ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಮನುಷ್ಯತ್ವವಿಲ್ಲದ ಉಗ್ರರನ್ನು ಸದೆಬಡಿಯುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಡೆ ಹಾಗೂ ಭಾರತೀಯ ಸೇನೆ ಕಾರ್ಯಾಚರಣೆ ಹೆಮ್ಮೆ ಪಡುವಂತಿದ್ದು, ಅವರೆಲ್ಲರೂ ಅಭಿನಂದನಾರ್ಹರು ಎಂದು ಸಭಾಪತಿ ಬಸವರಾಜ ಹೊರಟ್ಟಿಯವರು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಆಪರೇಷನ್ ಸಿಂದೂರ’ ಹೆಸರಿನಲ್ಲಿ ನಮ್ಮ ದೇಶದ ಸೈನಿಕರು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ಧ್ವಂಸಗೊಳಿಸಿ ಭಾರತದ ಅಗಾಧ ಶಕ್ತಿಯನ್ನು ಜಗತ್ತಿಗೆ ತೋರಿಸುವ ಮೂಲಕ ಭಾರತೀಯರನ್ನು ಕೆಣಕಿದರೆ ಇದೇ ಪ್ರತ್ಯುತ್ತರ ಎಂಬ ಸಂದೇಶವನ್ನು ಕಳಿಸಿದ್ದಾರೆ.
ಭಾರತೀಯ ಸೇನಾಪಡೆಗಳ ಬಗ್ಗೆ ನಮಗೆ ಹೆಮ್ಮೆಯಾಗುತ್ತಿದೆ. ಅಲ್ಲದೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡಾ ತಮ್ಮ ಚಾಣಾಕ್ಷ ನಡೆಯ ಮೂಲಕ ದೇಶದ ಸಂರಕ್ಷಣೆಯ ವಿಷಯದಲ್ಲಿ ಯಾವುದಕ್ಕೂ ರಾಜಿಯಾಗದೆ ಜಗತ್ತಿನ ಎಲ್ಲ ದೇಶಗಳ ಪ್ರೀತಿ-ವಿಶ್ವಾಸವನ್ನು ಗಳಿಸಿಕೊಳ್ಳುವುದರ ಮೂಲಕ ರಾಜತಾಂತ್ರಿಕ ಹೆಜ್ಜೆಗಳನ್ನು ಇಡುತ್ತಿರುವುದು ಶ್ಲಾಘನೀಯ.
ದೇಶದ ವಿಷಯ ಬಂದಾಗ ಭಾರತೀಯರೆಲ್ಲರೂ ಪಕ್ಷಭೇದ ಮರೆತು ಒಂದೇ ಆದದ್ದು ಇಡೀ ಜಗತ್ತು ನಮ್ಮತ್ತ ತಿರುಗಿ ನೋಡುವಂತಾಗಿದೆ. ಇದು ಕೂಡ ಅಭಿಮಾನದ ಸಂಗತಿ. ಪಲ್ಗಾಮ್ನಲ್ಲಿ ಅಮಾಯಕ ಭಾರತೀಯರ ಮೇಲೆ ದಾಳಿ ಮಾಡಿದ್ದ ಪಾಕ್ ಪೋಷಿತ ಉಗ್ರರು ಇನ್ನೆಂದೂ ಭಾರತದತ್ತ ತಿರುಗಿ ನೋಡದಂತೆ ಮಾಡಿದ ಪ್ರಧಾನಮಂತ್ರಿಗಳು ಹಾಗೂ ಅವರ ತಂಡಕ್ಕೆ ಮತ್ತು ಎಲ್ಲ ಸೇನಾಪಡೆಗಳಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.