ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಮುಸ್ಲಿಂ ಸಮುದಾಯದ ಕೋಟ್ಯಾಂತರ ಜನರ ವಿರೋಧದ ನಡುವೆಯೂ ನಮ್ಮ ದೇಶದ ಸಂವಿಧಾನದ ವಿರುದ್ಧವಾಗಿ ಕರಾಳ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವುದನ್ನು ನಾವು ಖಂಡಿಸುತ್ತೇವೆ. ಒಂದು ಸಮುದಾಯವನ್ನು ಹತ್ತಿಕ್ಕುವ ಉದ್ದೇಶದಿಂದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದು ಬಲವಂತವಾಗಿ ಹೇರಲಾಗುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ದೇಶದ ಮುಸ್ಲಿಂ ಸಮುದಾಯಕ್ಕೆ ಮಾರಕವಾಗಿರುವ ಈ ಕಾಯ್ದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಅಂಜುಮನ್-ಎ-ಇಸ್ಲಾಂ ಸಂಸ್ಥೆ ನೇತೃತ್ವದಲ್ಲಿ ಎಪ್ರಿಲ್ 19ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಮಿಯತ್-ಎ-ಉಲ್ಲಮಾ ಗದಗ ಜಿಲ್ಲಾ ಘಟಕದ ಕಾರ್ಯದರ್ಶಿ ಮೌಲಾನಾ ಮುಫ್ತಿಆರೀಫ ಕಾಶ್ಮಿ ಧಾರವಾಡ ಹೇಳಿದರು.
ಅವರು ಗದಗ-ಬೆಟಗೇರಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ನೇತೃತ್ವದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ವಕ್ಫ್ ಆಸ್ತಿಯು ದೇಶದಲ್ಲಿರುವ ನಮ್ಮ ಪ್ರಾಥನಾ ಸ್ಥಳಗಳಿಗೆ, ಧಾರ್ಮಿಕ ಕ್ಷೇತ್ರಗಳಲ್ಲಿ ಧರ್ಮದ ಆಚರಣೆಗಳನ್ನು ಮಾಡಲು ದಾನಿಗಳು ತಮ್ಮ ಸ್ವಂತ ಆಸ್ತಿಯನ್ನು ದಾನ ಮಾಡಿರುವುದಾಗಿದೆ. ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಮಾಡುವ ಮೂಲಕ ನಮ್ಮ ಧಾರ್ಮಿಕ ಆಸ್ತಿಗಳನ್ನು ಕಿತ್ತುಕೊಳ್ಳುವದು ಕೇಂದ್ರ ಸರ್ಕಾರದ ಹುನ್ನಾರವಾಗಿದೆ. ಇಂತಹ ಜನವಿರೋಧಿ ಕರಾಳ ಕಾಯ್ದೆಯನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದರು.
ಅಂಜುಮನ್ ಸಂಸ್ಥೆ ಕಾರ್ಯದರ್ಶಿ ಇಮ್ತಿಯಾಜ ಆರ್.ಮಾನ್ವಿ ಮಾತನಾಡಿ, ಕೇಂದ್ರ ಸರ್ಕಾರ ಸಂವಿಧಾನದ ಆಶಯವನ್ನು ಗಾಳಿಗೆ ತೂರಿ ಕೇವಲ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಈ ಕಾಯ್ದೆಯಿಂದ ದೇಶದ ಮುಸ್ಲಿಂ ಸಮಾಜದ ಅಭಿವೃದ್ಧಿ ಮಾಡುತ್ತೇವೆ ಎಂದು ಎಂದು ಸುಳ್ಳು ಹೇಳುತ್ತಿರುವ ಪ್ರಧಾನ ಮಂತ್ರಿಗಳು ದೇಶದಲ್ಲಿರುವ ವಕ್ಫ್ ಆಸ್ತಿಗಳನ್ನು ಈ ಕಾಯ್ದೆಯ ಮುಖಾಂತರ ಕಬಳಿಸಿ ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುವ ಕೆಟ್ಟ ಉದ್ದೇಶ ಹೊಂದಿದಂತಿದೆ ಎಂದರು.
ಅಂಜುಮನ್-ಎ-ಇಸ್ಲಾಂ ಸಂಸ್ಥೆ ಅಧ್ಯಕ್ಷ ಮಹ್ಮದಯುಸುಫ ನಮಾಜಿ, ಸಮಾಜದ ಮುಖಂಡರಾದ ಸೈಯದಖಾಲೀದ ಕೊಪ್ಪಳ, ಎಂ.ಬಿ. ನದಾಫ್ ವಕೀಲರು ಮಾತನಾಡಿ, ಹೋರಾಟದಲ್ಲಿ ಗದಗ-ಬೆಟಗೇರಿ ಎಲ್ಲಾ ಜಮಾತಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸರ್ವ ಸದಸ್ಯರು, ಸಮಾಜದ ಹಿರಿಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಅಂಜುಮನ ಸಂಸ್ಥೆ ಉಪಾಧ್ಯಕ್ಷ ಬಾಬಾಜಾನ ಬಳಗಾನೂರ, ಜೂನಸಾಬ ಉಮಚಗಿ, ಎಂ.ಎಂ. ಮಾಳೆಕೊಪ್ಪ, ರಫೀಕ ಜಮಾಲಖಾನವರ, ಉಮರಫಾರುಖ ಹುಬ್ಬಳ್ಳಿ, ಅನ್ವರ ಶಿರಹಟ್ಟಿ, ಮಹ್ಮಮದಹನೀಫ ಶಾಲಗಾರ, ನಿಜಾಮುದ್ದಿನ ಕಾಟಾಪೂರ ಮುಂತಾದವರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಸಂವಿಧಾನ ವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ, ಪ್ರವಾದಿ ಪೈಗಂಬರರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಕೋಮುವಾದಿ ಬಸನಗೌಡ ಪಾಟೀಲ ಯತ್ನಾಳರ ಮೇಲೆ ರಾಜ್ಯದ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಪ್ರಿಲ್ 19ರಂದು 11 ಗಂಟೆಗೆ ಮುಳಗುಂದ ನಾಕಾದಲ್ಲಿರುವ ಶಾಹಿ ಈದ್ಗಾ ಮೈದಾನದಿಂದ ರ್ಯಾಲಿಯನ್ನು ಪ್ರಾರಂಭಿಸಿ ಟಿಪ್ಪುಸುಲ್ತಾನ ಸರ್ಕಲ್ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ನೀಡಿ ಆಗ್ರಹಿಸಲಾಗುವುದೆಂದು ಇಮ್ತಿಯಾಜ ಆರ್.ಮಾನ್ವಿ ಹೇಳಿದರು.
( ಬಾಬಾಜಾನ ಬಳಗಾನೂರ )
ಮೋನಂ:9742518799