ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ತಮ್ಮ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಲು ಯುವಕರು ಸಹಕಾರ ಸಂಘವನ್ನು ಸ್ಥಾಪಿಸಿ, ಕೇವಲ ಒಂದು ವರ್ಷದಲ್ಲಿ 1.5 ಕೋಟಿ ರೂಗಳಷ್ಟು ವ್ಯವಹಾರ ನಡೆಸಿ, ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿರುವುದು ಶ್ಲಾಘನೀಯ ಎಂದು ಹರ್ಲಾಪೂರ ಕೊಟ್ಟೂರೇಶ್ವರ ಮಠದ ಡಾ. ಕೊಟ್ಟೂರೇಶ್ವರ ಸ್ವಾಮೀಜಿ ಹೇಳಿದರು.
ಇಲ್ಲಿಯ ಲಕ್ಷ್ಮೀ ನಾರಾಯಣ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಸ್ಬುಕ್ ನಮೂದು ಮಾಡುವ ಯಂತ್ರವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡುತ್ತಿದ್ದರು.
ಇಂದು ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಕೆಲವು ಸೋಮಾರಿ ಯುವಕರು ಅವುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಾಣುತ್ತದೆ. ಆದರೆ ಇಲ್ಲಿಯ ಸಮಾನ ಮನಸ್ಕ ಯುವ ಸ್ನೇಹ ಬಳಗವು ತಮ್ಮ ಜಾತಿ ಬೇಧವನ್ನು ಮರೆತು ಸಣ್ಣ ಬ್ಯಾಂಕಿನ ರೂಪದಲ್ಲಿ ಪತ್ತಿನ ಸೌಹಾರ್ದ ಸಹಕಾರಿ ಸಂಘವನ್ನು ಸ್ಥಾಪಿಸಿ ಕೆಲ ಯುವಕರಿಗೆ ಉದ್ಯೋಗವನ್ನೂ ನೀಡಿದ್ದು ಸ್ತುತ್ಯಾರ್ಹವಾಗಿದೆ. ಇದು ಹೀಗೆಯೇ ಮುಂದುವರೆದು ಇನ್ನೂ ಹಲವು ಶಾಖೆಗಳನ್ನು ತೆರೆಯುವಂತಾಗಲಿ ಎಂದು ಹಾರೈಸಿದರು.
ಸಂಘದ ಅಧ್ಯಕ್ಷ ಬಸವರಾಜ ಮುಳ್ಳಾಳ ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ಶಂಕ್ರಯ್ಯ ಹಿರೇಮಠ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಬಿ. ಕಲಕೇರಿ, ತಾ.ಪಂ ಮಾಜಿ ಅದ್ಯಕ್ಷ ಎಂ.ಎನ್. ಉಮಚಗಿ, ತಾ.ಪಂ ಮಾಜಿ ಸದಸ್ಯ ಮಹೇಶ ಮುಸ್ಕಿನಬಾವಿ, ಬಿ.ಜೆ.ಪಿ ಜಿಲ್ಲಾ ವಕ್ತಾರ ದತ್ತಾತ್ರೇಯ ಜೋಶಿ, ವೀರಯ್ಯ ಗಂಧದ, ಅಶೋಕ ಬೂದಿಹಾಳ, ಗ್ರಾ.ಪಂ ಸದಸ್ಯರಾದ ರುದ್ರಪ್ಪ ಮುಸ್ಕಿನಭಾವಿ, ಶಿವಪ್ಪ ಬಳಿಗೇರ, ವಿರೂಪಾಕ್ಷಪ್ಪ ಬೆಟಗೇರಿ, ಕಳಕೇಶ ಟೆಂಗಿನಕಾಯಿ, ಮೃತ್ಯಂಜಯ ನಡುವಿನಮಠ, ಬಸವರಾಜ ಕವಲೂರ, ವಿನಾಯಕ ಡಿಗ್ಗಾವಿ, ವೀರಣ್ಣ ಅರಹುಣಶಿ, ಉಪಸ್ಥಿತರಿದ್ದರು. ಪ್ರವೀಣ ಕಲಾಲ ಸ್ವಾಗತಿಸಿದರು. ವೀರಣ್ಣ ಮೂಡಲತೋಟ ನಿರೂಪಿಸಿದರು. ದೇವರಾಜ ಕಮ್ಮಾರ ವಂದಿಸಿದರು.