ಇಟ್ಟಿಗೆರೆ ಅಭಿವೃದ್ಧಿಗೆ ಕಾಲ ಸನ್ನಿಹಿತ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದ ಪಾಳಾ-ಬಾದಾಮಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಇಟ್ಟಿಗೆರೆ ಅಭಿವೃದ್ಧಿಯಾಗಬೇಕು ಎಂಬ ಹಲವಾರು ವರ್ಷಗಳ ಕೂಗಿಗೆ ಪುರಸಭೆ ಈಗ ಕಿವಿಯಾಗಿದ್ದು, ಅಭಿವೃದ್ಧಿ ಕಾಲ ಸನ್ನಿಹಿತವಾಗಿದೆ.

Advertisement

ಸದ್ಯ ಪಟ್ಟಣದ ಹೃದಯ ಭಾಗದಲ್ಲಿಯೇ ಇರುವ 12 ಎಕರೆ 30 ಗುಂಟೆ ಇಟ್ಟಿಗೆರೆ ಪಟ್ಟಣದ ಜನರ ಜೀವನಾಡಿಯಾಗಿದೆ. ತಾಲೂಕಾ ಕೇಂದ್ರವಾದ ಲಕ್ಷ್ಮೇಶ್ವರದಲ್ಲಿರುವುದು ಕೇವಲ 1 ಕೆರೆ ಮಾತ್ರ. ಈ ಕೆರೆ ಸಂರಕ್ಷಣೆಯಾಗದಿದ್ದರೆ ಮುಂದೊಂದು ದಿನ ಲಕ್ಷ್ಮೇಶ್ವರ ಕೆರೆ ಮುಕ್ತ ಪಟ್ಟಣವಾಗಲಿದೆ ಎಂಬ ಸತ್ಯ ಎಲ್ಲರಿಗೂ ಗೊತ್ತಿದೆ. ಅಭಿವೃದ್ಧಿ ಕಾಣದ್ದರಿಂದ ಮಳೆಗಾಲದಲ್ಲಿ ಕೆರೆ ತುಂಬಿದರೆ ಕೆರೆ ಅಂಚಿನ ನಿವಾಸಿಗಳ ಗೋಳು ಹೇಳತೀರದಾಗಿತ್ತು. ಆದಾಗ್ಯೂ ಸಂಬAಧಪಟ್ಟ ಪುರಸಭೆ, ಜನಪ್ರತಿನಿಧಿಗಳ ನಿರ್ಲಕ್ಷದಿಂದ ಕೆರೆ ಪ್ರಾಂಗಣ ಬಯಲು ಶೌಚ, ತಾಜ್ಯ ವಿಲೇವಾರಿ ತಾಣವಾಗಿದೆ. ಕೆರೆಗೆ ಹರಿದು ಬರುವ ಮಳೆ ನೀರಿನ ಮಾರ್ಗಗಳು ಮುಚ್ಚಿದ್ದು, ಕೆರೆ ನೀರಿಗೆ ಕೇವಲ ಚರಂಡಿ ನೀರು, ಗಲೀಜು ಯಥೇಚ್ಛವಾಗಿ ಹರಿದು ಬಂದು ಸೇರುತ್ತಾ ಕೆರೆ ರೋಗಗ್ರಸ್ಥವಾಗಿದೆ.

ಈ ಕೆರೆ ಅಭಿವೃದ್ಧಿಯಾಗಬೇಕು ಎಂಬುದು ಎಲ್ಲರ ಹೆಬ್ಬಯಕೆಯಾಗಿತ್ತು. ಪತ್ರಿಕೆಯೂ ಈ ಬಗ್ಗೆ ಅನೇಕ ಬಾರಿ ಗಮನಾರ್ಹ ವರದಿ ಪ್ರಕಟಿಸಿತ್ತು. ಈ ನಿಟ್ಟಿನಲ್ಲಿ ಪುರಸಭೆಯವರು ಸಂಗ್ರಹವಾದ ಕೆರೆ ಅಭಿವೃದ್ಧಿ ಶುಲ್ಕ 56 ಲಕ್ಷ ರೂ ಅನುದಾನಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಪ್ರಾಧಿಕಾರವು ಪುರಸಭೆಯವರೊಂದಿಗೆ ಸೇರಿ ಕೆರೆ ಸರ್ವೆ, ಪರಿಶೀಲನೆ ಮಾಡಿರುವುದು ನಾಗರಿಕರಲ್ಲಿ ಹರ್ಷ ಮೂಡಿಸಿದೆ.

