ಅಯೋಧ್ಯೆ:- ಇಂದು ದೇಶದೆಲ್ಲೆಡೆ ಶ್ರೀರಾಮನವಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಶುಭ ಗಳಿಗೆಯಲ್ಲೇ ಅಯೋಧ್ಯೆ ಶ್ರೀರಾಮಮಂದಿರದಲ್ಲಿ ದಿವ್ಯ ದೃಶ್ಯ ಕಂಡು ಬಂದಿದೆ. ಇದನ್ನು ನೋಡಿದ ಭಕ್ತರು ಆಶ್ಚರ್ಯಚಕಿತರಾಗಿದ್ದಾರೆ.
ಹೌದು, ಬಾಲರಾಮನ ಹಣೆಯ ಮೇಲೆ ಸೂರ್ಯ ತಿಲಕ ಮೂಡಿದೆ. ಸೂರ್ಯನ ಕಿರಣವು ನೇರವಾಗಿ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಬಿದ್ದ ದಿವ್ಯ ದೃಶ್ಯ ಕಂಡುಬಂತು. ನಿಖರವಾಗಿ ಮಧ್ಯಾಹ್ನ 12 ಗಂಟೆಗೆ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಬಿದ್ದ ಸೂರ್ಯನ ಕಿರಣ, ದಿವ್ಯ ತಿಲಕವನ್ನು ರೂಪಿಸಿತು. ಸೂರ್ಯ ಕಿರಣವು ದೇವರ ಹಣೆಯನ್ನು ಬೆಳಗಿಸಿ, ಆಚರಣೆಗಳಿಗೆ ಆಧ್ಯಾತ್ಮಿಕ ಹೊಳಪನ್ನು ನೀಡಿತು.
ಇನ್ನೂ ದೇಶಾದ್ಯಂತ ರಾಮನವಮಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಇದು ವಿಷ್ಣುವಿನ ಏಳನೇ ಅವತಾರವಾದ ಭಗವಾನ್ ರಾಮನ ಜನ್ಮ ವಾರ್ಷಿಕೋತ್ಸವದ ದಿನ. ಜನರು ದೇವಾಲಯಗಳಿಗೆ ತೆರಳಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಅಲ್ಲಲ್ಲಿ ಭಜನೆಗಳು, ಮೆರವಣಿಗೆಗಳು ಮತ್ತು ಜಪಗಳು ನಡೆಯುತ್ತಿವೆ.