ಮೊಹಾಲಿ: ಪಂಜಾಬ್ನ ಮೊಹಾಲಿಯಲ್ಲಿ ಪಾರ್ಕಿಂಗ್ ಸಮಸ್ಯೆಗೆ ಸಂಬಂಧಿಸಿದಂತೆ ನೆರೆಹೊರೆಯವರೊಂದಿಗೆ ನಡೆದ ಜಗಳದಲ್ಲಿ 39 ವರ್ಷದ ವಿಜ್ಞಾನಿ ಅಭಿಷೇಕ್ ಸ್ವರ್ಣಕರ್ ಸಾವನ್ನಪ್ಪಿದ್ದಾರೆ. ಮೂಲತಃ ಜಾರ್ಖಂಡ್ನ ಸ್ವರ್ಣಕರ್ ಇತ್ತೀಚೆಗೆ ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಮರಳಿದ್ದರು ಮತ್ತು ಸೆಕ್ಟರ್ 67 ರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾರ್ಚ್ 11ರ ರಾತ್ರಿ ಮಂಗಳವಾರ ಡಾ. ಅಭಿಷೇಕ್ ಸ್ವರ್ಣಕರ್ ಅವರು ನೆರೆಮನೆಯವರಾದ ಮಾಂಟಿ ಅವರೊಂದಿಗೆ ಪಾರ್ಕಿಂಗ್ ವಿಚಾರಕ್ಕೆ ವಾಗ್ವಾದ ನಡೆಸಿದ್ದರು ಈ ವೇಳೆ ನೆರೆಮನೆಯವ ಮಾಂಟಿ ಅವರನ್ನು ನೆಲಕ್ಕೆ ತಳ್ಳಿ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸ್ವರ್ಣಕರ್ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಡಯಾಲಿಸಿಸ್ಗೆ ಒಳಗಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ವರ್ಣಕರ್ ಜಾರ್ಖಂಡ್ ಮೂಲದವರಾಗಿದ್ದು, ತಮ್ಮ ಪೋಷಕರೊಂದಿಗೆ ಮೊಹಾಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ಮೊಹಾಲಿಯ IISER ನಲ್ಲಿ ಸಂಶೋಧಕರಾಗಿದ್ದರು.
ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 105 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.