ವಿಜಯಸಾಕ್ಷಿ ಸುದ್ದಿ, ಗದಗ: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ಮಹತ್ವದ್ದಗಿದೆ. ಆಕೆ ತಾಯಿಯಾಗಿ, ತಂಗಿಯಾಗಿ, ಪತ್ನಿಯಾಗಿ ಬಾಳನ್ನು ಬೆಳಗಿಸುತ್ತಾಳೆ ಎಂದು ಹರ್ಲಾಪೂರ ಕೆನರಾ ಬ್ಯಾಂಕ್ ಮ್ಯಾನೇಜರ್ ಜಿ.ಎಸ್. ಅಳವುಂಡಿ ಹೇಳಿದರು.
ಇಲ್ಲಿನ ತಿಮ್ಮಾಪೂರ ಗ್ರಾಮದ ಶ್ರೀ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಗದಗ ಹಾಗೂ ಗ್ರಾಮ ಮಟ್ಟದ ಸಂಜೀವಿನಿ ಒಕ್ಕೂಟ ಯೋಜನೆಯ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ವೈಯಕ್ತಿಕವಾಗಿ ಮಹಿಳೆ ಮನೆಯ ಜವಾಬ್ದಾರಿಯನ್ನು ಹೊರುವ ಜೊತೆಗೆ ಒಬ್ಬ ಶಿಕ್ಷಕಿಯಾಗಿ, ಇಂಜಿನಿಯರ್ ಆಗಿ, ಪೈಲೆಟ್ ಆಗಿಯೂ ಉತ್ತಮವಾಗಿ ಕೆಲಸ ಮಾಡಬಲ್ಲಳು. ಸಮಾಜದ ಕಟ್ಟುಪಾಡುಗಳ ನಡುವೆಯೂ ಮಹಿಳೆ ಸಾಧನೆಯ ಶಿಖರವನ್ನು ಮುಟ್ಟಿದಾಳೆ ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಮಂಡೇಶ ಮೇಲಮನವರ ಮಾತನಾಡಿ, ಮಹಿಳಾ ಸಂಜೀವಿನಿ ಸಂಘಗಳು ಸರ್ಕಾರದಿಂದ ಬರುವ ಹಲವಾರು ಯೋಜನೆಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸ್ವಯಂ ಉದ್ಯೋಗ ಕೈಗೊಳ್ಳಲು ನಮ್ಮ ಇಲಾಖೆಯಿಂದ ಅನೇಕ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಗ್ರಾ.ಪಂ ಪಿಡಿಒ ಶಿವಲೀಲಾ ಗೊಳಪ್ಪನವರ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಂಜೀವಿನಿ ಮಹಿಳಾ ಸಂಘದ ಅಧ್ಯಕ್ಷರಾದ ಅನ್ನಪೂರ್ಣ ಮದರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕ ಸಿದ್ದೇಶ ಸತ್ಯಣ್ಣವರ, ಸಮೂಹ ಮೇಲ್ವಿಚಾರಕ ಬಸಪ್ಪ ಗಡಾದ, ಪಶು ವೈದ್ಯರಾದ ಅಭಿಷೇಕ ಹೊಳೆಗೆ, ಸೀತಾ ಜೋಗಿನ, ಶಾಂತವ್ವ ಹಂಚಿನಾಳ, ಸಾವಿತ್ರಿ ಕೊಪ್ಪದ, ಶಾಂತವ್ವ ಇದ್ಲಿ, ಪ್ರೇಮವ್ವ ಗಂಗರಾತ್ರಿ, ಹನುಮವ್ವ ತಳವಾರ ಸ್ಭೆರಿದಂತೆ ಒಕ್ಕೂಟದ ಪದಾಧಿಕಾರಿಗಳು, ಸ್ವ-ಸಹಾಯ ಸಂಘದ ಮಹಿಳೆಯರು ಪಾಲ್ಗೊಂಡಿದ್ದರು.
ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಬಾಬರಿ ಮಾತನಾಡಿ, ಮಹಿಳೆಯರು ಸಾಮಾಜಿಕ, ಶೈಕ್ಷಣಿಕ, ಕೃಷಿ, ತಂತ್ರಜ್ಞಾನ, ಸಂಗೀತ, ರಾಜಕೀಯ ಸಾಂಸ್ಕೃತಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪುರುಷರಿಗೆ ಸಮಾನವಾಗಿ ನಿಂತಿದ್ದಾಳೆ ಎಂದು ಹೇಳಿದರು.