ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದಲ್ಲಿ ಮಾ. 30ರಂದು ಬಯಲು ಕುಸ್ತಿ, ಮಾ. 31ರಂದು ಥೇಟರ್ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಶ್ರೀ ಮಾರುತೇಶ್ವರ ವ್ಯಾಯಾಮ ಶಾಲೆಯ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುಗಾದಿ ಹಬ್ಬದ ಅಂಗವಾಗಿ ಶ್ರೀ ಮಾರುತೇಶ್ವರ ಹೊಂಡ ತುಳುಕಿಸುವ ಕಾರ್ಯಕ್ರಮ, ಶ್ರೀ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವ ಹಾಗೂ ಪೈಲ್ವಾನ್ ದಿ.ಮೂಕಪ್ಪಜ್ಜ ಸಂಕನೂರ ಅವರ 17ನೇ ವರ್ಷದ ಪುಣ್ಯಾರಾಧನೆಯ ನಿಮಿತ್ತ ಬಸ್ ನಿಲ್ದಾಣ ಹತ್ತಿರದ ತೋಟಪ್ಪನವರು ಕಡಗದ ಇವರ ಜಮೀನಿನಲ್ಲಿ ಸಂಜೆ 4ಕ್ಕೆ ಕುಸ್ತಿ ಪಂದ್ಯಾವಳಿಗಳು ಶಾಖಾ ಶಿವಯೋಗ ಮಂದಿರ ನಿಡಗುಂದಿ ಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿಯವರ ಅಮೃತ ಹಸ್ತದಿಂದ ಉದ್ಘಾಟನೆ ನೆರವೇರಲಿದೆ.
ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕುಸ್ತಿ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಗ್ರಾಮದ ಹಿರಿಯ ಕುಸ್ತಿಪಟುಗಳಾದ ಗಾಂಧೆಪ್ಪ ಕುರಿ, ಧರ್ಮಣ್ಣ ಆರೇರ, ಯಲ್ಲಪ್ಪ ಮಡಿವಾಳರ ನಿರ್ಣಾಯಕರಾಗಿ ಆಗಮಿಸಲಿದ್ದಾರೆ. ಪಂದ್ಯಾವಳಿಯಲ್ಲಿ ಕುಸ್ತಿಪಟುಗಳಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುವುದು. ಪರಸ್ಥಳದ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಇರುತ್ತದೆ.
ಕುಸ್ತಿಯ ತವರೂರು ಎಂಬ ಖ್ಯಾತಿಗೆ ಹೆಸರಾದ ಜಕ್ಕಲಿ ಗ್ರಾಮದಲ್ಲಿ ಸರಿಸುಮಾರು 80 ವರ್ಷಗಳಿಂದ ಇಲ್ಲಿಯವರೆಗೆ ದೇಸೀ ಆಟವಾದ ಕುಸ್ತಿಯನ್ನು ಆರಾಧಿಸುತ್ತಾ, ಆಡುತ್ತಾ ಅದನ್ನು ಬೆಳಸುವುದರ ಜೊತೆಗೆ ಮುಂದಿನ ಯುವ ಜನಾಂಗಕ್ಕೆ ಹಿರಿಯರು ಅದನ್ನು ಕಾಣಿಕೆಯಾಗಿ ನೀಡುತ್ತ ಬಂದಿದ್ದಾರೆ. ಗ್ರಾಮದಲ್ಲಿ 1959ರಲ್ಲಿ ಒಂದು ಸುಸಜ್ಜಿತವಾದ ಗರಡಿ ವ್ಯಾಯಮ ಶಾಲೆ ಸ್ಥಾಪನೆಯಾಗಿದ್ದು, ಅದು ಗ್ರಾಮದಲ್ಲಿ ಅಷ್ಟೇ ಅಲ್ಲದೆ ಅಕ್ಕ ಪಕ್ಕದ ಊರುಗಳಲ್ಲಿಯ ಕುಸ್ತಿಪಟುಗಳು ಇಲ್ಲಿಂದಲ್ಲೇ ತಾಲೀಮ್ಗಳನ್ನು ನಡೆಸಿ ಸಿದ್ಧರಾಗುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಶೇಖರ ಯಾವಗಲ್ಲ-8095126277, ಸಂಗಮೇಶ ಮೆಣಸಗಿ-9480123603 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಗ್ರಾಮದ ಯುವಕರನ್ನು ಆಕರ್ಷಿಸಿ ಶಕ್ತಿ ಮತ್ತು ಯುಕ್ತಿಯ ಪ್ರತೀಕವಾದ ಕುಸ್ತಿ ಕ್ರೀಡೆಗೆ ಹಿರಿಯರು ಹಿಂದಿನಿಂದಲೂ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಕುಸ್ತಿ ಅಂದಿನ ಮನರಂಜನಾ ಕ್ರೀಡೆಯೊಂದಿಗೆ ಶಕ್ತಿ ಪ್ರದರ್ಶನದ ಕಲೆಯಾಗಿತ್ತು. ಆಗ ಅಲ್ಲಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಖಾಡಾಗಳು ಕಂಡು ಬರುತ್ತಿದ್ದವು. ಜಕ್ಕಲಿ ಗ್ರಾಮದಲ್ಲಿ ಹೆಚ್ಚಿನ ಪ್ರಸಿದ್ಧ ಪೈಲವಾನರು ಇರುವದರಿಂದ ಕುಸ್ತಿಯ ತವರೂರಾಗಿ ಅದು ಇಂದಿಗೂ ಮುಂದುವರೆದಿದೆ. ಕುಸ್ತಿಯನ್ನು ಉಳಿಸಿ ಬೆಳಸುವ ಉದ್ದೇಶದೊಂದಿಗೆ ಪ್ರತಿವರ್ಷ ಇಲ್ಲಿಯ ಶ್ರೀ ಮಾರುತಿ ಗರಡಿ ವ್ಯಾಯಾಮ ಶಾಲೆಯ ಯುವಕರು ಟೊಂಕಕಟ್ಟಿ ನಿಂತಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣಿಕರ್ತರು ಪೈಲ್ವಾನ ದಿ. ಬಸಪ್ಪಜ್ಜ ಕೋರಿ ಹಾಗೂ ಹೆಸರುವಾಸಿ ಪ್ರಸಿದ್ಧ ಪೈಲವಾನ ದಿ. ಮೂಕಪ್ಪಜ್ಜ ಸಂಕನೂರರು.