚಿತ್ರತಂಡ ಸಂಭ್ರಮಾಚರಿಸಿದ್ದು ಈ ವೇಳೆ ನಟ ದುನಿಯಾ ವಿಜಯ್ ‘ನನಗೆ ಸ್ವತಂತ್ರವಾಗಿ ಸಿನಿಮಾ ಮಾಡುವ ಅವಕಾಶ ಕೊಟ್ಟ ನಿರ್ಮಾಪಕರಾದ ಜಗದೀಶ್ ಗೌಡ ಹಾಗೂ ಕೃಷ್ಣಸಾರ್ಥಕ್ ಅವರಿಗೆ ಋಣಿಯಾಗಿದ್ದೇನೆ. ನಮ್ಮನ್ನು ಕೆಣಕಿ, ಹಂಗಿಸಿದವರಿಗೆ ಈ ಚಿತ್ರದ ಯಶಸ್ಸು ಉತ್ತರ ಕೊಟ್ಟಿದೆ ಎಂದರು.
ಎಲ್ಲರೂ ಇಂಥ ಚಿತ್ರಗಳನ್ನು ನೋಡಬೇಕು, ಮಕ್ಕಳು, ಪೋಷಕರು ಎಲ್ಲರೂ ಕೂತು ನೋಡುವ ಚಿತ್ರವಿದು ಎಂದು ಮೆಚ್ಚಿಕೊಳ್ಳುತ್ತಿದ್ದಾರೆ. ಒಳ್ಳೆಯ ವಿಚಾರ- ಸಂದೇಶ ಹೇಳುವುದಕ್ಕೆ ನಾನು ರಗಡ್ ದಾರಿಯನ್ನು ಆಯ್ಕೆ ಮಾಡಿಕೊಂಡೆ. ಇರೋ ಸಂಗತಿಗಳನ್ನು ಯಥಾವತ್ತಾಗಿ ಹೇಳಿದ್ದೇನೆ. ಭೀಮ ಚಿತ್ರದಲ್ಲಿರುವ ಕತೆ ಸಮಾಜಕ್ಕೆ ಎಚ್ಚರಿಕೆಯ ಗಂಟೆ’ ಎಂದರು. ಕೃಷ್ಣಸಾರ್ಥಕ್, ಜಗದೀಶ್ ಗೌಡ, ‘ಪ್ರೀ ರಿಲೀಸ್ ಬಿಸಿನೆಸ್ ಇಲ್ಲದೆ ಇರುವ ಹೊತ್ತಿನಲ್ಲಿ ಶೇ.99ರಷ್ಟು ರಿಸ್ಕ್ನಲ್ಲಿ ಪ್ರೇಕ್ಷಕರ ಮೇಲೆ ನಂಬಿಕೆ ಇಟ್ಟು ನಮ್ಮ ಚಿತ್ರವನ್ನು ಬಿಡುಗಡೆ ಮಾಡಿದ್ದೆವು. ಆ ನಂಬಿಕೆ ಈಗ ನಿಜವಾಗಿದೆ.
ನಮ್ಮ ಚಿತ್ರದ ಓಟಿಟಿ, ಟೀವಿ ಹಕ್ಕು ಯಾವುದೇ ವ್ಯಾಪಾರ ಆಗಿಲ್ಲ. ಚಿತ್ರಮಂದಿರ ನಂಬಿಕೊಂಡು ಸಿನಿಮಾ ಮಾಡಿದರೆ ಗೆದ್ದೇ ಗೆಲ್ಲುತ್ತೇವೆ ಎಂಬುದು ಸಾಬೀತಾಗಿದೆ. ಹಿಂದಿನಂತೆ ಈಗ ಚಿತ್ರಮಂದಿರಗಳನ್ನೇ ನಂಬಿಕೊಂಡು ಸಿನಿಮಾ ಮಾಡಬೇಕಿದೆ’ ಎಂದರು. ಸಂಭಾಷಣೆಕಾರ ಮಾಸ್ತಿ, ಸಂಗೀತ ನಿರ್ದೇಶಕ ಚರಣ್ ರಾಜ್, ನಾಯಕಿ ಅಶ್ವಿನಿ, ಪ್ರಮುಖ ಪಾತ್ರಧಾರಿಗಳಾದ ಡ್ರ್ಯಾಗನ್ ಮಂಜು, ಪ್ರಿಯಾ ಷಟಮರ್ಶನ, ನಯನಾ ಸೂಡ, ಜಯಸೂರ್ಯ, ಆಂಟೋನಿ, ನೃತ್ಯ ನಿರ್ದೇಶಕ ಧನು, ಸಾಹಸ ನಿರ್ದೇಶಕ ಶಿವು ಇದ್ದರು.