ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ದಾವಣಗೆರೆ ಲೋಕಸಭಾ ಕ್ಷೇತ್ರ ಕೇವಲ ಎರಡು ಕುಟುಂಬಗಳ ಸ್ವತ್ತಾಗಿದೆ. ಇಲ್ಲಿ ಹಿಂದುಳಿದ ವರ್ಗದ ಜನರ ಧ್ವನಿಗೆ ಬೆಲೆ ಇಲ್ಲದಂತಾಗಿದೆ. ಇದರ ವಿರುದ್ಧ ನಾನು ಸ್ವಾಭಿಮಾನದ ಹೋರಾಟಕ್ಕೆ ಮುಂದಾಗಿದ್ದೇನೆ ಎಂದು ಕಾಂಗ್ರೆಸ್ ಟಿಕೆಟ್ ವಂಚಿತ ಜಿ.ಬಿ. ವಿನಯ್ಕುಮಾರ್ ಹೇಳಿದರು.
ತಾಲೂಕಿನ ಹಲವಾಗಲು, ಅರಸನಾಳು, ತೋಗರಿಕಟ್ಟೆ, ಅರೇಮಜ್ಜಿಗೇರಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಇತ್ತೀಚೆಗೆ ಭೇಟಿ ನೀಡಿ, ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಮತದಾರರ ಅಭಿಪ್ರಾಯ ಸಂಗ್ರಹಿಸಿ ಮಾತನಾಡಿದರು.
ಸಾಮಾಜಿಕ ಕಳಕಳಿ ಇರುವ ನನ್ನಂತಹ ಯುವ ನಾಯಕರ ಅವಶ್ಯಕತೆ ಈ ಕ್ಷೇತ್ರಕ್ಕಿದೆ. ಆದರೆ, ರಾಜಕೀಯ ವ್ಯವಸ್ಥೆಯಲ್ಲಿ ನಮ್ಮಂತ ಶೋಷಿತ, ಹಿಂದುಳಿದ ಸಮುದಾಯಗಳ ನಾಯಕರು ಆವಕಾಶದಿಂದ ವಂಚಿತರಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಸ್ವಾಭಿಮಾನಿಗಳು. ಇನ್ನೊಬ್ಬರಿಗೆ ಹೆದರಿ ಜೀವನ ಮಾಡುವುದು ಬದುಕಿದ್ದು ಸತ್ತಂತೆ. ಆದ್ದರಿಂದ ನಮ್ಮ ಸ್ವಾಭಿಮಾನಕ್ಕೆ ಎಂದು ಕೂಡ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕು. ನಾನು ಸ್ವಾಭಿಮಾನದ ಹೋರಾಟ ಮಾಡಲು ಮುಂದಾಗಿದ್ದು, ನನ್ನೊಂದಿಗೆ ಕೈ ಜೋಡಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಹಲವಾಗಲು ನಾಗರಾಜ, ಬೀರಪ್ಪ, ಸುನೀಲ್, ಮಜ್ಜಿಗೇರಿ ಗುಡ್ಡಪ್ಪ, ಕರಿಯಪ್ಪ, ಹಾಲೇಶ, ಬಸವರಾಜ, ಹನುಮಂತಪ್ಪ, ಕರಿಯಲ್ಲಪ್ಪ, ರಾಮಪ್ಪ, ದಿಳ್ಯೇಪ್ಪ, ಶರತ್ಕುಮಾರ್, ರಿಯಾಜ್ ಅಹ್ಮದ್, ಚನ್ನವೀರ, ನೀಲಪ್ಪ ರಂಗಸ್ವಾಮಿ ಸೇರಿದಂತೆ ಇತರರು ಇದ್ದರು.