ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಎರಡು ಕೋಟಿ ರೂಪಾಯಿಗಳ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ನರೇಗಲ್ಲ ಬಸ್‌ನಿಲ್ದಾಣ-ಶ್ರೀ ಅನ್ನದಾನೇಶ್ವರ ಕಾಲೇಜಿನ ಜೋಡು ರಸ್ತೆ ಗುಣಮಟ್ಟದಿಂದ ಕೂಡಿರಬೇಕು. ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

Advertisement

ಪಟ್ಟಣದ ರೈತ ಸಂಪರ್ಕ ಕೇಂದ್ರದ ಬಳಿ ಉದ್ದೇಶಿತ ಜೋಡು ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಜೋಡು ರಸ್ತೆಯೊಂದಿಗೆ ಇದಕ್ಕೆ ವಿದ್ಯುತ್ ದೀಪಗಳನ್ನೂ ಅಳವಡಿಸಿ ಎರಡನ್ನೂ ಸೇರಿಸಿ ಒಮ್ಮೆಗೆ ಉದ್ಘಾಟನೆ ಮಾಡುವ ಯೋಜನೆ ಇದೆ. ಪಟ್ಟಣದ ಅಭಿವೃದ್ಧಿಯ ವಿಚಾರದಿಂದ ಪ.ಪಂ ಸದಸ್ಯರು ನಮ್ಮೊಂದಿಗೆ ಕೈ ಜೋಡಿಸಿದ್ದು, ಅಭಿವೃದ್ಧಿಯ ಪರ್ವಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರು.

ತಾಲೂಕಿನಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಈಗಾಗಲೇ ಒಪ್ಪಿಗೆ ದೊರೆತಿದ್ದು, 42 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಕಾಮಗಾರಿನ್ನು ಶೀಘ್ರದಲ್ಲಿಯೆ ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಿಂದ ರೈತಾಪಿ ಜನರಿಗೆ, ಸಾರ್ವಜನಿಕರಿಗೆ ಅನುಕೂಲವಾಗಲಿದೆ. ನರೇಗಲ್ಲ ಶೈಕ್ಷಣಿಕ ಕ್ಷೇತ್ರ. ಇದಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ಒದಗಿಸಿಕೊಡಲು ತಾವು ಸಿದ್ಧ ಎಂದರು.

ಈ ಸಾರೆ ತಾಲೂಕಿನಲ್ಲಿ 1000 ಕೃಷಿ ಹೊಂಡಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಗ್ರಾಮೀಣ ರಸ್ತೆಗಳ ಸುಧಾರಣೆಯನ್ನು ಅಭಿವೃದ್ಧಿ ಪಥ ಯೋಜನೆಯಲ್ಲಿ ಕೈಗೆತ್ತಿಕೊಂಡು 50 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗುವುದು. ನರೇಗಲ್ಲ-ತೊಂಡಿಹಾಳ ರಸ್ತೆಯನ್ನು ಸಹ ಇದೇ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ನಗರೋತ್ಥಾನ ಯೋಜನೆ ಅಡಿಯಲ್ಲಿ ನರೇಗಲ್ಲ ಪಟ್ಟಣಕ್ಕೆ 10 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗುತ್ತಿದ್ದು, ಪಟ್ಟಣ ಅಭಿವೃದ್ಧಿ ಪಥದಲ್ಲಿ ಸಾಗಲಿದೆ. ತಾಲೂಕಾ ಸ್ಥಳ ಗಜೇಂದ್ರಗಡದಲ್ಲಿ ನ್ಯಾಯಾಲಯ ಕಟ್ಟಡಕ್ಕಾಗಿ 10 ಕೋಟಿ ರೂ, ತಾಲೂಕು ಕಚೇರಿಗಾಗಿ, ಕ್ರೀಡಾಂಗಣಕ್ಕಾಗಿ ಶೀಘ್ರವೇ ಅನುದಾನ ಬಿಡುಗಡೆಯಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕರು ಕೋಚಲಾಪುರದ ಬಳಿಯಲ್ಲಿನ ಭೂಮಿಯಲ್ಲಿ ರೈತ ಸಂಪರ್ಕ ಕೇಂದ್ರದ ಗೋದಾಮು ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ, ಪ.ಪಂ ಸದಸ್ಯರು, ಶಹರ ಘಟಕದ ಅಧ್ಯಕ್ಷ ಶಿವನಗೌಡ ಪಾಟೀಲ, ಡಾ. ಕೆ.ಬಿ. ಧನ್ನೂರ, ವಿ.ಆರ್. ಗುಡಿಸಾಗರ, ಡಾ. ಆರ್.ಬಿ. ಬಸವರಡ್ಡೇರ, ಶರಣಪ್ಪ ಬೆಟಗೇರಿ, ವಿ.ಬಿ. ಸೋಮಕಟ್ಟಿಮಠ, ಯೂಸೂಫ್ ಇಟಗಿ, ಬಸವರಾಜ ಗಾಣಿಗೇರ, ಹನಮಂತ ಅಬ್ಬಿಗೇರಿ, ಮೈಲಾರಪ್ಪ ಚಳ್ಳಮರದ, ಅಲ್ಲಾಬಕ್ಷಿ ನದಾಫ್, ಶೇಖಪ್ಪ ಜುಟ್ಟಲ, ಎಇಇ ಬಲವಂತಪ್ಪ ನಾಯಕರ, ಕೃಷಿ ಅಧಿಕಾರಿ ರವೀಂದ್ರಗೌಡ ಪಾಟೀಲ, ನಿಂಗನಗೌಡ ಲಕ್ಕನಗೌಡ್ರ, ಎ.ಸಿ. ಪಾಟೀಲ ಮತ್ತಿತರರಿದ್ದರು. ಎಂ.ಎಸ್. ದಢೇಸೂರಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯಾಧಿಕಾರಿ ನಿಡಶೇಶಿ ವಂದಿಸಿದರು.

ಈಗ ನಡೆದಿರುವ ಅಧಿವೇಶನ ಮುಗಿದ ತಕ್ಷಣವೆ ಅರ್ಹ ಬಡ ಫಲಾನುಭವಿಗಳಿಗೆ ನಿವೇಶನ ಹಂಚುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ತಾಲೂಕಿನ ರೋಣ, ಗಜೇಂದ್ರಗಡ ಮತ್ತು ನರೇಗಲ್ಲದಲ್ಲಿ ಸಿದ್ಧವಾಗಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಶೀಘ್ರವೇ ಪ್ರಾರಂಭಗೊಳಿಸಲಾಗುವದು. ಅಲ್ಲದೆ, ಪಟ್ಟಣದ ಸರಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಒದಗಿಸಿಕೊಡಲು ಪ್ರಯತ್ನಿಸಲಾಗುವುದು.

– ಜಿ.ಎಸ್. ಪಾಟೀಲ.

ಶಾಸಕರು, ರೋಣ.


Spread the love

LEAVE A REPLY

Please enter your comment!
Please enter your name here