ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜಗತ್ತಿನಲ್ಲಿ ಭಾರತವು ಅತ್ಯಂತ ಶ್ರೇಷ್ಠ ಸಂವಿಧಾನ ಹೊಂದಿದ ರಾಷ್ಟ್ರವಾಗಿದೆ. ದೇಶದ ಕಟ್ಟಕಡೆಯ ವ್ಯಕ್ತಿಗೂ ನೆಮ್ಮದಿಯ ಬದುಕು ನೀಡಲು ಸಂವಿಧಾನದಿಂದ ಸಾಧ್ಯವಾಗಿದ್ದು, ಭಾರತದ ಪ್ರತಿಯೊಬ್ಬ ಪ್ರಜೆಯು ಸಂವಿಧಾನವನ್ನು ಅರಿತುಕೊಳ್ಳುವುದರ ಜೊತೆಗೆ ಅದನ್ನು ಗೌರವಿಸಬೇಕು ಎಂದು ತಹಸೀಲ್ದಾರ ಧನಂಜಯ ಎಂ ಅಭಿಪ್ರಾಯಪಟ್ಟರು.
ಅವರು ಬುಧವಾರ ಪಟ್ಟಣದ ಚನ್ನಮ್ಮನ ವನ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ, ತಾ.ಪಂ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ, ಪ.ಜಾ/ಪ.ಪಂ ಹಾಗೂ ಇತರೆ ವಿವಿಧ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಸಂವಿಧಾನದ ಪೀಠಿಕೆಯಲ್ಲಿ ನಮ್ಮ ದೇಶದ ಪ್ರಜಾಪ್ರಭುತ್ವದ ಹಿರಿಮೆ, ಶಕ್ತಿ ಹಾಗೂ ಅದರ ಶ್ರೇಷ್ಠ ಗುಣಗಳು ಅಡಗಿವೆ. ಸರ್ವಧರ್ಮಗಳಿಗೂ ಸಮಭಾವ ಎಂಬ ಸದಾಶಯ ಸಂವಿಧಾನದ ಮುಖ್ಯ ಧ್ಯೇಯವಾಗಿದೆ. ಸಂವಿಧಾನದಲ್ಲಿ ಜೀವನದ ಮೌಲ್ಯಗಳು ಅಡಕವಾಗಿವೆ ಎಂದು ಹೇಳಿದರು.
ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಸಿ.ಜಿ. ಹಿರೇಮಠ ಮಾತನಾಡಿ, ನಮ್ಮ ದೇಶ ಜಾತ್ಯಾತೀತ ರಾಷ್ಟ್ರವಾಗಲು ಸಂವಿಧಾನವೇ ಕಾರಣ. ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ರಕ್ಷಿಸಲೆಂದೇ ಸಂವಿಧಾನ ರಚನೆಯಾಗಿದೆ. ಇಷ್ಟೆಲ್ಲ ಇದ್ದರೂ ಸಹ ಇನ್ನೂ ಶೋಷಣೆ ತಪ್ಪಿಲ್ಲ ಎಂದು ಹೇಳಿದರು.
ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ನಾಗರಾಜ ಚಿಂಚಲಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಎಸ್. ಸಂಕನೂರ, ಈಶ್ವರ ಮೆಡ್ಲೇರಿ, ಗಿರೀಶ ನೇಕಾರ, ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.
ಹರ್ಲಾಪುರ ಸಾಂಬಯ್ಯ ಹಿರೇಮಠ ತಂಡದವರು ನಾಡಗೀತೆ ಮತ್ತು ರೈತಗೀತೆಗಳನ್ನು ಪ್ರಸ್ತುತಪಡಿಸಿದರು. ಎನ್ಎಸ್ಎಸ್, ಎನ್ಸಿಸಿ, ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು, ವಿವಿಧ ಶಾಲಾ-ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಿಎಸ್ಐ ನಾಗರಾಜ ಗಡಾದ, ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕರ ಮೌಲ್ಯಗಳು, ಸಾಮಾಜಿಕ, ಆರ್ಥಿಕ, ನಂಬಿಕೆ ಮತ್ತು ಶ್ರದ್ಧೆ, ಪೂಜಿಸುವ ಹಕ್ಕು ಮತ್ತು ಮೂಲಭೂತ ಹಕ್ಕುಗಳ ಬಗ್ಗೆ ಮಾಹಿತಿ ನೀಡಲಾಗಿದೆ. 22 ಸಮಿತಿಗಳಿಂದ ಸಂವಿಧಾನ ರಚನೆಯಾಗಿದೆ. ಅದರಲ್ಲಿ ಕರಡು ಸಮಿತಿ ಮುಖ್ಯವಾಗಿತ್ತು. ಅದರ ಅಧ್ಯಕ್ಷರು ಬಾಬಾಸಾಹೇಬ ಅಂಬೇಡ್ಕರ್ ಆಗಿದ್ದರು. ಅವರು ನೀಡಿದ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ ಎಂದು ಹೇಳಿದರು.