ಈ ವೇಳೆ ಮಾತನಾಡಿದ ಪ್ರಾಧಿಕಾರದ ಇಂಜಿನಿಯರ್ ರಫೀ, ಒಟ್ಟು ಕೆರೆ ಪ್ರದೇಶದ ಸರ್ವೆ ಮಾಡಿ, ಒತ್ತುವರಿ ತೆರವುಗೊಳಿಸಲಾಗುವುದು. ಚರಂಡಿ ನೀರು ಸೇರುವ ಮಾರ್ಗಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ಮಳೆ ನೀರು ಮಾತ್ರ ಹರಿದು ಬರುವಂತೆ ಸುತ್ತಲೂ 3 ಮೀಟರ್ ಎತ್ತರದ ಬಂಡಿಂಗ್ ನಿರ್ಮಾಣ ಮಾಡಲಾಗುವುದು. ಪ್ರಸ್ತುತ ಕೆರೆಯಲ್ಲಿ ಸುಮಾರು 83 ಮಿಲಿಯನ್ ಲೀಟರ್ ನೀರು ನಿಲ್ಲುವ ಸಾಮರ್ಥ್ಯವಿದೆ. ಆದರೆ ಈಗಾಗಲೇ ಅವೈಜ್ಞಾನಿಕವಾಗಿ ಕೈಗೊಂಡಿರುವ ಕಾಮಗಾರಿ, ಒತ್ತುವರಿ ತೆರವುಗೊಳಿಸಿದಲ್ಲಿ ಸುಮಾರು 2 ಎಕರೆ ಜಮೀನು ಕೆರೆಗೆ ಸಿಗುತ್ತದೆ. ನೀರು ನಿಲ್ಲುವ ಪ್ರಮಾಣ 100 ಮೀಲಿಯನ್ ಲೀಟರ್ ಆಗಲಿದೆ ಎಂದರು. ಈ ವೇಳೆ ಶಂಕರ ಬ್ಯಾಡಗಿ, ಮಹೇಶ ಇದ್ದರು.

ಪಟ್ಟಣದಲ್ಲಿನ ಬೋರ್‌ವೆಲ್, ಬಾವಿ ಸೇರಿ ಜಲಮೂಲಗಳಿಗೆ ಇಟ್ಟಿಗೆರೆ ಅಂತರ್ಜಲ ಮೂಲಾಧಾರವಾಗಿದೆ. ಕೆರೆಗೆ ಚರಂಡಿ ನೀರು ಸೇರಬಾರದು. ಮಳೆ ನೀರು ಸಂಗ್ರಹದಿಂದ ಕೆರೆ ಸಮೃದ್ಧವಾಗಿ ತುಂಬಿ ಜನ-ಜಾನುವಾರು, ಕುರಿ-ಮೇಕೆ ಮತ್ತು ಪಕ್ಷಿಗಳ ದಾಹ ನೀಗಬೇಕು. ಅಲ್ಲದೇ ತುಂಗಭದ್ರಾ ನದಿಯಿಂದ ಕೆರೆ ತುಂಬಿಸುವ ಯೋಜನೆಯಲ್ಲಿ ಈ ಕೆರೆಯೂ ಸೇರಿದೆ. ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಕಾಮಗಾರಿ ಸದ್ಯದಲ್ಲಿಯೇ ಕೈಗೊಳ್ಳಲಾಗುತ್ತಿದೆ. ಕೆರೆ ಹೂಳೆತ್ತಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಕಾರ ಕೋರಿದ್ದು, ಅವರೂ ಒಪ್ಪಿಗೆ ಸೂಚಿಸಿದ್ದಾರೆ.

– ಮಹೇಶ ಹಡಪದ.

ಪುರಸಭೆ ಮುಖ್ಯಾಧಿಕಾರಿ.


Spread the love

LEAVE A REPLY

Please enter your comment!
Please enter your name here