ಗದಗ:- ಪೊಲೀಸರಿಗೆ ದೂರು ಕೊಡ್ತೀನಿ ಎಂದ ಯುವಕನಿಗೆ ಬಡ್ಡಿ ದಂಧೆಕೋರ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗ ನಗರದ ಕಳಸಾಪುರ ರಸ್ತೆಯ ಖಾಸಗಿ ಹೋಟೆಲ್ ಬಳಿ ಜರುಗಿದೆ.
ಇರಾನಿ ಕಾಲನಿ ನಿವಾಸಿ ಹರ್ಷವರ್ಧನ್ ಕಾಳೆ ಹಲ್ಲೆ ಮಾಡಿದ ಬಡ್ಡಿ ದಂಧೆಕೋರ ಎಂದು ಆರೋಪಿಸಲಾಗಿದೆ. ಕೆಎಚ್ ಪಾಟೀಲ ಬಡಾವಣೆ ನಿವಾಸಿ ಪ್ರೇಮ್ ಖೋಡೆ ಹಲ್ಲೆಗೊಳಗಾದ ಯುವಕ. ಈತ ಮುಳಗುಂದ ನಾಕಾದ ಅಂಗಡಿಯೊಂದರಲ್ಲಿ ಕೆಲಸ ಮಾಡ್ತಿದ್ದ. ಪ್ರೇಮ್ ಖೋಡೆ ಗೆ ಹರ್ಷವರ್ಧನ್ 40 ಸಾವಿರ ಸಾಲ ಕೊಟ್ಟಿದ್ದ. ಈ ಹಣಕ್ಕೆ ತಿಂಗಳಿಗೆ 4 ಸಾವಿರ ರೂಪಾಯಿಯಂತೆ ಹರ್ಷವರ್ಧನ್ ಬಡ್ಡಿ ಪಡೆಯುತ್ತಿದ್ದ.
ಆದರೆ ಕಳೆದ ಕೆಲ ದಿನದಿಂದ ಬಡ್ಡಿ ಕೊಡಲಾಗದೇ ಪ್ರೇಮ್ ಸಮಯಾವಕಾಶ ಕೇಳಿದ್ದ. ಅಲ್ಲದೇ ಬಡ್ಡಿಗಾಗಿ ಕಿರಿಕಿರಿ ಮಾಡಿದ್ರೆ ಎಸ್ ಪಿ ಕಚೇರಿಗೆ ಹೋಗೋದಾಗಿ ಎಚ್ಚರಿಕೆ ಕೊಟ್ಟಿದ್ದ. ಪ್ರೇಮ್ ಮಾತಿಗೆ ಸಿಟ್ಟಿಗೆದ್ದು, ಕೂತಿದ್ದ ಯುವಕನನ್ನ ಧರಧರನೆ ಎಳೆದು ಕಾರಲ್ಲಿ ಕರೆದುಕೊಂಡು ಹೋಗಿ ಕಳಸಾಪುರ ರಸ್ತೆಯ ಹೋಟೆಲ್ ಬಳಿ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಬಡ್ಡಿ ದಂಧೆಕೋರನ ಮೃಗೀಯ ವರ್ತನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ. ಘಟನೆಯಲ್ಲಿ ಪ್ರೇಮ್ ಕತ್ತು, ಮುಖ, ಬೆನ್ನಿಗೆ ಗಾಯಗಳಾಗಿವೆ. ಗಾಯಾಳು ಪ್ರೇಮ್ ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.



